ಭಾರತೀಯ ರೈಲುಗಳಲ್ಲೀಗ ಮಂಜು ಗೋಚರತೆ ಜಿಪಿಎಸ್ ಸುರಕ್ಷಾ ಸಾಧನ
Team Udayavani, Jan 4, 2018, 12:19 PM IST
ಹೊಸದಿಲ್ಲಿ : ಚಳಿಗಾಲದ ಈ ದಿನಗಳಲ್ಲಿ ಉತ್ತರ ಭಾರತದ ಆದ್ಯಂತ ದಟ್ಟನೆಯ ಮಂಜು ಮುಸುಕಿದ ವಾತಾವರಣದಲ್ಲಿ ಶೂನ್ಯ ಗೋಚರತೆ ಇರುವ ಕಾರಣ ರೈಲುಗಳು ಸುರಕ್ಷಿತವಾಗಿ ತಮ್ಮ ಓಡಾಟ ಕೈಗೊಂಡು ನಿಗದಿತ ವೇಳೆಗೆ ಗಮ್ಯ ತಾಣವನ್ನು ತಲುಪುವಂತಾಗಲು ಭಾರತೀಯ ರೈಲ್ವೇ ಇಲಾಖೆ ಇದೀಗ ತನ್ನ ರೈಲುಗಳಲ್ಲಿ ಜಿಪಿಎಸ್ ಆಧಾರಿತ ಮಂಜು ಗೋಚರತೆ ಸುರಕ್ಷಾ ಸಾಧವನ್ನು ಅಳವಡಿಸಿದೆ.
ಈ ಅತ್ಯಾಧುನಿಕ ಸುರಕ್ಷಾ ಸಾಧನದಿಂದಾಗಿ ದಟ್ಟನೆಯ ಮಂಜಿನ ವಾತಾವರಣದಲ್ಲಿ ಶೂನ್ಯ ಗೋಚರತೆ ಇದ್ದರೂ ರೈಲುಗಳು ಯಾವುದೇ ಅಡಚಣೆ ಇಲ್ಲ, ಸುರಕ್ಷಿತವಾಗಿ ತಮ್ಮ ಓಡಾಟವನ್ನು ಕೈಗೊಂಡು ನಿಗದಿತ ವೇಳೆಯಲ್ಲಿ ಗಮ್ಯ ತಾಣವನ್ನು ತಲುಪಬಹುದಾಗಿದೆ ಎಂದು ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ಹೇಳಿರುವುದನ್ನು ಉಲ್ಲೇಖೀಸಿ ಎಎನ್ಐ ವರದಿ ಮಾಡಿದೆ.
ಉತ್ತರ ರೈಲ್ವೇಯಲ್ಲಿ ನಾವು ಜಿಪಿಎಸ್ ಆಧಾರಿತ ತಂತ್ರಜ್ಞಾನದ ಅತ್ಯಾಧುನಿಕ ಉಪಕರಣವನ್ನು ರೈಲ್ವೇ ನಕ್ಷೆಯನ್ನು , ಸಿಗ್ನಲ್ಗಳು, ಸ್ಟೇಶನ್ಗಳು ಮತ್ತು ಲೆವೆಲ್ ಕ್ರಾಸಿಂಗ್ಗಳನ್ನು ಸಾಕಷ್ಟು ಮುಂಚಿತವಾಗಿ ಅವಲೋಕಿಸುವುದಕ್ಕಾಗಿ ಬಳಸುತ್ತಿದ್ದೇವೆ ಎಂದು ಉತ್ತರ ರೈಲ್ವೇಯ ಸಿಪಿಆರ್ಓ ನಿತಿನ್ ಚೌಧರಿ ಹೇಳಿದ್ದಾರೆ.