ಶ್ರೀ ಸಸಿಹಿತ್ಲು ಭಗವತೀ ತೀಯಾ ಸಂಘ : 63ನೇ ವಾರ್ಷಿಕ ಮಹಾಪೂಜೆ
Team Udayavani, Apr 17, 2018, 4:31 PM IST
ಮುಂಬಯಿ: ಶ್ರೀ ಸಸಿಹಿತ್ಲು ಭಗವತೀ ತೀಯಾ ಸಂಘ ಮುಂಬಯಿ ಇದರ ವತಿಯಿಂದ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ವರ್ಷಂಪ್ರತಿ ಜರಗುತ್ತಿರುವ ನಡಾವಳಿ ಮಹೋತ್ಸವದ ಅಂಗವಾಗಿ 63 ನೇ
ವಾರ್ಷಿಕ ಮಹಾಪೂಜೆಯು ಎ. 14 ರಂದು ಭಾಂಡೂಪ್ ಪಶ್ಚಿಮದ ಸಾಂಗ್ಲೀಲಾ ಬಿಸ್ಕಿಟ್ ಕಂಪೆನಿಯ ಎದುರುಗಡೆಯಿರುವ ಎಲ್ಬಿಎಸ್ ಮಾರ್ಗದ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಪೂರ್ವಾಹ್ನ 10ರಿಂದ ಗಣಹೋಮ, ಅಪರಾಹ್ನ 4.30 ರಿಂದ ಕಲಶ ಪ್ರತಿಷ್ಠೆ, ಅಲಂಕಾರ ಪೂಜೆ, ಸಂಜೆ 5 ರಿಂದ ಅರಸಿನ ಕುಂಕುಮ, ಆನಂತರ ಶ್ರೀ ಕೃಷ್ಣಪ್ರಸಾದಿತ ಸ್ವಾಮಿ ನಿತ್ಯಾನಂದ ಭಜನ ಮಂಡಳಿ ಭಾಂಡೂಪ್ ಇವರಿಂದ ಭಜನ ಕಾರ್ಯಕ್ರಮ ನಡೆಯಿತು.
ಅಲ್ಲದೆ ದಿನೇಶ್ ವಿನೋದ್ ಕೋಟ್ಯಾನ್ ಮತ್ತು ಬಳಗದವರಿಂದ ವಾದ್ಯ ವಾದನ, ರಾತ್ರಿ 7ರಿಂದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾತ್ರಿ 8ರಿಂದ ಬಲಿ ಉತ್ಸವ, ಮಹಾಮಂಗಳಾರತಿ, ರಾತ್ರಿ 9ರಿಂದ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನೆರವೇರಿತು.
ಸಮಾಜ ಬಾಂಧವರು ಹಾಗೂ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು. ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯರಾದ ಟಿ. ಆರ್. ಸಾಲ್ಯಾನ್ ಮತ್ತು ತೀಯಾ ಸಮಾಜದ ಯುವ ಸೇನಾನಿ ತರುಣ್ ದಯಾ ಸಾಲ್ಯಾನ್ ಪರವಾಗಿ ಇವರ ಮಾತಾಪಿತ ದಯಾ ಸಾಲ್ಯಾನ್ ಮತ್ತು ಶೈಲಜಾ ಡಿ. ಸಾಲ್ಯಾನ್ ದಂಪತಿಯನ್ನು ಸಮ್ಮಾನಿಸಲಾಯಿತು.
ತೀಯಾ ಸಮಾಜದ ಮುಂದಾಳು ರವಿ ಮಂಜೇಶ್ವರ, ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಶ್ರೀ ಸಸಿಹಿತ್ಲು ಭಗವತೀ ತೀಯಾ ಸಂಘ ಮುಂಬಯಿ ಇದರ ಅಜೀವ ಗೌರವಾಧ್ಯಕ್ಷ ಲಾಜರ್ ಟಿ. ಎಂ. ಕೋಟ್ಯಾನ್, ಅಧ್ಯಕ್ಷ ಚಂದ್ರಶೇಖರ ಕೆ. ಪಾಲನ್, ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ ಟಿ. ಬೆಳ್ಚಡ, ಗೌರವ ಪ್ರಧಾನ ಕೋಶಾಧಿಕಾರಿ ರಮೇಶ್ ಬಿ. ಸಾಲ್ಯಾನ್, ವಿದ್ಯಾನಿಧಿ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಎಸ್. ಕೋಟ್ಯಾನ್, ಪೂಜಾ ಸಮಿತಿಯ ಅಧ್ಯಕ್ಷ ವಸಂತ ಬಿ. ಕರ್ಕೇರ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯೆಯರು, ಸದಸ್ಯರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಯಕ್ಷಗಾನ ಕಲಾವಿದ ರಾಜಾ ತುಂಬೆ ಇವರು ಕಾರ್ಯಕ್ರಮ ನಿರ್ವಹಿಸಿದರು.
ಚಿತ್ರ-ವರದಿ: ಸುಭಾಶ್ ಶಿರಿಯಾ