ನಾರಾಯಣ ಸಾಯಿಗೆ ಜೀವಾವಧಿ ಜೈಲು ಶಿಕ್ಷೆ: ಕೋರ್ಟ್ ತೀರ್ಪು ಸ್ವಾಗತಿದ ಪತ್ನಿ ಜಾನಕಿ
Team Udayavani, May 1, 2019, 12:12 PM IST
ಇಂದೋರ್ : ಅತ್ಯಾಚಾರದ ಅಪರಾಧಕ್ಕಾಗಿ ಜೈಲುಪಾಲಾಗಿರುವ ಸ್ವಘೋಷಿತ ದೇವಮಾನ ಆಸಾರಾಮ್ ಬಾಪು ನ ಮಗ ನಾರಾಯಣ ಸಾಯಿ ತನ್ನ ಇಬ್ಬರು ಮಹಿಳಾ ಅನುಯಾಯಿ ಸಹೋದರಿಯರ ಮೇಲೆ ಅತ್ಯಾಚಾರ ಎಸಗಿರುವುದಕ್ಕಾಗಿ ಆತನಿಗೆ ಇಲ್ಲಿನ ಸೆಶನ್ಸ್ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ವಿಧಿಸಿರುವುದನ್ನು ನಾರಾಯಣ ಸಾಯಿ ಯ ಪತ್ನಿ ಜಾನಕಿ ಹರ್ ಪಲಾನಿ ಸ್ವಾಗತಿಸಿದ್ದಾರೆ. ಇದು ಸತ್ಯ ಮತ್ತು ನ್ಯಾಯದ ವಿಜಯ ಎಂದವರು ಹೇಳಿದ್ದಾರೆ.
ನಾರಾಯಣ ಸಾಯಿಗೆ ಜೀವಾವಧಿ ಜೈಲು ಶಿಕ್ಷೆಯಾಗುವ ಮೂಲಕ ಆತ ಮತ್ತು ಆತನ ಅಪ್ಪ ಗೈದಿರುವ ಅನೇಕ ರೇಪ್ ಮತ್ತು ಹಲ್ಲೆಯ ಪಾಪಕೃತ್ಯಗಳ ಪ್ರತಿಯೋರ್ವ ಸಂತ್ರಸ್ತರಿಗೆ ನ್ಯಾಯ ದೊರಕಿದಂತಾಗಿದೆ ಎಂದವರು ಹೇಳಿದ್ದಾರೆ.
ನಾರಾಯಣ ಸಾಯಿ ಮತ್ತು ಆತನ ಅಪ್ಪ ಆಸಾರಾಂ, ತಮ್ಮನ್ನು ತಂದೆ ಮತ್ತು ಗುರು ಎಂದು ಗೌರವಿಸಿದ ಅನೇಕ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ; ಧರ್ಮದ ಹೆಸರಿನಲ್ಲಿ ಈ ಅಪ್ಪ – ಮಗ ತಮ್ಮ ಲೈಂಗಿಕ ಆಸೆ ಆಕಾಂಕ್ಷೆಗಳನ್ನು ಅಕ್ರಮವಾಗಿ ಈಡೇರಿಸಿಕೊಂಡಿದ್ದಾರೆ. ನಾರಾಯಣ ಸಾಯಿಗೆ ಕೋರ್ಟ್ ನೀಡಿರುವ ಜೀವಾವಧಿ ಜೈಲು ಶಿಕ್ಷೆಯು ಈ ರೀತಿಯ ಇತರ ಅನೇಕ ಕಪಟ ಸನ್ಯಾಸಿಗಳಿಗೆ ಸರಿಯಾದ ಪಾಠವಾಗಿದೆ ಎಂದು ಜಾನಕಿ ಹೇಳಿದ್ದಾರೆ.