ಉದಯ ಶೆಟ್ಟಿ ದಂಪತಿಯಿಂದ ಆಹಾರ ಕಿಟ್ ವಿತರಣೆ
Team Udayavani, Jun 12, 2021, 12:51 PM IST
ಮುಂಬಯಿ: ಛತ್ರಪತಿ ಶಿವಾಜಿ ಮಹಾರಾಜ ಪ್ರಶಸ್ತಿ ವಿಜೇತ ವೇಟ್ಲಿಫ್ಟರ್ ಉದಯ ಶೆಟ್ಟಿ ಮತ್ತು ವೀಣಾ ಶೆಟ್ಟಿ ದಂಪತಿ ಕಳೆದ ಒಂದು ವಾರದಿಂದ ಅಂಧೇರಿ ಪಶ್ಚಿಮ, ಜೋಗೇಶ್ವರಿ ಹಾಗೂ ಬೊರಿವಲಿ ಪರಿಸರದಲ್ಲಿ ಲಾಕ್ಡೌನ್ನಿಂದಾಗಿ ಆರ್ಥಿಕ ಸಂಕಷ್ಟಗೊಳಗಾದ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ಮಾನವೀಯತೆ ಮೆರೆದಿದ್ದಾರೆ.
ಉದಯ ಶೆಟ್ಟಿಯವರ ತಂದೆ ಸದಾಶಿವ ಎನ್. ಶೆಟ್ಟಿ ಹಾಗೂ ಅತ್ತೆ ಇಂದಿರಾ ಶೆಟ್ಟಿ ಅವರ ಸಂಸ್ಮರಣಾರ್ಥಕವಾಗಿ ಉದಯ ಶೆಟ್ಟಿ ದಂಪತಿ ಸ್ವಂತ ಖರ್ಚಿನಿಂದ ಈಗಾಗಲೇ ಸುಮಾರು 300 ಕುಟುಂಬಗಳಿಗೆ ಒಂದು ತಿಂಗಳಿಗೆ ಬೇಕಾದ ಅಕ್ಕಿ ಹಾಗೂ ಇತರ ದವಸ ಧಾನ್ಯಗಳನ್ನು ಅವರ ಮನೆಗೆ ಭೇಟಿ ನೀಡಿ ವಿತರಿಸಿದ್ದಾರೆ. ಈ ಕಾರ್ಯವನ್ನು ಇನ್ನೂ ಮುಂದುವರಿಸುದಾಗಿ ಅವರು ತಿಳಿಸಿದ್ದಾರೆ.
ಖ್ಯಾತ ಕ್ರೀಡಾಪಟು ಉದಯ ಶೆಟ್ಟಿಯವರು ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಉದ್ಯೋಗದಲ್ಲಿದ್ದ ಸಂದರ್ಭ ಅನೇಕ ತುಳು-ಕನ್ನಡಿಗರಿಗೆ ಬ್ಯಾಂಕ್ನಲ್ಲಿ ನೌಕರಿಯನ್ನು ಒದಗಿಸಿದ್ದು, ಜನಸೇವೆಯನ್ನು ಮಾಡುತ್ತಾ ಸ್ವಯಂ ನಿವೃತ್ತಿ ಹೊಂದಿ ಸ್ವಂತ ಹೊಟೇಲ್ ಉದ್ಯಮವನ್ನು ನಡೆಸುತ್ತಿದ್ದಾರೆ.