UP ವಿಧಾನಸಭಾ ಚುನಾವಣೆ 2022: ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಗಳು, ಸಂಭಾವ್ಯ ಮೈತ್ರಿಗಳು.!?
2022 ರ ವಿಧಾನ ಸಭಾ ಚುನಾವಣೆಗೆ ಈಗಾಗಲೇ ರಾಜಕೀಯ ಲೆಕ್ಕಾಚಾರದಲ್ಲಿ ರಾಜಕೀಯ ಪಕ್ಷಗಳು
Team Udayavani, Jun 18, 2021, 9:05 PM IST
ಉತ್ತರ ಪ್ರದೇಶ : ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಗೆ ಇನ್ನೂ ಕೆಲವು ತಿಂಗಳುಗಳು ಬಾಕಿ ಉಳಿದಿರುವಾಗಲೇ ರಾಜಕೀಯ ಪಕ್ಷಗಳು ಚುನಾವಣಾ ಕಣಕ್ಕೆ ತಯಾರಾಗುತ್ತಿವೆ. ಉತ್ತರ ಪ್ರದೇಶದ ಭವಿಷ್ಯ ಯಾರಿಗೆ ಒಲಿಯಲಿದೆ ಎಂಬ ಲೆಕ್ಕಚಾರ ಈಗಾಗಲೇ ಆರಂಭವಾಗಿದೆ. ಆಡಳಿತದಲ್ಲಿರುವ ಬಿಜೆಪಿ ಪಕ್ಷವನ್ನು ಒಳಗೊಂಡು ಪ್ರತಿ ಪಕ್ಷಗಳು ಚುನಾವಣೆಗೆ ಸಜ್ಜಾಗುತ್ತಿವೆ.
ಮುಖ್ಯ ರಾಜಕೀಯ ಪಕ್ಷಗಳು ಮತದಾನ ಪೂರ್ವದ ಮೈತ್ರಿಗಾಗಿ ಎಲ್ಲಾ ಸಾಧ್ಯಸಾಧ್ಯತೆಯನ್ನು ಪ್ರಾರಂಭಿಸಿದ್ದು, ಮುಖ್ಯಮಂತ್ರಿ ಹುದ್ದೆಗೆ ಯಾರು ತಮ್ಮ ಉನ್ನತ ಆಯ್ಕೆಯಾಗಬಹುದು ಎಂಬ ಬಗ್ಗೆ ಚರ್ಚೆಗಳನ್ನು ಪ್ರಾರಂಭವಾಗಿದೆ.
ಆಡಳಿತ ಪಕ್ಷ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬದಲಾವಣೆಯ ಬಗ್ಗೆ ನಡೆಯುತ್ತಿರುವ ವಿಚಾರವನ್ನು ತಳ್ಳಿ ಹಾಕಿದ್ದು, ಮುಂದಿನ ವಿಧಾನ ಸಭಾ ಚುನಾವಣೆಗೂ ಕೇಸರಿ ಪಕ್ಷ, ಯೋಗಿ ಆದಿತ್ಯ ನಾಥ್ ಅವರನ್ನೇ ತನ್ನ ಮುಖ್ಯ ಮಂತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಎಲ್ಲಾ ಸೂಚನೆಗಳು ಕಾಣಿಸುತ್ತಿರುವುದಾಗಿ ವರದಿಯಾಗಿದೆ.
ಯೋಗಿ ಆದಿತ್ಯನಾಥ್
ಮಹಾಂತ ಯೋಗಿ ಆದಿತ್ಯನಾಥ್ ಬಿಜೆಪಿ ರಾಷ್ಟ್ರೀಯ ಮಟ್ಟದ ಪ್ರಭಾವಿ ರಾಜಕಾರಣಿ. ಕಠೋರ ಹಿಂದುತ್ವದ ಮೂರ್ತರೂಪದ ರಾಜಕಾರಣಿ, ಉತ್ತರ ಪ್ರದೇಶ ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ. ಮುಖ್ಯಮಂತ್ರಿ ಆಗಿರುವ ಮೊದಲು ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತಾರಾ ವರ್ಚಸ್ಸಿನ ನಾಯಕರಾಗಿ ಗುರುತಿಸಿಕೊಂಡವರು.
ಯೋಗಿ ಆದಿತ್ಯನಾಥ್ ರಾಜಕೀಯಯ ನಡೆ
1998ರಿಂದ ಸತತ ಐದು ಅವಧಿಗೆ ಅವರು ಉತ್ತರ ಪ್ರದೇಶದ ಗೋರಖ್ ಪುರ್ ಕ್ಷೇತ್ರದ, ಸಂಸತ್ ಸದಸ್ಯರಾಗಿದ್ದರು. 1998ರಲ್ಲಿ ಗೋರಖ್ ಪುರ್ ನಲ್ಲಿ ಚುನಾವಣೆಗೆ ನಿಂತ ಆದಿತ್ಯನಾಥ್ ನೇರ ಸಂಸತ್ತಿಗೆ ಪ್ರವೇಶ ಗಿಟ್ಟಿಸಿದ್ದರು. ಅಲ್ಲಿಂದ ಮುಂದೆ ಅವರನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಾಗಲೇ ಇಲ್ಲ.
ಐದು ಬಾರಿ ದೊಡ್ಡ ಪ್ರಮಾಣದಲ್ಲಿ ಮತಗಳ ಅಂತರದಿಂದ ಗೋರಖ್ ಪುರ್ ಎಂಪಿ ಸ್ಥಾನವನ್ನು ಕೈವಶ ಮಾಡಿಕೊಂಡಿದ್ದರು ಆದಿತ್ಯನಾಥ್. 2007ರಲ್ಲಿ ಇನ್ನೇನು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಿರುವಾಗ ಆದಿತ್ಯನಾಥ್ ಜೈಲು ಪಾಲಾಗಿದ್ದರು. ಗೋರಖ್ ಪುರ್ ಕೋಮು ದಂಗೆಗೆ ಪ್ರೇರಣೆ ನೀಡಿದ ಆರೋಪದಲ್ಲಿ 15 ದಿನಗಳು ಆದಿತ್ಯನಾಥ್ ಜೈಲಿನಲ್ಲಿ ಕಳೆಯಬೇಕಾಗಿ ಬಂದಿತ್ತು.
2007ರಲ್ಲಿ ಕೋಮು ಗಲಭೆಯಲ್ಲಿ ಜೈಲು ಪಾಲಾದಾಗ ಬಿಜೆಪಿ ತನ್ನ ಸಹಾಯಕ್ಕೆ ಧಾವಿಸಲಿಲ್ಲ ಎದು ಯೋಗಿ ಆದಿತ್ಯಾಥ್ ಕೇಸರಿ ಪಕ್ಷದ ಮೇಲೆಯೇ ಸಿಟ್ಟಾಗಿದ್ದರು. ಬಿಜೆಪಿಯ ಅಭ್ಯರ್ಥಿಗಳ ವಿರುದ್ಧವೇ ಯೋಗಿ ಆದಿತ್ಯನಾಥ್ ತಮ್ಮ ಹಿಂದೂ ಯುವ ವಾಹಿನಿಯಿಂದ ಸ್ಪರ್ಧಿಗಳನ್ನು ಕಣಕ್ಕಿಳಿಸಿ ಸುದ್ದಿಯಾಗಿದ್ದರು. ಹಿಂದೂ ಮಹಾಸಭಾದಿಂದ ರಾಧಾ ಮೋಹನ್ ದಾಸ್ ಅಗರ್ವಾಲ್ ಎಂಬುವವರನ್ನು ನಿಲ್ಲಿಸಿ ಯೋಗಿ ಗೆಲ್ಲಿಸಿಕೊಂಡು ಬಿಟ್ಟಿದ್ದರು. ಈ ಮೂಲಕ ಬಿಜೆಪಿಗೆ ತೀಕ್ಷ್ಣ ಸಂದೇಶವನ್ನೂ ರವಾನಿಸಿದ್ದರು.
2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗಲೂ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಂಡಿಲ್ಲ ಎಂದು ಬಿಜೆಪಿಯ ಕೇಂದ್ರ ನಾಯಕತ್ವದ ವಿರುದ್ಧ ಯೋಗಿ ಸಿಟ್ಟಾಗಿದ್ದರು.
ಇಂತಹ ಖಡಕ್ ಹಿಂದುತ್ವದ ರಾಜಕಾರಣಿ ಯೋಗಿ ಆದಿತ್ಯ ನಾಥ್ ಮುಖ್ಯಮಂತ್ರಿಯಾದ ಆಡಳಿತಾವಧಿಯಲ್ಲಿ ಅನೇಕ ಹಿಂಸಾಚಾರಗಳು, ಅತ್ಯಾಚಾರ ಕೊಲೆ ಪ್ರಕರಣಗಳು, ಕೋವಿಡ್ ಸಂದರ್ಭದಲ್ಲಿನ ನಿರ್ವಹಣೆಯ ವಿಚಾರವಾಗಿ ಯೋಗಿ ವರ್ಚಸ್ಸಿಗೆ ಸ್ವಲ್ಪ ಮಟ್ಟಿಗೆ ಧಕ್ಕೆಯಾಗಿದೆ.
‘ಹಿಂದುತ್ವ’ದ ಮಂತ್ರ ರಾಜ್ಯ ರಾಜಕೀಯದಲ್ಲಿ ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳುತ್ತಿದೆ. ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆಯಲ್ಲಿ ಅಯೋಧ್ಯೆ, ವಾರಣಾಸಿ ಮತ್ತು ಮಥುರಾದಂತಹ ಬಿಜೆಪಿ ಭದ್ರಕೋಟೆಗಳಲ್ಲಿ ಹಲವಾರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸೋಲನುಭವಿಸಿದ್ದಾರೆ ಎಂಬುದು ಇದಕ್ಕೆ ಸಾಕ್ಷಿ.
2024 ರ ಲೋಕಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ನಿರ್ಣಾಯಕವಾಗಿರುವ ಮುಂಬರುವ ಚುನಾವಣೆಯಲ್ಲಿ ರಾಮ್ ಮಂದಿರ ಅಥವಾ ‘ಹಿಂದುತ್ವ’ ಮಾತ್ರ ಕೇಸರಿ ಪಕ್ಷಕ್ಕೆ ಮತಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಈ ಬೆಳವಣಿಗೆ ಸೂಚಿಸುತ್ತದೆ.
ಪಂಚಾಯತ್ ಸಮೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ 2022 ರ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಲು ಸಾಧ್ಯವಿಲ್ಲವಾದರೂ, ಕೇಸರಿ ಪಾಳಯಕ್ಕೆ ಇದೊಂದು ಎಚ್ಚರಿಕೆ ಕರೆಘಂಟೆಯಾಗಿ ಪರಿಣಮಿಸಿದ್ದಂತೂ ಸುಳ್ಳಲ್ಲ.
ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಬಲ ಮತ ಬ್ಯಾಂಕ್ ನನ್ನು ಹೊಂದಿದ್ದರೂ ಕೂಡ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಕಾನೂನು ಮತ್ತು ಸುವ್ಯವಸ್ಥೆ ಕಾರಣದಿಂದಾಗಿ ಸರ್ಕಾರದ ವಿರುದ್ಧ ಹೆಚ್ಚುತ್ತಿರುವ ಆಡಳಿತ ವಿರೋಧಿ ಅಲೆ, ಬರುವ ವಿಧಾನ ಸಭಾ ಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.
ಆದಾಗ್ಯೂ, ಕೇಂದ್ರ ಬಿಜೆಪಿಯ ಕೆಲವು ಯೋಜನೆಗಳು ಮತವನ್ನು ತಂದು ಕೊಟ್ಟೀತು ಎಂದಾದರೂ, ನೋಟು ಅಮಾನ್ಯೀಕರಣ, ಜಿ ಎಸ್ ಟಿ, ಕೃಷಿ ಕಾಯ್ದೆ, ಎನ್ ಆರ್ ಸಿ ವಿರೋಧ ಅಲೆಗಳು ಬಿಜೆಪಿಗೆ ಸ್ವಲ್ಪ ಮಟ್ಟಿನ ಹೊಡೆತ ನೀಡಬಹುದು ಎಂದು ಅಲ್ಲಿನ ರಾಜಕೀಯ ವಲಯದಲ್ಲಿ ಹೇಳಲಾಗುತ್ತಿದೆ.
ಪ್ರಿಯಾಂಕ ಗಾಂಧಿ
ಪ್ರಸ್ತುತ ಉತ್ತರ ಪ್ರದೇಶದ ಪೂರ್ವ ಭಾಗದ ಕಾಂಗ್ರೆಸ್ ನ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಎಐಸಿಸಿಯ ಪ್ರಧಾನ ಕಾರ್ಯದಶಿಯಾಗಿ ಸೇವೆ ಸಲ್ಲಿಸುತ್ತಿರುವ ಪ್ರಿಯಾಂಕ, ನಿರಂತರವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ಮಾಡುತ್ತಾ ಬಂದಿದ್ದಾರೆ. ಪ್ರಿಯಾಂಕ ಅವರನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯುವ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಹತ್ರಾಸ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸಹೋದರ ರಾಹುಲ್ ಗಾಂಧಿಯೊಂದಿಗೆ ಬೃಹತ್ ಮಟ್ಟದಲ್ಲಿ ಆಡಳಿತ ವಿರೋಧಿ ಅಲೆ ಎಬ್ಬಿಸಿದ ಪ್ರಿಯಾಂಕ, ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ರಾಜಕೀಯ ವರ್ಚಸ್ಸನ್ನು ವೃದ್ಧಿಸಿಕೊಂಡಿದ್ದಾರೆ. ಜಿತಿನ್ ಪ್ರಸಾದ್ ಅವರ ನಿರ್ಗಮನವು ಕಾಂಗ್ರೆಸ್ ಗೆ ಹೊಡೆತ ನೀಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಶ್ವಾಸಾರ್ಹ ವರ್ಚಸ್ಸಿನತ್ತ ಕಾಂಗ್ರೆಸ್ ಹುಡುಕಾಟದಲ್ಲಿದ್ದು, ಪ್ರಿಯಾಂಕ ಗಾಂಧಿ ಮುಂದಿನ ವಿಧಾನ ಸಭಾ ಚುನಾವಣೆಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ.
ಪ್ರಿಯಾಂಕ ರಾಜಕೀಯ ನಡೆ
2004ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ತಾಯಿಯ ಚುನಾವಣಾ ಅಭಿಯಾನದ ವ್ಯವಸ್ಥಾಪಕರಾಗಿದ್ದರು ಮತ್ತು ಸಹೋದರ ರಾಹುಲ್ ಗಾಂಧಿಯವರ ಚುನಾವಣಾ ಪ್ರಚಾರಕ್ಕೆ ಸಹಾಯವನ್ನು ಮಾಡಿದ್ದರು. 2019ರ ಜನವರಿ 23ರಂದು ಪ್ರಿಯಾಂಕ ಗಾಂಧಿ ರಾಜಕೀಯವನ್ನು ಪ್ರವೇಶಿಸಿದರು. ಮತ್ತು ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು.
ಸಂಜಯ್ ಸಿಂಗ್
ಮುಂದಿನ ವಿಧಾನ ಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ಕೂಡ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಯೋಚನೆಯಲ್ಲಿದ್ದು, ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರಿಗೆ ಅರವಿಂದ ಕೇಜ್ರಿವಾಲ್ ನೇತೃತ್ವದ ಪಕ್ಷ ಮಣೆ ಹಾಕಲಿದೆ ಎಂದು ಹೇಳಲಾಗುತ್ತಿದೆ.
ಉತ್ತರ ಪ್ರದೇಶದ ಮೂರು ಹಂತಗಳಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗಮನಾರ್ಹ ಸ್ಥಾನಗಳನ್ನು ತನ್ನ ತೆಕ್ಕಗೆ ತೆಗೆದುಕೊಂಡ ಆಮ್ ಆದ್ಮಿ ಪಕ್ಷ, ಉತ್ತರ ಪ್ರದೇಶದಲ್ಲಿ ತನ್ನಅಸ್ತಿತ್ವವನ್ನು ಗಟ್ಟಿ ಮಾಡಿಕೊಳ್ಳಲು ಪ್ರಯತ್ನದಲ್ಲಿದೆ.
ಸಂಜಯ್ ಸಿಂಗ್, ಉತ್ತರ ಪ್ರದೇಶದಲ್ಲಿ ಮೇಲ್ಜಾತಿಯ ಮತದಾರರನ್ನು ಸೆಳೆಯಲು ಆಮ್ ಆದ್ಮಿ ಪಕ್ಷಕ್ಕೆ ಸಹಾಯ ಮಾಡುತ್ತಾರೆ ಎಂಬ ಕಾರಣದಿಂದ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಸಂಜಯ್ ಸಿಂಗ್ ಒಂದಿಷ್ಟು ಬಿಜೆಪಿಯ ಮೇಲ್ಜಾತಿಯ ಮತಗಳನ್ನು ವಿಭಜಿಸಬಹುದು ಎಂದು ರಾಜಕೀಯ ವಲಯದಲ್ಲಿ ಮಾತುಗಳು ಹರಿದಾಡುತ್ತಿವೆ.
ಮಾಯಾವತಿ
ದಲಿತ ಐಕಾನ್ ಎಂದೇ ಹೇಳಲಾಗುವ ಮಾಯಾವತಿ. ಬಹುಜನ ಸಮಾಜವಾದಿ ಪಕ್ಷದ ನಾಯಕಿ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ. ಬರುವ ವಿಧಾನ ಸಭಾ ಚುನಾವಣೆಗೆ ಯಾವುದೇ ಮೈತ್ರಿ ಮಾಡಿಕೊಳ್ಳದೇ ವಿಧಾನ ಸಭಾ ಚುನಾವಣೆಯನ್ನು ಎದುರಿಸಲಿದ್ದೇವೆ ಎನ್ನುವುದನ್ನು ಈ ಹಿಂದೆ ಮಾಯಾವತಿ ಹಲವು ಬಾರಿ ಹೇಳಿದ್ದರು. ಆದಾಗ್ಯೂ, ಉತ್ತರ ಪ್ರದೇಶದಲ್ಲಿ ಬಿಎಸ್ ಪಿ ಮತ್ತು ಎಐಐಎಂಐಎಂ ಮೈತ್ರಿಯಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ಕೂಡ ಹೇಳಲಾಗುತ್ತಿದೆ. ಬಹುಜನ ಸಮಾಜವಾದಿ ಪಕ್ಷದಿಂದ ಮತ್ತೊಮ್ಮೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಯಾವತಿ ಅವರೇ ಕಣಕ್ಕಿಳಿಯಲಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ.
ಮಾಯಾವತಿ ರಾಜಕೀಯ ನಡೆ
ಭಾರತದ ಪ್ರಶ್ನಾತೀತ ಮಹಿಳಾ ರಾಜಕೀಯ ನಾಯಕಿಯರಲ್ಲೊಬ್ಬರು ಎಂಬುದರಲ್ಲಿ ಎರಡು ಮಾತಿಲ್ಲ. ರಾಜಕೀಯವಾಗಿ ಅತಿ ಪ್ರಮುಖ ಹಾಗೂ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವ ಮೂಲಕ ದೇಶದ ಪ್ರಥಮ ದಲಿತ ಮಹಿಳಾ ಮುಖ್ಯಮಂತ್ರಿಯಾದ ಹೆಗ್ಗಳಿಕೆ ಮಾಯಾವತಿಯವರದ್ದಾಗಿದೆ. ಒಟ್ಟು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿರುವ ದಲಿತ ಸಮುದಾಯದ ನಾಯಕಿ ಮಾಯಾವತಿಯವರು 2012 ರ ವಿಧಾನಸಭಾ ಚುನಾವಣೆಯಲ್ಲಿ ದಾರುಣವಾಗಿ ಸೋತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರು.
2007ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಮಾಯಾವತಿಯವರ ಬಿಎಸ್ಪಿ ಬಹುಮತ ಪಡೆಯಿತು. 2009ರ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಉತ್ತರ ಪ್ರದೇಶದ 20 ಸ್ಥಾನಗಳಲ್ಲಿ ಜಯ ಸಾಧಿಸಿತು. ಈ ಚುನಾವಣೆಯಲ್ಲಿ ಶೇ.27.42 ರಷ್ಟು ಮತಗಳನ್ನು ಪಡೆಯುವ ಮೂಲಕ ಇತರ ಎಲ್ಲ ಪಕ್ಷಗಳಿಗಿಂತ ಅಧಿಕ ಮತ ಪಡೆದ ಹೆಗ್ಗಳಿಕೆ ಬಿಎಸ್ ಪಿ ಯದ್ದಾಗಿತ್ತು.
2017 ರ ವಿಧಾನಸಭಾ ಚುನಾವಣೆಯಲ್ಲಿ ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷ ಮತ್ತೊಮ್ಮೆ ವಿಫಲವಾಯಿತು. ಈ ಚುನಾವಣೆಯಲ್ಲಿ 403 ಸ್ಥಾನಗಳ ಪೈಕಿ ಬಿಎಸ್ಪಿ ಕೇವಲ 19 ಸ್ಥಾನಗಳನ್ನು ಮಾತ್ರ ಜಯಿಸಲು ಸಾಧ್ಯವಾಯಿತು. 2014ರ ಲೋಕಸಭಾ ಚುನಾವಣೆಯಲ್ಲಿ ಭಾರಿ ತಯಾರಿಯೊಂದಿಗೆ ಲೋಕಸಭಾ ಚುನಾವಣೆಗೆ ಧುಮುಕಿದರೂ ಮಾಯಾವತಿಯವರ ಬಿಎಸ್ಪಿಗೆ ಒಂದೂ ಲೋಕಸಭಾ ಸ್ಥಾನ ಗೆಲ್ಲಲು ಆಗದೆ ಶೂನ್ಯ ಸಾಧನೆ ಮಾಡುವಂತಾಯಿತು.
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದವರು. ತಂದೆಯವರ ರಾಜಕೀಯ ವರ್ಚಸ್ಸಿನಲ್ಲಿ ಬೆಳೆದವರಾದರೂ, ರಾಜಕೀಯದಲ್ಲಿ ಪ್ರತಿಭಟನೆ, ಪಾದಯಾತ್ರೆಗಳನ್ನು ಮಾಡಿ ರಾಜಕೀಯದಲ್ಲಿ ತಮ್ಮದೇ ಹೆಜ್ಜೆಯನ್ನು ಒತ್ತಿದವರು.
ತಂದೆ, ‘ಮುಲಾಯಂ ಸಿಂಗ್ ಯಾದವ್, ಮೈನ್ ಪುರಿ ಮತ್ತು ಕನ್ನೌಜ್ ಎರಡು ‘ಲೋಕಸಭಾಕ್ಷೇತ್ರ’ಗಳಿಂದ ವಿಜಯಿಯಾದಾಗ, ಮಗನಿಗಾಗಿ ‘ಕನ್ನೌಜ್ ಕ್ಷೇತ್ರ’ ವನ್ನು ತೆರವುಗೊಳಿಸಿದರು. ೨೦೧೨ ರ ‘ವಿಧಾನಸಭಾ ಕ್ಷೇತ್ರ ಚುನಾವಣೆ’ಯ ಪ್ರಚಾರದ ಸಮಸ್ತ ಜವಾಬ್ದಾರಿಯನ್ನು ‘ಟಿಕೆಟ್ ವಿತರಣೆ’ಯಿಂದ ಆರಂಭಿಸಿ ‘ಪಕ್ಷದ ಪ್ರಚಾರ ನಿಯಂತ್ರಣ’ ಅವರೇ ನಿಭಾಯಿಸಿದರು. ‘ಅಖಿಲೇಶ್’ ರವರ ಮೊದಲ ಕಾರ್ಯವೈಖರಿಯೆಂದರೆ, ಕ್ರಿಮಿನಲ್ ಹಿನ್ನೆಲೆಯ ಡಿ. ಪಿ ಯಾದವ್ ರಂತಹ ನಾಯಕರನ್ನು ಪಕ್ಷದಿಂದ ದುರತಳ್ಳಿದ್ದು. ‘300 ಮಂದಿ ಸದಸ್ಯ ಬಲದ ರಾಜ್ಯ ವಿಧಾನ ಸಭೆ’ಯಲ್ಲಿ, 224 ಸ್ಥಾನಗಳನ್ನು ಜಯಿಸಿ, ಬಹುಮತ ಸಾಧಿಸುವಲ್ಲಿ ಸಮಾಜವಾದಿ ಪಕ್ಷಕ್ಕೆ ನೆರವಾದರು.’ಬಿ.ಎಸ್.ಪಿ.ಪಕ್ಷ’ವನ್ನು ಕಿತ್ತೊಗೆಯುವಲ್ಲಿ ಅಖಿಲೇಶ್ ಪಾತ್ರ ದೊಡ್ಡದು.
ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಹುಜನ ಸಮಾಜವಾದಿ ಪಕ್ಷದೊಂದಿಗೆ ಮೃತ್ರಿ ಮಾಡಿಕೊಂಡು ಕಣಕ್ಕಿಳಿದು ಹೀನಾಯ ಸೋಲಿನ ಅನುಭವವನ್ನು ಹೊಂದಿದ್ದು, ಈ ಬಾರಿ ಯಾವುದೇ ಪ್ರಮುಖ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದು ಯಾದವ್ ಹೇಳಿದ್ದಾರೆ.
ಮುಂಬರುವ ವಿಧಾನ ಸಭಾ ಚುನಾವಣೆಗೆ ನಿರೀಕ್ಷೆಯಂತೆಯೇ ಅಖಿಲೇಶ್ ಯಾದವ್ ಅವರೇ ಮುಖ್ಯಮಂತ್ರಿಯಾಗಿ ಕಣಕ್ಕಿಳಿಯಲಿದ್ದು, ಯುವ ಜನರನ್ನು ಸೆಳೆಯುವಲ್ಲಿ ಪಕ್ಷ ಕೆಲಸ ಮಾಡುತ್ತಿದೆ.
ಒಟ್ಟಿನಲ್ಲಿ , 2022 ರ ವಿಧಾನ ಸಭೆಗೆ ಈಗಾಗಲೆ ಉತ್ತರ ಪ್ರದೇಶದಲ್ಲಿ ಆಡಳಿತ ಪಕ್ಷವನ್ನು ಒಳಗೊಂಡು ವಿಪಕ್ಷಗಳು ಕಾರ್ಯತಂತ್ರ ಹೆಣೆಯುತ್ತಿದ್ದು, ಈ ಬಾರಿ ಮತದಾರ ಯಾರಿಗೆ ಒಲಿಯಲಿದ್ದಾನೆ ಎನ್ನುವುದರ ಬಗ್ಗೆ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಮುಂಬೈ ನೌಕಾ ನೆಲೆಯಲ್ಲಿ ಕರ್ತವ್ಯದಲ್ಲಿದ್ದ ವಿಜಯಪುರ ಉದ್ಯೋಗಿ ಸಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ