ಸಲೂನ್ ಶಿವಾಸ್ ಸೆಲ್ಯೂಟ್ ಸಂಸ್ಥೆ ಗೆ ಲೊಓರಿಯಲ್ ಪ್ಯಾರಿಸ್ ವಿದೇಶಿ ತಂಡ ಭೇಟಿ
Team Udayavani, Apr 3, 2022, 10:35 AM IST
ಮುಂಬಯಿ: ಬಾಲಿವುಡ್ ರಂಗದಲ್ಲಿ ಹೇರ್ ಸ್ಟೈಲೋ ಮೂಲಕ ಸೆಲೆಬ್ರಟಿ ಕೇಶವಿನ್ಯಾಸಕ ಪ್ರಸಿದ್ಧಿಯ ಡಾ| ಶಿವರಾಮ ಕೆ. ಭಂಡಾರಿ ಕಾರ್ಕಳ ಆಡಳಿತದ ಶಿವಾಸ್ ಹೇರ್ ಡಿಸೈನರ್ ಪ್ರೈ. ಲಿ. ಸಂಸ್ಥೆಯ ಖಾರ್ ಪಶ್ಚಿಮದ ಸಲೂನ್ ಶಿವಾಸ್ ಸೆಲ್ಯೂಟ್ ಸಂಸ್ಥೆಗೆ ಲೊಓರಿಯಲ್ ಪ್ರೊಫೆಶನಲ್ ಪ್ಯಾರಿಸ್ ಇದರ ವಿದೇಶಿ ತಂಡವು ಭೇಟಿ ನೀಡಿ ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿತು.
ಲೊಓರಿಯಲ್ನ ಪ್ರಧಾನ ಪ್ರಬಂಧಕ ಅಸೀಮ್ ಕೌಶಿಕ್, ಲೊಓರಿಯಲ್ ಭಾರತದ ನಿರ್ದೇಶಕ ಡಿ. ಪಿ. ಶರ್ಮ ಹಾಗೂ ಕೆರಸ್ಟಸೆ ಪ್ಯಾರಿಸ್ನ ಭಾರತೀಯ ಸಹಾಯಕ ಮಹಾ ಪ್ರಬಂಧಕ ಪ್ರಶಾಂತ್ ಹಿರೇಮಠ್ ನೇತೃತ್ವದ ತಂಡದಲ್ಲಿ ತೇಜಸ್ ಪಾಟೇಲ್, ಆಕಾಶ್ ಕುಕ್ರೇಜಾ ಹಾಗೂ ಈಜಿಪ್ಟ್, ಮೊರಕ್ಕೊ, ಥೈಲ್ಯಾಂಡ್, ಸಿಂಗಾಪುರ್ ಸಹಿತ ವಿವಿಧ ರಾಷ್ಟ್ರಗಳ ಮುಖ್ಯಸ್ಥರಾದ ಗುಲ್ಸಹಾ ಕಾಮ್ಶಿಮಿಲ್ಮಾಜ್, ಅಕಿಕೊ ಕಿಟೋ, ಲೆವೆಂಟ್ ಅಲ್ಲೊವಿ, ಮೊನಾಲಿಸಾ ಡೊವೆರ್ಹಾ, ಲಿಡಿಯಾ ಅಚೆಯ್ಕ, ಮ್ಯಾಥ್ಯುಗ್ನಾನ್, ಜೂಲಿಯೆಟ್ ಡೂ, ತನಿಷಾ ಗೋವಿಂದ ರಾಜನ್, ಸುಹಾಸ್ ವಿಜಯನ್, ಬಿನೈಫರ್ ಪರ್ದಿವಾಲ್ಲಾ, ಒಸಮಾ ಒಗ್ಲಾ, ಚಂಟಲ್ ಇಸ್ಟೆಫನೆ, ನಿಕೋಲಾಸ್ ಚಮಾಟೆ, ಸಿಹಾಮ್ ಚೆಹಾಬ್, ಬೆಸೆಂಟ್ ಝೈಟಾಯ್ನ, ಗಾೖಜ್ಹ್ಲನ್ ಹೈನ್, ಬೂನ್ಯಾನುಚ್ ಥಮ್ವಾರಾನಾನ್, ನಾವ್ಹಾರೋ ಕೆನಿತ್, ಲಿ ಇಂಗ್ಚಾನೊಕ್ ಲಿಝ್ ಮತ್ತು ಸಿನ್ ಲೀ ಆಗಮಿಸಿದ್ದು, ಪ್ರತಿಯೊಬ್ಬರಿಗೂ ಭಾರತೀಯ ಸಂಪ್ರದಾಯದಂತೆ ಆರತಿಗೈದು, ಹಣೆಗೆ ಕುಂಕುಮ ತಿಲಕವಿತ್ತು, ಪುಷ್ಪಹಾರವನ್ನಿತ್ತು ಸ್ವಾಗತಿಸಲಾಯಿತು.
ಈ ಸಂದರ್ಭ ಲೊಓರಿಯಲ್ನ ಪ್ರಧಾನ ಪ್ರಬಂಧಕ ಅಸೀಮ್ ಕೌಶಿಕ್ ಮಾತನಾಡಿ, ಹಣವೇ ಸರ್ವಸ್ವವಲ್ಲ, ಬದಲಾಗಿ ಮನೋಬಲವೂ ಮುಖ್ಯ ಎಂಬುವುದನ್ನು ಶಿಮರಾಮ ಭಂಡಾರಿ ತೋರಿಸಿಕೊಟ್ಟಿದ್ದಾರೆ. ಅವರ ಸೇವಾವೈಖರಿ ಬಗ್ಗೆ ತಿಳಿಯಲು ಜಗತ್ತೇ ಉತ್ಸುಕವಾಗಿದೆ. ಅವರು ತನ್ನ ಸಿಬಂದಿಯನ್ನು ಪರಿಣತರನ್ನಾಗಿಸಿ ವೃತ್ತಿಪರ ಉದ್ಯೋಗಿಗಳನ್ನಾಗಿಸಿದ್ದಾರೆ. ಅದರಲ್ಲೂ ಇತ್ತೀಚೆಗೆ ಶಿವಾ ಸ್ಥಾಪಿಸಿದ ಸಲೂನ್ ಶಿವಾಸ್ ಸೆಲ್ಯೂಟ್ ಹೆಸರಿನ ಉದ್ಯಮ ಜಾಗತಿಕವಾಗಿ ಹೆಸರು ಮಾಡುತ್ತಿದೆ. ಈ ಬಗ್ಗೆ ತಿಳಿಯಲು ನಾವೂ ಉತ್ಸುಕತರಾಗಿದ್ದು, ಇದರ ವೈಶಿಷ್ಟ್ಯವನ್ನು ಕಣ್ಣಾರೆ ಕಾಣಲು ನಾವು ಈ ಅವಕಾಶ ಬಳಸಿಕೊಂಡಿದ್ದೇವೆ. ಶಿವಾಸ್ ಜೀವನ ಚರಿತ್ರೆಯ ಕೃತಿ ಯುವ ಪೀಳಿಗೆಗೆ ಸ್ಫೂರ್ತಿಯಾಗಿದೆ. ಜಗತ್ತಿನಾದ್ಯಂತ ವ್ಯವಹಾರ ನಿರತ ಲೊಓರಿಯಲ್ ಸಂಸ್ಥೆಯಿಂದ ಶಿವಾಸ್ನ ಶಿವರಾಮ ಭಂಡಾರಿ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರ ಕೇಶ ವಿನ್ಯಾಸ ವೃತ್ತಿ ಮತ್ತು ಸೌದರ್ಯ ಸೇವಾ ನಿಷ್ಠೆ ನಮ್ಮನ್ನು ಇಲ್ಲಿಗೆ ಆಕರ್ಷಿಸುವಂತೆ ಮಾಡಿದೆ. ಇವರೋರ್ವ ಅಸಾಮಾನ್ಯ ಕೇಶ ಪರಿಣತ ಎಂಬುವುದನ್ನು ಕೇಶ ವಿನ್ಯಾಸಕರ ಜಾಗತಿಕ ಸಮ್ಮೇಳನಗಳಲ್ಲಿ ಕೇಳಿ ನಮ್ಮೆಲ್ಲರಿಗೂ ಸಂತೋಷವಾಗಿದೆ ಎಂದು ತಿಳಿಸಿ ಶಿವಾಸ್ ಪರಿವಾರವನ್ನು ಅಭಿನಂದಿಸಿದರು.
ಈ ಸಂದರ್ಭ ಶಿವಾಸ್ ಪರಿವಾರದ ನಿರ್ದೇಶಕಿ ಅನುಶ್ರೀ ಎಸ್. ಭಂಡಾರಿ, ರಾಘವ ವಿ. ಭಂಡಾರಿ, ಶ್ವೇತಾ ಆರ್. ಭಂಡಾರಿ, ಮೊಹಮ್ಮದ್ ಇಲಿಯಾಸ್, ನಿಶಾ ಶೆಟ್ಟಿ, ಅಭಿಷೇಕ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.