ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್: ಸಿಂಧು ಸ್ವರ್ಣ ಸಂಭ್ರಮ
Team Udayavani, Dec 17, 2018, 6:00 AM IST
ಗ್ವಾಂಗ್ಝೂ: ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು “ಫೈನಲ್ ಸೋಲಿನ ಕಂಟಕ’ದಿಂದ ಮುಕ್ತರಾಗಿದ್ದಾರೆ. ಸ್ವರ್ಣ ಸಂಭ್ರಮದಲ್ಲಿ ತೇಲಾಡಿದ್ದಾರೆ.
ಗ್ವಾಂಗ್ಝೂನಲ್ಲಿ ನಡೆದ ವರ್ಷಾಂತ್ಯದ “ಬಿಡಬ್ಲ್ಯುಎಫ್ ಟೂರ್ ಫೈನಲ್ಸ್’ ಬ್ಯಾಡ್ಮಿಂಟನ್ ಕೂಟದ ಚಾಂಪಿಯನ್ಶಿಪ್ ಗೆದ್ದು ದೇಶದ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ನೂತನ ಅಧ್ಯಾಯವೊಂದನ್ನು ಬರೆದಿದ್ದಾರೆ. ಇದು ಭಾರತಕ್ಕೆ ಒಲಿದ ಮೊತ್ತಮೊದಲ ಬಿಡಬ್ಲ್ಯುಎಫ್ ಟೂರ್ ಫೈನಲ್ಸ್ ಪ್ರಶಸ್ತಿ ಎಂಬುದು ಖುಷಿಯನ್ನು ಇಮ್ಮಡಿಗೊಳಿಸಿದೆ.
ರವಿವಾರ ನಡೆದ ವನಿತಾ ಸಿಂಗಲ್ಸ್ ಫೈನಲ್ನಲ್ಲಿ 2017ರ ವಿಶ್ವ ಚಾಂಪಿಯನ್ ಜಪಾನಿನ ನೊಜೊಮಿ ಒಕುಹಾರ ಅವರನ್ನು ಸಿಂಧು 21-19, 21-17 ನೇರ ಗೇಮ್ಗಳಿಂದ ಸೋಲಿಸಿದರು. ಇದು ಈ ವರ್ಷ ಸಿಂಧು ಅವರಿಗೆ ಒಲಿದ ಮೊದಲ ಪ್ರಶಸ್ತಿಯಾಗಿದೆ. 2018ರ ಋತುವಿನುದ್ದಕ್ಕೂ ಪ್ರಶಸ್ತಿ ಬರಗಾಲದಲ್ಲಿದ್ದ ಹೈದರಾಬಾದಿ ಆಟಗಾರ್ತಿ, ವರ್ಷದ ಕೊನೆಯ ಕೂಟದಲ್ಲಿ ಬಂಗಾರವನ್ನು ಬೇಟೆಯಾಡುವ ಮೂಲಕ ಅಮೋಘ ಸಾಧನೆಗೈದರು.
ಸಿಂಧು ಎಚ್ಚರಿಕೆಯ ಆಟ
ಸಾಮಾನ್ಯವಾಗಿ ಇತ್ತೀಚಿನ ಕೂಟಗಳ ಫೈನಲ್ ತನಕ ಬಂದು ಪ್ರಶಸ್ತಿಯನ್ನು ಕೈಚೆಲ್ಲುತ್ತಿದ್ದ ಸಿಂಧು ಈ ಬಾರಿ ಎಚ್ಚರಿಕೆಯ ಆಟವಾಡಿದರು. ಹಿಂದಿನ ತಪ್ಪು ಮರುಕಳಿಸಬಾರದು ಎಂಬ ದೃಢ ಸಂಕಲ್ಪದಿಂದ ಆಡಿದ್ದು ಸ್ಪಷ್ಟವಾಗಿತ್ತು. ಇದರಲ್ಲಿ ಧಾರಾಳ ಯಶಸ್ಸು ಕಂಡರು.
62 ನಿಮಿಷಗಳ ತನಕ ನಡೆದ ಈ ಪಂದ್ಯ ಸಾಕಷ್ಟು ಪೈಪೋಟಿಯಿಂದ ಕೂಡಿತ್ತು. ಇಬ್ಬರಲ್ಲೂ ಫೈನಲ್ ಜೋಶ್ ತುಂಬಿತ್ತು. ಮೊದಲ ಗೇಮ್ನ ಆರಂಭದಲ್ಲಿ ಒಕುಹಾರ ಹಲವು ತಪ್ಪುಗಳನ್ನು ಮಾಡಿದ್ದರಿಂದ ಸಿಂಧು ಮುನ್ನಡೆ ಕಾಯ್ದುಕೊಂಡರು. ಮತ್ತೆ ಎಚ್ಚರಿಕೆಯ ಆಟವಾಡಿದ ಒಕುಹಾರ ಮುನ್ನಡೆಗೆ ಹತ್ತಿರವಾದರೇ ಹೊರತು ಸಿಂಧು ಅವರನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ. 6-14ರ ಹಿನ್ನಡೆಯಲ್ಲಿದ್ದ ಒಕುಹಾರ 16-16 ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಕೊನೆಯಲ್ಲಿ ಸಿಂಧು ಅತ್ಯುತ್ತಮ ಡ್ರಾಪ್ ಶಾಟ್ ಹೊಡೆದು ಮೊದಲ ಗೇಮ್ ಜಯಿಸಿದರು.
ದ್ವಿತೀಯ ಗೇಮ್ನಲ್ಲೂ ಇದೇ ಆಟ ಮುಂದುವರಿಸಿದ ಸಿಂಧು 6-4 ಅಂಕಗಳ ಮುನ್ನಡೆ ಸಾಧಿಸಿದರು. ಈ ಹಂತದಲ್ಲಿ ಎದುರಾಳಿಯನ್ನು ತಪ್ಪು ಹೊಡೆತಗಳಿಗೆ ಪ್ರೇರೇಪಿಸಿದ ಜಪಾನೀ ಆಟಗಾರ್ತಿ 7-7 ಅಂಕಗಳ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಅನಂತರ ಸಿಂಧು ಎಚ್ಚರಿಕೆಯ ಆಟಕ್ಕಿಳಿದ ಸಿಂಧುಗೆ 17-16 ಅಂಕಗಳ ಸಣ್ಣ ಮುನ್ನಡೆ ಲಭಿಸಿತು. ಅಂತರ ಕಾಯ್ದುಕೊಳ್ಳುತ್ತ ಬಂದ ಸಿಂಧು ಎರಡೇ ಗೇಮ್ಗಳಲ್ಲಿ ಗೆದ್ದು ಬಂದರು.
ಚಾಂಪಿಯನ್ಸ್
ವರ್ಷ ಪುರುಷರ ಸಿಂಗಲ್ಸ್ ವನಿತಾ ಸಿಂಗಲ್ಸ್
2008 ಲೀ ಚಾಂಗ್ ವೀ ಝೂ ಮಿ
2009 ಲೀ ಚಾಂಗ್ ವೀ ವೊಂಗ್ ಮ್ಯೂ ಚೂ
2010 ಲೀ ಚಾಂಗ್ ವೀ ವಾಂಗ್ ಶಿಕ್ಸಿಯಾನ್
2011 ಲಿನ್ ಡಾನ್ ವಾಂಗ್ ಯಿಹಾನ್
2012 ಚೆನ್ ಲಾಂಗ್ ಲೀ ಕ್ಸೆರುಯಿ
2013 ಲೀ ಚಾಂಗ್ ವೀ ಲೀ ಕ್ಸೆರುಯಿ
2014 ಚೆನ್ ಲಾಂಗ್ ತೈ ಜು ಯಿಂಗ್
2015 ಕೆಂಟೊ ಮೊಮೊಟ ನೊಜೊಮಿ ಒಕುಹಾರ
2016 ವಿಕ್ಟರ್ ಅಲೆಕ್ಸೆನ್ ತೈ ಜು ಯಿಂಗ್
2017 ವಿಕ್ಟರ್ ಅಲೆಕ್ಸೆನ್ ಅಕಾನೆ ಯಮಾಗುಚಿ
2018 ಶಿ ಯುಕಿ ಪಿ.ವಿ. ಸಿಂಧು
ಪುರುಷರ ವಿಭಾಗದಲ್ಲಿ ಶಿ ಯುಕಿ ಚಾಂಪಿಯನ್
ಪುರುಷರ ವಿಭಾಗದ ಪ್ರಶಸ್ತಿ ಆತಿಥೇಯ ಚೀನದ ಶಿ ಯುಕಿ ಪಾಲಾಯಿತು. ಫೈನಲ್ನಲ್ಲಿ ಅವರು ಜಪಾನಿನ ಕೆಂಟೊ ಮೊಮೊಟ ವಿರುದ್ಧ 21-12, 21-11 ಅಂತರದ ಸುಲಭ ಜಯ ಸಾಧಿಸಿದರು.
ಪಿ.ವಿ. ಸಿಂಧು ಅವರಂತೆ ಶಿ ಯುಕಿ ಪಾಲಿಗೂ ಇದು ಮೊದಲ ಬಿಡಬ್ಲ್ಯುಎಫ್ ಬ್ಯಾಡ್ಮಿಂಟನ್ ಪ್ರಶಸ್ತಿಯಾಗಿದೆ. ಇವರಿಬ್ಬರೂ 2015ರ ಚಾಂಪಿಯನ್ ಆಟಗಾರರನ್ನು ಸೋಲಿಸಿದ್ದು ವಿಶೇಷವಾಗಿತ್ತು.
“ನೀವೇಕೆ ಪ್ರತೀ ಸಲವೂ ಫೈನಲ್ನಲ್ಲಿ ಸೋಲುತ್ತೀರಿ ಎಂಬ ಪ್ರಶ್ನೆ ನನಗಿನ್ನು ಎದುರಾಗದು. ಈಗ ಚಿನ್ನ ಗೆದ್ದಿದ್ದೇನೆ ನೋಡಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ. 2018ರ ಋತುವನ್ನು ಸುಂದರವಾದ ಗೆಲುವಿನೊಂದಿಗೆ ಮುಗಿಸಿದ್ದೇನೆ. ಇದನ್ನು ಬಣ್ಣಿಸಲು ಪದಗಳಿಲ್ಲ. ಇದಕ್ಕಾಗಿ ಹೆಮ್ಮೆಯಾಗುತ್ತಿದೆ. ಅಭಿಮಾನಿಗಳು ಗ್ವಾಂಗ್ಝೂ ತನಕ ಬಂದು ಪಂದ್ಯ ವೀಕ್ಷಿಸಿದ್ದಾರೆ. ನನ್ನ ಮೇಲೆ ಅಭಿಮಾನ. ಪ್ರೀತಿ ಇರಿಸಿ ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆಗಳು’
– ಪಿ.ವಿ. ಸಿಂಧು
ಸಿಂಧು ಗೆದ್ದ 5 ಪ್ರಮುಖ ಪ್ರಶಸ್ತಿಗಳು
1. 2013ರ ಮಲೇಶ್ಯ ಓಪನ್ನಲ್ಲಿ ಬಂಗಾರ
2013ರ ಮಲೇಶ್ಯ ಓಪನ್ನಲ್ಲಿ ಗು ಜುವಾನ್ ಅವರನ್ನು 21-17, 17-21, 21-19 ಅಂತರದಿಂದ ಮಣಿಸುವ ಮೂಲಕ ಪಿ.ವಿ. ಸಿಂಧು ತಮ್ಮ ವೃತ್ತಿಬದುಕಿನ ಮೊದಲ ಗ್ರ್ಯಾನ್ಪ್ರಿ ಚಿನ್ನದ ಪದಕವನ್ನು ಜಯಿಸಿದರು.
2. ರಿಯೋ ಒಲಿಂಪಿಕ್ಸ್ ಬೆಳ್ಳಿ
2016ರ ರಿಯೋ ಒಲಿಂಪಿಕ್ಸ್ನಲ್ಲಿ ಫೈನಲ್ಗೆ ಲಗ್ಗೆ ಇರಿಸಿದ ಸಿಂಧು ಬೆಳ್ಳಿ ಪದಕ ಗೆದ್ದರು. ಕ್ಯಾರೋಲಿನಾ ಮರಿನ್ ವಿರುದ್ಧ ಮೊದಲ ಗೇಮನ್ನು 21-19ರಿಂದ ಗೆದ್ದರೂ ಉಳಿದೆರಡು ಗೇಮ್ಗಳಲ್ಲಿ ಎಡವಿ ಚಿನ ತಪ್ಪಿಸಿಕೊಂಡರು.
3. 2016ರ ಚೀನ ಓಪನ್ ಸೀರಿಸ್ನಲ್ಲಿ ಸ್ವರ್ಣ
ಒಲಿಂಪಿಕ್ ಬಳಿಕ ಹಿನ್ನಡೆ ಅನುಭವಿಸಿದ್ದ ಸಿಂಧು 2016ರ ಚೀನ ಓಪನ್ ಸೂಪರ್ ಸೀರಿಸ್ ಗೆದ್ದು ಸಂಭ್ರಮಿಸಿದರು. ಫೈನಲ್ನಲ್ಲಿ ಸುನ್ ಯು ಅವರನ್ನು ಮಣಿಸಿದರು. ಸೈನಾ ಬಳಿಕ ಈ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನಿಸಿದರು.
4. 2017ರ ಇಂಡಿಯಾ ಓಪನ್ನಲ್ಲಿ ಚಿನ್ನ
ಕಳೆದ ವರ್ಷ ನಡೆದ ತವರಿನ “ಇಂಡಿಯಾ ಓಪನ್’ ಫೈನಲ್ನಲ್ಲಿ ಕ್ಯಾರೋಲಿನಾ ಮರಿನ್ ಅವರನ್ನು ಮಣಿಸಿ ಸೇಡು ತೀರಿಸಿಕೊಂಡ ಸಿಂಧು ಚಿನ್ನಕ್ಕೆ ಕೊರಳೊಡ್ಡಿದರು. ಪ್ರಶಸ್ತಿಯ ಹಾದಿಯಲ್ಲಿ ಸೈನಾ ನೆಹ್ವಾಲ್, ಸುಂಗ್ ಜಿ ಹ್ಯುನ್ ಅವರನ್ನು ಮಣಿಸಿದ್ದರು.
5. ಬಿಡಬ್ಲ್ಯು ಟೂರ್ ಫೈನಲ್ಸ್ 2018 ಚಾಂಪಿಯನ್
ಸತತವಾಗಿ ಫೈನಲ್ ಸೋಲನುಭವಿಸುತ್ತಿದ್ದ ಸಿಂಧುಗೆ ಪುನರ್ಜನ್ಮ ನೀಡಿದ ಪಂದ್ಯಾವಳಿ. ಒಕುಹಾರ ವಿರುದ್ಧ ನೇರ ಗೇಮ್ಗಳ ಗೆಲುವು. ಈ ಪ್ರಶಸ್ತಿ ಜಯಿಸಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ