ಭಾರತ ಅದ್ಭುತ ಕಬಡ್ಡಿ ಆಟಗಾರರ ಗಣಿ
ಉದಯವಾಣಿ ಸಂದರ್ಶನದಲ್ಲಿ ಬುಲ್ಸ್ ತಂಡದ ನಾಯಕ ಪವನ್
Team Udayavani, Feb 23, 2022, 6:15 AM IST
ದಿಲ್ಲಿಯ ಖ್ಯಾತ ಕಬಡ್ಡಿ ಆಟಗಾರ ಪವನ್ ಸೆಹ್ರಾವತ್. ಕೂಟದ ಘಾತಕ ದಾಳಿಗಾರರಾದ ಅವರು ಪ್ರಸ್ತುತ ಬುಲ್ಸ್ ತಂಡದ ನಾಯಕ. ತಮ್ಮ ಮಿಂಚಿನ ಕಾಲ್ಚಳಕದಿಂದ ಎದು ರಾಳಿ ತಂಡಗಳನ್ನು ಬೆಚ್ಚಿಬೀಳಿಸಿರುವ ಅವರ ನೇತೃತ್ವದಲ್ಲೇ ಬುಲ್ಸ್ ಸೆಮಿಫೈನಲ್ಗೇರಿದೆ. ಈ ಹಿನ್ನೆಲೆಯಲ್ಲಿ ಅವರ ಸಂದರ್ಶನ ಇಲ್ಲಿದೆ.
ಬೆಂಗಳೂರು ಪರ ಆಡುವುದು ನಿಮಗೆ ಹೇಗನಿಸುತ್ತದೆ? ನೀವು ಬೇರೊಂದು ರಾಜ್ಯದಿಂದ ಬಂದಿದ್ದೀರಿ, ಆದರೆ ಕರ್ನಾಟಕದ ಭಾವನೆಗಳನ್ನು ಪ್ರತಿನಿಧಿಸುವ ಸ್ಥಾನದಲ್ಲಿದ್ದೀರಿ. ನೀವು ಕನ್ನಡಿಗರಲ್ಲದಿದ್ದರೂ, ಕರ್ನಾಟಕದ ಜನ ನಿಮ್ಮನ್ನು, ನಮ್ಮವರು ಎಂದೇ ಸ್ವೀಕರಿಸಿದ್ದಾರೆ. ಇದು ನಿಮ್ಮಲ್ಲಿ ಎಂತಹ ಭಾವನೆಗಳನ್ನುಂಟು ಮಾಡುತ್ತದೆ?
ಉ: ಬೆಂಗಳೂರು ಪರ ಆಡುವ ಅನುಭವ ಅನನ್ಯವಾದದ್ದು. ನಾವೀಗಾಗಲೇ ಲೀಗ್ನಲ್ಲಿ ಸೆಣೆಸಿ, ಸೆಮಿಫೈನಲ್ಗೆ ಬಂದಿದ್ದೇವೆ. ತಂಡದ ಅಭಿಮಾನಿಗಳ ಬಗ್ಗೆ ಬಹಳ ಪ್ರೀತಿಯಿದೆ. ಅವರಿಗೆ ನನ್ನೆದೆಯಲ್ಲಿ ಅಪೂರ್ವ ಸ್ಥಾನವಿದೆ. ಬೆಂಗಳೂರು ಬುಲ್ಸ್ ಸೇರಿಕೊಂಡಾಗಿನಿಂದ ಪಂದ್ಯದ ವೇಳೆ ಮತ್ತು ನಂತರ ಅತ್ಯುತ್ತಮವಾದದ್ದನ್ನೇ ನೀಡಲು ಯತ್ನಿಸಿದ್ದೇನೆ. ಈ ತಂಡವನ್ನು ಮುನ್ನಡೆಸುವುದು ನನಗೊಂದು ಗೌರವ. ತಂಡ ಈ ಬಾರಿ ಪ್ರಶಸ್ತಿ ಗೆಲ್ಲುವಂತೆ ಮಾಡುವುದು ನಮ್ಮ ಗುರಿ.
ಜೈವಿಕ ಸುರಕ್ಷಾ ವಲಯದ ಬಗ್ಗೆ ಏನನ್ನಿಸುತ್ತೆ? ದೀರ್ಘಕಾಲದ ಸುರûಾ ವಲಯದಲ್ಲಿನ ಜೀವನ ನಿಮ್ಮನ್ನು ಸುಸ್ತು ಮಾಡಿದೆಯಾ ಅಥವಾ ಸಹಜವಾಗಿಯೇ ಇದ್ದೀರಾ? ಮಾಮೂಲಿ ಸ್ಥಿತಿಗೂ, ಸುರûಾ ವಲಯದ ಬದುಕಿಗೂ ಏನು ವ್ಯತ್ಯಾಸ?
ಉ: ಅಂತಹ ಮುಖ್ಯ ವ್ಯತ್ಯಾಸಗಳೇನಿಲ್ಲ. ಪ್ರಾಮಾಣಿಕವಾಗಿ ಹೇಳುವುದಾದರೆ ಒಂದು ನಿರ್ದಿಷ್ಟ ಜಾಗದಲ್ಲಿರಬೇಕು ಅನ್ನುವುದೊಂದೇ ವ್ಯತ್ಯಾಸ. ಉಳಿದಂತೆ ನಾವೇನು ಮಾಡಬಹುದೋ ಅದನ್ನು ಇಲ್ಲಿಯೂ ಮಾಡಬಹುದು. ನಮ್ಮ ಮನರಂಜನೆಗೆ ಬೇಕಾದ ವ್ಯವಸ್ಥೆಯಿದೆ. ಜಿಮ್ ಇದೆ, ನಮ್ಮ ಬಗ್ಗೆ ಪೂರ್ಣ ಕಾಳಜಿ ವಹಿಸುವ ಅತ್ಯುತ್ತಮ ಸಿಬಂದಿ ಇದ್ದಾರೆ. ನಾವು ಈಗ ಎಲ್ಲಿದ್ದೀವೋ ಅಲ್ಲೇ ಸಂತೋಷದಿಂದ ಇದ್ದೇವೆ. ಪ್ರಶಸ್ತಿ ಗೆಲ್ಲುವುದಕ್ಕಾಗಿ ಇಲ್ಲಿದ್ದೇವೆ, ಅದೊಂದೇ ಈಗ ಮನಸ್ಸಿನಲ್ಲಿರುವುದು.
ಬುಲ್ಸ್ ಈ ಬಾರಿಯ ಋತುವನ್ನು ಭರ್ಜರಿಯಾಗಿಯೇ ಆರಂಭಿಸಿತ್ತು. ದೀರ್ಘಕಾಲ ಅಗ್ರಸ್ಥಾನದಲ್ಲೂ ಇತ್ತು. ಆದರೆ ದಿಢೀರನೇ ಐದನೇ ಸ್ಥಾನಕ್ಕೆ ಕುಸಿಯಿತು. ಈ ಕುಸಿತಕ್ಕೆ ಕಾರಣವೇನು?
ಉ: ಭಾರತದಲ್ಲಿಯೇ ಪ್ರೊ ಕಬಡ್ಡಿ ಅತ್ಯಂತ ಸ್ಪರ್ಧಾತ್ಮಕ ಕೂಟಗಳಲ್ಲೊಂದು. ಇದರಲ್ಲಿ ಶ್ರೇಷ್ಠ ಆಟಗಾರರು ಆಡುತ್ತಾರೆ. ಯಾವಾಗಲೂ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು, ಪಂದ್ಯದ ವೇಳೆ ಶೇ.100 ಯತ್ನ ಹಾಕುವುದು ನಮ್ಮ ಗುರಿ. ಆರಂಭದಲ್ಲಿ ಅತ್ಯುತ್ತಮವಾಗಿಯೇ ಆಡಿದೆವು. ಆನಂತರ ರಕ್ಷಣಾ ವಿಭಾಗದಲ್ಲಿ ಕೆಲವು ಸವಾಲುಗಳನ್ನು ಎದುರಿಸಿದೆವು. ಅದನ್ನು ನಮ್ಮ ತರಬೇತುದಾರರು ಮಾತನಾಡಿ ಸರಿ ಮಾಡಿದರು. ನಾವು ಅದಕ್ಕೊಂದು ಯೋಜನೆ ರೂಪಿಸಿ, ಹಾಗೆಯೇ ಆಡಿ ಯಶಸ್ವಿಯಾಗಿದ್ದೇವೆ.
– ಕೆ.ಪೃಥ್ವಿಜಿತ್