ಬ್ಯಾಂಕಿಂಗ್ ಭದ್ರ; ಬ್ಯಾಂಕರ್ಗಳಿಗೆ ಅಭಯ ನೀಡಿದ ನಿರ್ಮಲಾ ಸೀತಾರಾಮನ್
13 ಪಿಎಸ್ ಬ್ಯಾಂಕ್ಗಳು ಲಾಭದ ಹಳಿಗೆ ಎನ್ಪಿಎ ಇಳಿಕೆ
Team Udayavani, Dec 29, 2019, 1:50 AM IST
ಹೊಸದಿಲ್ಲಿ: ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಿಹಿಸುದ್ದಿಯೊಂದನ್ನು ಹೇಳಿದ್ದಾರೆ. ಬ್ಯಾಂಕಿಂಗ್ ವಲಯ ಅನುಭವಿಸುತ್ತಿದ್ದ ಎನ್ಪಿಎ, ನಷ್ಟದ ಹಳಿಯಿಂದ ಈಗ ಲಾಭದ ಹಳಿಗೆ ಮರಳುತ್ತಿದ್ದು, ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕ ವಲಯದ ಬ್ಯಾಂಕ್ಗಳ ಮುಖ್ಯಸ್ಥ ರೊಂದಿಗೆ ಶನಿವಾರ ಸಭೆ ನಡೆಸಿದ ಅವರು, ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ಕೆಲವು ವರ್ಷಗಳಿಂದ ಸಾರ್ವಜನಿಕ ವಲಯದ ಬ್ಯಾಂಕ್ಗಳು ಅನುತ್ಪಾದಕ ಆಸ್ತಿಯ ಸಮಸ್ಯೆಯಿಂದಾಗಿ ನರಳುತ್ತಿದ್ದವು. ಆದರೆ ಪ್ರಸಕ್ತ ವಿತ್ತ ವರ್ಷದ ಮೊದಲಾರ್ಧದಲ್ಲಿ ಸಾರ್ವಜನಿಕ ವಲಯದ 13 ಬ್ಯಾಂಕ್ಗಳು ಲಾಭ ದಾಖಲಿಸಿವೆ ಎಂದು ಅವರು ಹೇಳಿದ್ದಾರೆ.
ಬ್ಯಾಂಕ್ಗಳ ಪರಿಸ್ಥಿತಿ ಸುಧಾರಣೆಗೆ ಕೇಂದ್ರ ಸರಕಾರ ತೆಗೆದುಕೊಂಡ ಹಲವಾರು ಕ್ರಮಗಳೇ ಕಾರಣ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಜತೆಗೆ 2018ರ ಮಾರ್ಚ್ನಲ್ಲಿ 8.96 ಲಕ್ಷ ಕೋಟಿ ರೂ. ಇದ್ದ ಅನುತ್ಪಾದಕ ಆಸ್ತಿಯ ಪ್ರಮಾಣ, 2019ರ ಸೆಪ್ಟಂಬರ್ಗೆ 7.27 ಲಕ್ಷ ಕೋಟಿ ರೂ.ಗಳಿಗೆ ಇಳಿಕೆಯಾಗಿದೆ. ಹೀಗಾಗಿ ಈ ಬ್ಯಾಂಕ್ಗಳ ಲಾಭದ ಪ್ರಮಾಣವೂ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.
ಈ ಮಧ್ಯೆ, ಬ್ಯಾಂಕರ್ಗಳು ಕೈಗೊಳ್ಳುವ ಪ್ರಾಮಾಣಿಕ ವಾಣಿಜ್ಯ ನಿರ್ಧಾರಗಳನ್ನು ಪ್ರಶ್ನೆ ಮಾಡುವುದಿಲ್ಲ ಎಂದು ಭರವಸೆ ನೀಡಿರುವ ವಿತ್ತ ಸಚಿವೆ, ತನಿಖಾ ಸಂಸ್ಥೆಗಳು ಕಿರುಕುಳ ನೀಡುತ್ತಿವೆ ಎಂಬ ಆರೋಪಗಳಿಗೆ ಸಂಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲು ಸರಕಾರ ನಿರ್ಧರಿಸಿದೆ ಎಂದಿದ್ದಾರೆ.
3 “ಸಿ’ಗಳ ಭಯ
ಬ್ಯಾಂಕ್ಗಳು 3 “ಸಿ’ಗಳ ಭಯದಿಂದಾಗಿ ಯಾವುದೇ ನಿರ್ಧಾರ ಕೈಗೊಳ್ಳಲೂ ಹೆದರುತ್ತಿದ್ದವು. ಸಿಬಿಐ(ಕೇಂದ್ರ ತನಿಖಾ ಸಂಸ್ಥೆ), ಸಿವಿಸಿ(ಕೇಂದ್ರ ವಿಚಕ್ಷಣಾ ಆಯೋಗ) ಮತ್ತು ಸಿಎಜಿ(ಭಾರತೀಯ ಮಹಾಲೇಖಪಾಲ) ಹೀಗೆ ಈ ಮೂರು “ಸಿ’ಗಳಿಂದಾಗಿ ಬ್ಯಾಂಕ್ಗಳಿಗೆ ಕಿರಿಕಿರಿ ಆಗುತ್ತಿದ್ದವು ಎನ್ನುವುದೂ ನಮಗೆ ಗೊತ್ತಿದೆ. ಹೀಗಾಗಿಯೇ ಸಿಬಿಐ ನಿರ್ದೇಶಕರ ಸಮ್ಮುಖದಲ್ಲೇ ಬ್ಯಾಂಕ್ಗಳೊಂದಿಗೆ ಸಮಾಲೋಚನೆ ನಡೆಸಿ, ಅವರಿಗಿರುವ ಆತಂಕವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಇದೇ ರೀತಿ, ಜಾರಿ ನಿರ್ದೇಶನಾಲಯ, ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಕಸ್ಟಮ್ಸ್ ಅಧಿಕಾರಿಗಳೊಂದಿಗೂ ಸಮಾಲೋಚನೆ ನಡೆಸಲು ತೀರ್ಮಾನಿಸಿದ್ದೇವೆ ಎಂದೂ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಜತೆಗೆ ಈ ತನಿಖಾ ಸಂಸ್ಥೆಗಳು ಬ್ಯಾಂಕ್ಗಳ ಮುಖ್ಯಸ್ಥರ ಅನುಮತಿ ಇಲ್ಲದೇ ಬ್ಯಾಂಕ್ ವ್ಯವಹಾರದಲ್ಲಿ ತಲೆ ಹಾಕುವುದೂ ಇಲ್ಲ ಎಂದು ಬ್ಯಾಂಕರ್ಗಳಿಗೆ ಅಭಯ ನೀಡಿದ್ದಾರೆ.
ಕೇಸುಗಳ ಇತ್ಯರ್ಥಕ್ಕೆ ಸಲಹೆ
ಅವ್ಯವಹಾರಗಳಿಗೆ ಸಂಬಂಧಿಸಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಬಾಕಿಯಿರುವ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸುವಂತೆಯೂ ಬ್ಯಾಂಕ್ಗಳಿಗೆ ಸಚಿವೆ ನಿರ್ಮಲಾ ಸೂಚಿಸಿದ್ದಾರೆ.
ಬ್ಯಾಂಕ್ ವಂಚನೆ 1.13 ಲಕ್ಷ ಕೋಟಿ ರೂ.ಗೆ ಹೆಚ್ಚಳ
ಪ್ರಸಕ್ತ ವಿತ್ತ ವರ್ಷದಲ್ಲಿ ಬ್ಯಾಂಕಿಂಗ್ ವಲಯ ದಲ್ಲಿ ಅಪಾರ ಪ್ರಮಾಣದ ವಂಚನೆ ಪ್ರಕರಣಗಳು ವರದಿಯಾಗಿವೆ. ಆರ್ಬಿಐ ವರದಿ ಪ್ರಕಾರ, ಅರ್ಧ ವರ್ಷದಲ್ಲೇ 1.13 ಲಕ್ಷ ಕೋಟಿ ರೂ. ನಷ್ಟು ಬ್ಯಾಂಕಿಂಗ್ ವಂಚನೆಯಾಗಿದೆ. 4,412 ಪ್ರಕರಣಗಳಲ್ಲಿ 1 ಲಕ್ಷ ಕೋಟಿ ರೂ. ವಂಚನೆ ಯಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 71,543 ಕೋಟಿ ರೂ.ನಷ್ಟು ಬ್ಯಾಂಕಿಂಗ್ ವಂಚನೆಯಾಗಿತ್ತು.
ಜ.1ರಿಂದ ಎಂಡಿಆರ್ ಶುಲ್ಕವಿಲ್ಲ
ಜನವರಿ 1ರಿಂದ ಕೆಲವು ಆಯ್ದ ಪಾವತಿ ಸೇವೆ ಗಳಿಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್(ಎಂಡಿಆರ್) ಶುಲ್ಕದಿಂದ ವಿನಾಯಿತಿ ಸಿಗಲಿದೆ. ಅದ ರಲ್ಲೂ ಯುಪಿಐ ಮತ್ತು ರುಪೇ ಕಾರ್ಡ್ ಗಳ ಮೂಲಕ ವಹಿವಾಟು ಮಾಡುವುದಕ್ಕೆ ಇದು ಅನ್ವಯ ವಾಗುವು ದಿಲ್ಲ ಎಂದಿದ್ದಾರೆ. ಜತೆಗೆ ಉಳಿದ ಯಾವ್ಯಾವ ಪಾವತಿ ಸೇವೆಗಳಿಗೆ ಇದು ಅನ್ವಯ ವಾಗಲಿದೆ ಎಂಬ ಬಗ್ಗೆ ಸದ್ಯದಲ್ಲೇ ಪ್ರಕಟಿಸ ಲಾಗುವುದು ಎಂದಿದ್ದಾರೆ. ಜುಲೈ ತಿಂಗಳಿ ನಲ್ಲಿ ಬಜೆಟ್ ಘೋಷಣೆ ವೇಳೆ ನಿರ್ಮಲಾ ಅವರು, ಡಿಜಿಟಲ್ ಪಾವತಿಗೆ ಉತ್ತೇಜನ ನೀಡುವ ಸಲು ವಾಗಿ ಎಂಡಿಆರ್ ಶುಲ್ಕವನ್ನು ಮನ್ನಾ ಮಾಡುವ ಪ್ರಸ್ತಾವ ಮಾಡಿದ್ದರು. ಭೀಮ್ ಯುಪಿಐ, ಯುಪಿಐ ಕ್ಯೂಆರ್ ಕೋಡ್, ಆಧಾರ್ ಪೇ, ಡೇಬಿಟ್ ಕಾರ್ಡ್, ನೆಫ್ಟ್, ಆರ್ಟಿಜಿಎಸ್ ಮೂಲಕ ವಹಿವಾಟು ಮಾಡಿದಲ್ಲಿ ಇದಕ್ಕೆ ಎಂಡಿಆರ್ ಶುಲ್ಕ ಅನ್ವಯ ವಾಗುವುದಿಲ್ಲ ಎಂದು ಆಗಲೇ ಹೇಳಿದ್ದರು.
ಇ-ಹರಾಜು ವೇದಿಕೆಗೆ ಚಾಲನೆ
ಬ್ಯಾಂಕ್ಗಳು ವಶಪಡಿಸಿಕೊಂಡಿರುವ ಆಸ್ತಿ-ಪಾಸ್ತಿಗಳ ಮಾರಾಟಕ್ಕಾಗಿ ಇ-ಹರಾಜು ವೇದಿಕೆ “ಇ-ವಿಕ್ರಯ’ಗೆ ನಿರ್ಮಲಾ ಸೀತಾರಾಮನ್ ಚಾಲನೆ ನೀಡಿದ್ದಾರೆ. ಈ ವೇದಿಕೆ ಮೂಲಕ ಆನ್ಲೈನ್ ಮೂಲಕ ಬ್ಯಾಂಕ್ಗಳು ತಾವು ವಶಪಡಿಸಿಕೊಂಡಿರುವ ಆಸ್ತಿಯನ್ನು ಮಾರಾಟ ಮಾಡಬಹುದಾಗಿದೆ. ಕಳೆದ ಮೂರು ಹಣಕಾಸು ವರ್ಷದಲ್ಲಿ ಬ್ಯಾಂಕ್ಗಳು ವಶಪಡಿಸಿಕೊಂಡಿರುವ ಇಂಥ ಆಸ್ತಿಗಳ ಪ್ರಮಾಣವೇ 2.3 ಲಕ್ಷ ಕೋಟಿ ರೂ.ನಷ್ಟಿದೆ. ಎಲ್ಲ ಪಿಎಸ್ಬಿಗಳು ಈ ವೆಬ್ಸೈಟ್ನಲ್ಲಿ ಆಸ್ತಿಗಳನ್ನು ಅಪ್ಲೋಡ್ ಮಾಡಬಹುದಾಗಿದೆ. ಜತೆಗೆ ಆಸ್ತಿಗಳ ಫೋಟೋಗಳು, ವೀಡಿಯೋಗಳನ್ನೂ ಹಾಕಬಹುದಾಗಿದೆ. ಈಗಾಗಲೇ ಇದರಲ್ಲಿ 35,000 ಆಸ್ತಿಗಳನ್ನು ಅಪ್ಲೋಡ್ ಮಾಡಲಾಗಿದೆ.
ಎನ್ಪಿಎ ಭೀತಿ ಹೋಗಿಲ್ಲ
13 ಪಿಎಸ್ಬಿಗಳಲ್ಲಿ ಎನ್ಪಿಎ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿದ್ದರೂ ಸಂಪೂರ್ಣವಾಗಿ ಕಡಿಮೆಯಾಗಿಲ್ಲ ಎಂದು ಆರ್ಬಿಐ ವರದಿ ಹೇಳಿದೆ. ಇದು ಮುಂದಿನ ವರ್ಷದಲ್ಲಿ ಮತ್ತಷ್ಟು ಏರಿಕೆಯಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ. ಆರ್ಬಿಐನ ಆರ್ಥಿಕ ಸ್ಥಿರತೆಯ ವರದಿ ಪ್ರಕಾರ, ಶೆಡ್ನೂಲ್ಡ್ ಕಮರ್ಷಿಯಲ್ ಬ್ಯಾಂಕ್ಗಳಲ್ಲಿನ ಎನ್ಪಿಎ ಭೀತಿ ಮತ್ತಷ್ಟು ಹೆಚ್ಚಾಗಬಹುದು. 2019ರ ಸೆಪ್ಟೆಂಬರ್ನಲ್ಲಿ ಈ ಬ್ಯಾಂಕ್ಗಳ ಎನ್ಪಿಎ ಪ್ರಮಾಣ ಶೇ.9.3ನಷ್ಟಿದ್ದು, ಇದು 2020ರ ಸೆಪ್ಟಂಬರ್ ವೇಳೆಗೆ ಶೇ.9.9ರಷ್ಟಾಗಬಹುದು ಎಂದು ಈ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು