“ಮಂಡಳಿ ಯಶಸ್ಸಿಗೆ ಹಿರಿಯರ ಪರಿಶ್ರಮ, ಕಲಾವಿದರ ಪ್ರೋತ್ಸಾಹ ಅನನ್ಯ’
ಬಿಲ್ಲವರ ಅಸೋಸಿಯೇಶನ್ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಅಮೃತ ಮಹೋತ್ಸವ ಉದ್ಘಾಟನೆ
Team Udayavani, Sep 7, 2021, 2:35 PM IST
ಮುಂಬಯಿ: ಕಲಾವಿದರ ಪರಿಶ್ರಮ ಹಾಗೂ ಕಲಾಭಿಮಾನಿಗಳ ಪ್ರೋತ್ಸಾಹದಿಂದ ಯಕ್ಷಗಾನ ಬೆಳೆಯಲು ಸಾಧ್ಯವಾಗಿದೆ. ತುಳುನಾಡ ಕರಾವಳಿಯಲ್ಲಿ ಪ್ರಸಿದ್ಧಿ ಪಡೆದ ಈ ಕಲೆಯನ್ನು ಮುಂಬಯಿಯಂತಹ ಅನ್ಯ ಭಾಷಾ ಮಹಾನಗರಿಯಲ್ಲಿ ಪರಿಚಯಿಸಿ ಮಂಡಳಿಯನ್ನು ಕಟ್ಟಿ ಯಶಸ್ವಿಯಾಗಿ ಇಂದು ಅಮೃತ ಮಹೋತ್ಸವ ಆಚರಿಸುವುದೆಂದರೆ ನಮಗೆಲ್ಲರಿಗೂ ಅಭಿಮಾನದ ಸಂಗತಿ. ಕಲಾಮಾತೆ ಮೂಕಾಂಬಿಕೆ ಹಾಗೂ ನಾರಾಯಣಗುರುಗಳ ಆಶೀರ್ವಾದದಿಂದ ಇದು ಸಾಧ್ಯವಾಯಿತು. ಇದಕ್ಕಾಗಿ ಗುರುನಾರಾಯಣ ಯಕ್ಷಗಾನ ಮಂಡಳಿ ಹಾಗೂ ಇದರ ಸಂಚಾಲಕರಾದ ಬಿಲ್ಲವರ ಅಸೋಸಿಯೇಶನ್ ಅನ್ನು ಅಭಿನಂದಿಸುತ್ತೇನೆ ಎಂದು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ತಿಳಿಸಿದರು.
ಸೆ. 5ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ನಡೆದ ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಅಮೃತ ಮಹೋತ್ಸವವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಎಪ್ಪತ್ತೈದು ವರ್ಷಗಳಿಂದ ಮಂಡಳಿಯ ಯಶಸ್ಸಿಗಾಗಿ ದುಡಿದ ಎಲ್ಲರೂ ಅಭಿನಂದನಾರ್ಹರು. ಮಂಡಳಿಗೆ ಹೊಸ ರೂಪರೇಷೆ ನೀಡಿ ಮುಂಬಯಿ ಮಹಾ ನಗರದಲ್ಲಿ ಒಂದು ಪ್ರಸಿದ್ಧ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿದ ನಮ್ಮೆಲ್ಲರ ನಾಯಕ ದಿ| ಜಯ ಸಿ. ಸುವರ್ಣ ಅವರ ಶ್ರಮ ಮರೆಯುವಂತಿಲ್ಲ. ಮಂಡಳಿ ಇನ್ನಷ್ಟು ಬೆಳೆದು ಕಲಾಮಾತೆಯ ಸೇವೆ ಮಾಡುತ್ತಿರಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಮುಂಬಯಿ ಮಹಾನಗರದಲ್ಲಿ ಯಕ್ಷಗಾನ ಮಂಡಳಿಯು ಅಮೃತ ಮಹೋತ್ಸವ ಆಚರಿಸುತ್ತಿರುವುದು ಇತಿಹಾಸ ನಿರ್ಮಿಸಿದಂತೆ. ಇದು ತುಳು ಕನ್ನಡಿಗರಾದ ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಇಂಥ ಯಕ್ಷಗಾನ ಮಂಡಳಿ ಯಶಸ್ವಿಯಾಗಬೇಕಾದರೆ ಅನೇಕ ಮಹನೀಯರು ಹಾಗೂ ಕಲಾವಿದರ ಪರಿಶ್ರಮ ಖಂಡಿತ ಇದೆ. ಈ ಕಾರ್ಯಕ್ಕಾಗಿ ದಿ| ಜಯ ಸಿ. ಸುವರ್ಣ ಅವರನ್ನು ಸ್ಮರಿಸುತ್ತೇನೆ. ಅವರು ನಮಗೆಲ್ಲರಿಗೂ ಪ್ರೇರಣೆ ಹಾಗೂ ಮಾರ್ಗದರ್ಶಕರಾಗಿದ್ದರು. ಮುಂಬಯಿ ಮಹಾನಗರದಲ್ಲಿ ಪ್ರತಿ ಸಮಾಜಕ್ಕೂ ಸಂಘಟನೆಗಳ ಅಗತ್ಯವಿದ್ದು, ಇಲ್ಲಿ ಎಲ್ಲ ಸಮಾಜದವರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿರುವುದು ನೋಡುವಾಗ ಸಂತೋಷವಾಗುತ್ತದೆ. ನಾವು ಸಮಾಜದ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಆಗ ಮಾತ್ರ ಸಮಾಜ ಹಾಗೂ ಸಂಘಟನೆ ಬೆಳೆಯಲು ಸಾಧ್ಯ ಎಂದರು.
ಇದನ್ನೂ ಓದಿ:ಯುವಕರಿಗೆ ಹೇಳಿ ಮಾಡಿಸಿದಂತಿದೆ ನಾಯ್ಸ್ ಫಿಟ್ ಕೋರ್ ಸ್ಮಾರ್ಟ್ ವಾಚ್..! ಇಲ್ಲಿದೆ ಮಾಹಿತಿ
ಅಧ್ಯಕ್ಷತೆ ವಹಿಸಿದ್ದ ಬಿಲ್ಲವರ ಅಸೋಸಿ ಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಅಮೀನ್ ಮಾತನಾಡಿ, ಹಿರಿಯರ ಕಠಿನ ಪರಿಶ್ರಮದಿಂದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಇಂದು ಮಹಾ ನಗರದಲ್ಲಿ ಒಂದು ಪ್ರಸಿದ್ಧಿ ಪಡೆದ ಯಕ್ಷಗಾನ ಮಂಡಳಿಯಾಗಿ ಕಲಾ ಸೇವೆ ಮಾಡುತ್ತಿದ್ದು, ಪ್ರಸ್ತುತ ಅಮೃತ ಮಹೋತ್ಸವ ಆಚರಿಸುತ್ತಿದೆ. ಇದಕ್ಕಾಗಿ ಇದರ ಸಂಸ್ಥಾಪಕರು ಹಾಗೂ ಯಶಸ್ಸಿಗೆ ಕಾರಣಕರ್ತರಾದ ಎಲ್ಲರನ್ನೂ ಅಭಿನಂದಿಸುತ್ತಿದ್ದೇನೆ. ಮಂಡಳಿಗೆ ಹೊಸ ಆಯಾಮ ನೀಡಿದ ನಮ್ಮೆಲ್ಲರ ನಾಯಕ ಜಯ ಸಿ. ಸುವರ್ಣರ ಕೊಡುಗೆ ಮಹತ್ತರವಾಗಿದೆ. ಈ ಮಂಡಳಿಗೆ ಇನ್ನಷ್ಟು ಮೆರುಗನ್ನು ನೀಡಿ ಇದರಲ್ಲಿ ಸೇವೆಗೈಯುತ್ತಿರುವ ಕಲಾವಿದರಿಗೆ ಸಹಾಯವಾಗುವಂತಹ ಯೋಜನೆ ರೂಪಿಸುವಲ್ಲಿ ಬಿಲ್ಲವರ ಅಸೋಸಿಯೇಶನ್ ಸಕ್ರಿಯವಾಗಿದೆ. ಅಮೃತ ಮಹೋತ್ಸವದಲ್ಲಿ ಹೆಚ್ಚಿನ ಎಲ್ಲ ಕಲಾವಿದರನ್ನು ನಗದು ಪುರಸ್ಕಾರ ನೀಡಿ ಅಭಿನಂದಿಸಿದ್ದೇವೆ. ಈ ಸಂದರ್ಭ ನಾನು ನಮ್ಮ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ದಯಾನಂದ ಪೂಜಾರಿ, ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದ ಎಲ್ಲ ಕಾರ್ಯಕರ್ತರನ್ನು ಅಭಿನಂದಿಸುತ್ತಿದ್ದೇನೆ ಎಂದರು.
ಸಮಾರಂಭದಲ್ಲಿ ಗುರುನಾರಾಯಣ ಯಕ್ಷಗಾನ ಮಂಡಳಿಯ ಸಂಸ್ಥಾಪಕ ದಿ| ಬೂದ ಸುವರ್ಣ ಅವರ ಪರಿವಾರ ಹಾಗೂ ಮಂಡಳಿಯ ಉನ್ನತಿಗೆ ಕಾರಣಕರ್ತರಾದ ಶಿವರಾಮ್ ಶೆಟ್ಟಿ ಮತ್ತು ಸಿ. ಟಿ. ಸಾಲ್ಯಾನ್ ದಂಪತಿಗಳು, ವಾಮನ್ ಡಿ. ಪೂಜಾರಿ, ಗಣೇಶ್ ಕಾರಂತ ಅವರನ್ನು ಸಮ್ಮಾನಿಸಲಾಯಿತು. ಮಂಡಳಿಯ ಎಲ್ಲ ಕಲಾವಿದರನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಅತಿಥಿ ಕಲಾವಿದರನ್ನು ಅಭಿನಂದಿಸಲಾಯಿತು. ಸಾಂಸ್ಕೃತಿಕ ಉಪ ಸಮಿತಿಯ ಕಾರ್ಯಾಧ್ಯಕ್ಷ ದಯಾನಂದ್ ಆರ್. ಪೂಜಾರಿ ಅತಿಥಿಗಳನ್ನು ಸ್ವಾಗತಿಸಿ
ದರು. ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಶಾಂತಿ ಪ್ರಾಸ್ತಾವಿಸಿ, ಕಾರ್ಯ ಕ್ರಮ ನಿರ್ವಹಿಸಿದರು.
ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್. ಕೆ. ಶೆಟ್ಟಿ, ಬಿಎಸ್ಕೆಬಿ ಅಸೋಸಿಯೇಶನ್ ಅಧ್ಯಕ್ಷ ಡಾ| ಸುರೇಶ್ ರಾವ್, ಉದ್ಯಮಿ ರವಿ ಎಸ್. ಶೆಟ್ಟಿ, ಹೆರ್ಗ ಬಾಬು ಪೂಜಾರಿ, ಘೋಡ್ಬಂದರ್ ಕನ್ನಡ ಸಂಘದ ಅಧ್ಯಕ್ಷ ಹರೀಶ್ ಡಿ. ಸಾಲ್ಯಾನ್ ಬಜಗೋಳಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾಧ್ಯಕ್ಷರಾದ ಶಂಕರ್ ಡಿ. ಪೂಜಾರಿ, ಶ್ರೀನಿವಾಸ್ ಆರ್. ಕರ್ಕೇರ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ. ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್, ಸಾಂಸ್ಕೃತಿಕ ಸಮಿತಿಯ ಗೌರವ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ಅತಿಥಿಗಳಾಗಿದ್ದ ನಗರದ ಹಿರಿಯ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಯಕ್ಷಗಾನ, ಕಲಾವಿದೆ ನ್ಯಾಯವಾದಿ ಗೀತಾ ಎಲ್. ಭಟ್ ಶುಭ ಹಾರೈಸಿದರು.
ಅಸೋಸಿಯೇಶನ್ನ ಜತೆ ಕಾರ್ಯದರ್ಶಿ ಗಳಾದ ಕೇಶವ ಕೆ. ಕೋಟ್ಯಾನ್, ಹರೀಶ್ ಜಿ. ಸಾಲ್ಯಾನ್, ಧರ್ಮೇಶ್ ಎಸ್. ಸಾಲ್ಯಾನ್, ಜತೆ ಕೋಶಾಧಿಕಾರಿ ಸದಾಶಿವ ಎ. ಕರ್ಕೇರ, ಸದಸ್ಯ ಧರ್ಮಪಾಲ ಅಂಚನ್, ಅಕ್ಷಯ ಮಾಸಿಕದ ಸಹಾಯಕ ಸಂಪಾದಕ ಹರೀಶ್ ಪೂಜಾರಿ ಮೊದಲಾದವರು ಸಹಕರಿಸಿದರು. ಅಮೃತ ಮಹೋತ್ಸವ ಪ್ರಯುಕ್ತ ಬೆಳಗ್ಗೆ ಸತ್ಯನಾರಾಯಣ ಪೂಜೆ ನಡೆಯಿತು. ಅತಿಥಿ-ಗಣ್ಯರು 75 ದೀಪಗಳನ್ನು ಪ್ರಜ್ವಲಿಸಿ ಸಮಾರಂಭವನ್ನು ಉದ್ಘಾಟಿಸಿದರು. ಯಕ್ಷಗಾನ ಮಂಡಳಿಯ ಭಾಗವತ ಮುದ್ದು ಅಂಚನ್ ಪ್ರಾರ್ಥನೆಗೈದರು. ಸಾಂಸ್ಕೃತಿಕ ಉಪಸಮಿತಿಯ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಅವರು ಸಮ್ಮಾನಿತರ ಹೆಸರನ್ನು ವಾಚಿಸಿ, ವಂದಿಸಿದರು.
ಯಕ್ಷಗಾನ ಕಲಾವಿದರಿಗೆ ಪ್ರೋತ್ಸಾಹ ಕರ್ತವ್ಯ
ಯಕ್ಷಗಾನ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಪ್ರತಿಯೋರ್ವ ಕಲಾಭಿಮಾನಿಗಳ ಕರ್ತವ್ಯವಾಗಿದೆ. ಗುರುನಾರಾಯಣ ಯಕ್ಷಗಾನ ಮಂಡಳಿಯ ಬೆಳವಣಿಗೆಯಲ್ಲಿ ಸಮಾಜದ ಅನೇಕ ಹಿರಿಯರ ಶ್ರಮ ಅಪಾರವಾಗಿದೆ. ಮುಂಬಯಿ ಮಹಾನಗರ ಯಕ್ಷಗಾನವನ್ನು ಉಳಿಸಿ-ಬೆಳೆಸುವಲ್ಲಿ ಮಹತ್ತರವಾದ ಕೊಡುಗೆ ನೀಡಿದೆ.
-ಎಲ್. ವಿ. ಅಮೀನ್
ಮಾಜಿ ಅಧ್ಯಕ್ಷರು, ಬಿಲ್ಲವರ
ಅಸೋಸಿಯೇಶನ್ ಮುಂಬಯಿ
ದಿ| ಜಯ ಸಿ. ಸುವರ್ಣರ ಸೇವೆ ಅಭಿನಂದನೀಯ
ಗುರುನಾರಾಯಣ ಯಕ್ಷಗಾನ ಮಂಡಳಿಗೆ ಹೊಸ ಆಯಾಮ ನೀಡುವಲ್ಲಿ ದಿ| ಜಯ ಸಿ. ಸುವರ್ಣರ ಸೇವೆ ಅಭಿನಂದನೀಯ. ಅವರು ಹಾಕಿಕೊಟ್ಟ ಮಾರ್ಗದಿಂದ ಮಂಡಳಿ ಇನ್ನಷ್ಟು ಬೆಳಗಲಿ.
-ಶ್ಯಾಮ್ ಎನ್. ಶೆಟ್ಟಿ ಮಾಜಿ ಅಧ್ಯಕ್ಷರು, ಬಾಂಬೆ ಬಂಟ್ಸ್ ಅಸೋಸಿಯೇಶನ್
ಶ್ರೇಷ್ಠ ಕಲಾವಿದನಾಗಲು ಸಾಧ್ಯ
ಗುರುನಾರಾಯಣ ಯಕ್ಷಗಾನ ಮಂಡಳಿಯಲ್ಲಿ ಗೆಜ್ಜೆ ಕಟ್ಟಿ ಸೇವೆ ಮಾಡುವ ಭಾಗ್ಯ ನನಗೂ ದೊರೆತಿದೆ ಎನ್ನಲು ಅಭಿಮಾನವಾಗುತ್ತಿದೆ. ಯಕ್ಷಗಾನ ಕಲಾವಿದ ಒಬ್ಬ ಶ್ರೇಷ್ಠ ಕಲಾವಿದನಾಗಲು ಸಾಧ್ಯವಿದೆ. ಕಲಾವಿದರ ಬಾಳಿಗೆ ಬೆಳಕಾಗುವ ಯೋಜನೆಗಳನ್ನು ಅಮೃತ ಮಹೋತ್ಸವದ ಸಂದರ್ಭ ಮಾಡಬೇಕು.
-ಶ್ರೀನಿವಾಸ ಸಾಫಲ್ಯ, ಅಧ್ಯಕ್ಷರು, ಸಾಫಲ್ಯ ಸೇವಾ ಸಂಘ ಮುಂಬಯಿ
ಕಲಾ ಮಂಡಳಿಗೆ ಅಭಿನಂದನೆಗಳು
ನಮ್ಮ ಹಿರಿಯರು ಶತಮಾನಗಳ ಹಿಂದೆ ಮುಂಬಯಿಗೆ ಆಗಮಿಸಿ ಇಲ್ಲಿ ಸಂಘಟನೆಗಳನ್ನು ಸ್ಥಾಪಿಸಿ, ಅದರೊಂದಿಗೆ ತುಳುನಾಡಿನ ಸಂಸ್ಕೃತಿಯ ಯಕ್ಷಗಾನವನ್ನು ಬೆಳೆಸಿದರು. ಇಂದು ಅಮೃತ ಮಹೋತ್ಸವ ಆಚರಿಸುತ್ತಿರುವ ಗುರುನಾರಾಯಣ ಯಕ್ಷಗಾನ ಕಲಾ ಮಂಡಳಿಗೆ ಅಭಿನಂದನೆಗಳು.
-ವಸಂತ್ ಶೆಟ್ಟಿ ಪಲಿಮಾರು
ಅಧ್ಯಕ್ಷರು, ಮುಲುಂಡ್ ಬಂಟ್ಸ್
ಯಕ್ಷಗಾನ ಉಳಿಸಿ-ಬೆಳೆಸೋಣ
ಯಕ್ಷಗಾನ ನವರಸಗಳಿಂದ ಕೂಡಿದ ಕಲೆಯಾಗಿದ್ದು. ಇದನ್ನು ಉಳಿಸಿ-ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ನಾವು ಶ್ರಮಿಸೋಣ.
-ವಿದ್ಯಾನಂದ ಎಸ್. ಕರ್ಕೇರ
ಸಿಇಒ, ಭಾರತ್ ಬ್ಯಾಂಕ್
ಚಿತ್ರ-ವರದಿ : ಸುಭಾಶ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು
BS ಯಡಿಯೂರಪ್ಪನೇ ನನ್ನನ್ನು ವಾಪಸ್ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ
Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್ ವಶ: ಜಿಲ್ಲಾಧಿಕಾರಿ ಮಾಹಿತಿ
K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್ ಕೊಡಿಸಲಿ: ಮಧು