ಕರ್ನಾಟಕ ಸರ್ಕಾರ ಗೋವಾಕ್ಕೆ ಸದಾ ಅನ್ಯಾಯ ಮಾಡುತ್ತಲೇ ಬಂದಿದೆ: ರಾಜೇಂದ್ರ ಕೇರಕರ್
Team Udayavani, Mar 1, 2022, 2:25 PM IST
ಪಣಜಿ: ಮಹದಾಯಿಯ ಕತ್ತು ಹಿಸುಕುತ್ತಿರುವ ಕರ್ನಾಟಕ ಸರ್ಕಾರ ಗೋವಾಕ್ಕೆ ಸದಾ ಅನ್ಯಾಯ ಮಾಡುತ್ತಲೇ ಬಂದಿದೆ ಎಂದು ಗೋವಾ ರಾಜ್ಯ ಪರಿಸರ ಹೋರಾಟಗಾರ ರಾಜೇಂದ್ರ ಕೇರಕರ್ ಹೇಳಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸರ ನಿಯಮಗಳನ್ನು ಉಲ್ಲಂಘಿಸಿ ನೀರನ್ನು ವಿರುದ್ಧ ದಿಕ್ಕಿನಲ್ಲಿ ತಿರುಗಿಸುವ ಪ್ರಯತ್ನ ನಡೆದಿದೆ. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗ ಕರ್ನಾಟಕವು 8.02 ಟಿಎಂಸಿ ನೀರನ್ನು ಮಹದಾಯಿ ಜಲವಿದ್ಯುತ್ ಯೋಜನೆಗೆ ತಿರುಗಿಸುವುದು ತಪ್ಪು. ಇದಕ್ಕೆ ನಮ್ಮ ವಿರೋಧವಿದ್ದು ಜಲ ಆಯೋಗ ಮತ್ತು ಕೇಂದ್ರ ಅರಣ್ಯ ಇಲಾಖೆ ಕೂಡ ಶಾಸನಬದ್ಧ ಅನುಮೋದನೆಯನ್ನು ತಿರಸ್ಕರಿಸಬೇಕು. ಈ ನಿಟ್ಟಿನಲ್ಲಿ ಗೋವಾ ಸರ್ಕಾರ ಕೂಡಲೇ ಪ್ರಯತ್ನ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕಕ್ಕೆ ನ್ಯಾಯಾಧೀಕರಣವು 13.42 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ. ಈ ಪೈಕಿ 8.02 ಟಿಎಂಸಿ ನೀರು ವಿದ್ಯುತ್ ಉತ್ಪಾದನೆಗೆ ಬಳಕೆಯಾಗಲಿದ್ದು, ನಂತರ ಈ ನೀರು ಮರುಬಳಕೆಯಾಗಲಿದೆ. ಆದರೆ ಈ ನ್ಯಾಯಾಧೀಕರಣ ತೀರ್ಪಿನ ನಂತರ ನೀರು ಹಂಚಿಕೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಪ್ರಕರಣಗಳು ಹೈಕೋರ್ಟನಲ್ಲಿ ಬಾಕಿ ಇದೆ. ನ್ಯಾಯಾಧೀಕರಣದ ತೀರ್ಪಿಗೆ ಗೋವಾ ಕೂಡ ಆಕ್ಷೇಪ ವ್ಯಕ್ತಪಡಿಸಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದ ಜಲವಿದ್ಯುತ್ ಯೋಜನೆಗೆ ಅನುಮೋದನೆ ನೀಡುವುದು ತಪ್ಪು. ಕರ್ನಾಟಕ ಸರ್ಕಾರವು ಕರ್ನಾಟಕ ವಿದ್ಯುತ್ ನಿಗಮಕ್ಕೆ ಅನುಮತಿ ನೀಡಿದ ಮಾತ್ರಕ್ಕೆ ಈ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳಿದರು.
ಧಾರವಾಡ, ಹುಬ್ಬಳ್ಳಿ, ಗದಗದಲ್ಲಿ ಕುಡಿಯುವ ನೀರು ಬೇಕು ಎಂದು ಹೇಳುತ್ತಲೇ ಕರ್ನಾಟಕವು ಮಹದಾಯಿ ನೀರಿನಲ್ಲಿ ವಿದ್ಯುತ್ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ ಎಂದರು.