ತಮಿಳುನಾಡಿನಲ್ಲಿ ಮಳೆಯಬ್ಬರ ನ. 16ಕ್ಕೆ ಮತ್ತೆ ವಾಯುಭಾರ ಕುಸಿತ ಸಾಧ್ಯತೆ
Team Udayavani, Nov 14, 2022, 7:10 AM IST
ಚೆನ್ನೈ: ಬಂಗಾಲಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆ ಆಗಲಿದೆ. ರಾಜಧಾನಿ ಚೆನ್ನೈ ಸಹಿತ ಹಲವು ಜಿಲ್ಲೆಗಳಲ್ಲಿ ಮಳೆ ಜನಜೀವನಕ್ಕೆ ತೊಂದರೆಯನ್ನು ಉಂಟು ಮಾಡಿದೆ.
ನ. 11ರಿಂದ ಇದುವರೆಗೆ ಚೆನ್ನೈಯಲ್ಲಿ 205.47 ಮಿ.ಮೀ. ಮಳೆಯಾಗಿದೆ. ಹೀಗಾಗಿ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ತಿರುವಳ್ಳೂರ್, ರಾಣಿಪೇಟ್, ಕಾಂಚಿಪುರಂ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಮೈಲಾಡುತುರೈ, ಕಡಲೂರ್ ಸೇರಿದಂತೆ 23 ಜಿಲ್ಲೆಗಳಲ್ಲಿ ಬೆಳೆದು ನಿಂತ 45,800 ಹೆಕ್ಟೇರ್ ಭತ್ತದ ಬೆಳೆ ನೀರು ಪಾಲಾಗಿದೆ. ರಾಜಧಾನಿ ಚೆನ್ನೈಯ ಉತ್ತರ ಭಾಗ ಸೇರಿದಂತೆ ಹಲವು ಪ್ರದೇಶಗಳು ಜಲಾವೃತವಾಗಿವೆ. ಚಿಟ್ಲಾಪಕಂ ಕೆರೆಯಲ್ಲಿ ನೀರು ತುಂಬಿದ್ದು, ವಸತಿ ಪ್ರದೇಶಕ್ಕೆ ನೆರೆ ನೀರು ಹರಿಯುತ್ತಿದೆ.
ನ. 14ರಿಂದ ತಮಿಳುನಾಡಿನ ಉತ್ತರ ಕರಾವಳಿ, ಮಳೆಯಾಗಲಿದ್ದು, ಕೇರಳದ 7 ಜಿಲ್ಲೆಗಳಲ್ಲಿ ಸೋಮವಾರ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ನ. 16ರಿಂದ ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ ಉಂಟಾಗಲಿದೆ.