ಉಚಿತ ಕೊಡುಗೆ: ಪಕ್ಷಗಳಿಗೆ ತಡೆ ಸಾಧ್ಯವಿಲ್ಲ: ಸುಪ್ರೀಂಕೋರ್ಟ್
Team Udayavani, Aug 17, 2022, 10:45 PM IST
ನವದೆಹಲಿ: ಉಚಿತ ಕೊಡುಗೆ ನೀಡಬಾರದು ಎಂದು ರಾಜಕೀಯ ಪಕ್ಷಗಳ ಮೇಲೆ ತಡೆ ಹೇರುವುದು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಜತೆಗೆ ಎಲ್ಲರಿಗೂ ಆರೋಗ್ಯ ವ್ಯವಸ್ಥೆ ಕಲ್ಪಿಸುವುದು, ಕುಡಿಯುವ ನೀರು ಪೂರೈಕೆಯನ್ನು ಉಚಿತ ಕೊಡುಗೆಗಳ ವ್ಯಾಪ್ತಿಯಲ್ಲಿ ವ್ಯಾಖ್ಯಾನಿಸಬಹುದೇ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ ಪ್ರಶ್ನೆ ಮಾಡಿದೆ.
ಸಮಾಜ ಕಲ್ಯಾಣ ಎಂದರೆ ಎಲ್ಲವನ್ನೂ ಉಚಿತವಾಗಿ ನೀಡಬೇಕು ಎಂದರೆ “ಸಮಾಜ ಕಲ್ಯಾಣ’ ಎಂಬ ಶಬ್ದದ ಅರ್ಥವನ್ನು ತಪ್ಪಾಗಿ ಅರ್ಥ ಮಾಡಿಕೊಂಡಂತೆ ಆಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಮತದಾರರು ಉಚಿತ ಕೊಡುಗೆಗಳನ್ನು ನಿರೀಕ್ಷಿಸುತ್ತಿಲ್ಲ. ಅದರ ಬದಲಾಗಿ, ಗೌರವಯುತವಾಗಿರುವ ಸಂಪಾದನೆಯನ್ನು ನಿರೀಕ್ಷಿಸುತ್ತಾರೆ. ಸರಿಯಾದ ರೀತಿಯಲ್ಲಿ ಸರ್ಕಾರದ ಹಣ ಯೋಜನೆಗಳಿಗಾಗಿ ವಿನಿಯೋಗವಾಬೇಕು ಎಂದೂ ನ್ಯಾಯಪೀಠ ಹೇಳಿತು.
ಮುಂದಿನ ಸೋಮವಾರದ ಒಳಗಾಗಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆ ಬಗ್ಗೆ ಅಭಿಪ್ರಾಯಗಳನ್ನು ಲಿಖಿತವಾಗಿ ಸಲ್ಲಿಸಬೇಕು ಎಂದು ನ್ಯಾಯಪೀಠ ಸೂಚಿಸಿತು.