ಚೆನ್ನೈ ಟೆಸ್ಟ್ : ಈ ಬಾರಿ ಏನು ಕೌತುಕ ಕಾದಿದೆಯೋ!
Team Udayavani, Feb 4, 2021, 7:45 AM IST
ಚೆನ್ನೈ: ಚೆನ್ನೈನ “ಎಂ.ಎ. ಚಿದಂಬರಂ ಸ್ಟೇಡಿಯಂ” ಕೋವಿಡ್ ನಂತರದಲ್ಲಿ ಭಾರತದ ಮೊದಲ ಟೆಸ್ಟ್ ಪಂದ್ಯದ ಆತಿಥ್ಯಕ್ಕೆ ಸಜ್ಜುಗೊಂಡಿದೆ. ಶುಕ್ರವಾರದಿಂದ ಇಲ್ಲಿ ಭಾರತ-ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಆರಂಭವಾಗಲಿದೆ. ದ್ವಿತೀಯ ಟೆಸ್ಟ್ ಕೂಡ ಇಲ್ಲಿಯೇ ನಡೆಯಲಿದೆ.
ವ್ಯತ್ಯಾಸವಿಷ್ಟೇ… ಮೊದಲ ಟೆಸ್ಟ್ ಪಂದ್ಯಕ್ಕೆ ವೀಕ್ಷಕರ ನಿರ್ಬಂಧವಿದೆ; ಎರಡನೇ ಟೆಸ್ಟ್ನಿಂದ ಶೇ. 50ರಷ್ಟು ಪ್ರೇಕ್ಷಕರಿಗೆ ಕ್ರೀಡಾಂಗಣದ ಬಾಗಿಲು ತೆರೆಯಲ್ಪಡಲಿದೆ.
ಚೆನ್ನೈ ಭಾರತದ ಅತೀ ಪುರಾತನ ಕ್ರಿಕೆಟ್ ತಾಣ. ಭಾರತಕ್ಕೆ ಟೆಸ್ಟ್ ಮಾನ್ಯತೆ ಲಭಿಸಿದ ಎರಡೇ ವರ್ಷದಲ್ಲಿ (1934) ಇಲ್ಲಿ ಮೊದಲ ಪಂದ್ಯ ನಡೆದಿತ್ತು. ಎದುರಾಳಿ ಬೇರೆ ಯಾವುದೇ ಅಲ್ಲ, ಇಂಗ್ಲೆಂಡ್. ಕರ್ನಲ್ ಸಿ.ಕೆ. ನಾಯ್ಡು ಮತ್ತು ಡಗ್ಲಾಸ್ ಜಾರ್ಡಿನ್ ಇತ್ತಂಡಗಳ ನಾಯಕರಾಗಿದ್ದರು. ಭಾರತ 202 ರನ್ನುಗಳ ಭಾರೀ ಅಂತರದಿಂದ ಸೋಲಿಗೆ ತುತ್ತಾಯಿತು.
ಚೆನ್ನೈ ಮತ್ತೂಂದು ಟೆಸ್ಟ್ ಕಾಣಲು 1949ರ ತನಕ ಕಾಯಬೇಕಾಯಿತು. ಅಂದು ಜಾನ್ ಗೊಡಾರ್ಡ್ ಸಾರಥ್ಯದ ವೆಸ್ಟ್ ಇಂಡೀಸ್ ಇಲ್ಲಿ ಸರಣಿಯ 4ನೇ ಟೆಸ್ಟ್ ಆಡಲಿಳಿಯಿತು. ಇನ್ನಿಂಗ್ಸ್ ಹಾಗೂ 193 ರನ್ನುಗಳ ಭಾರೀ ಅಂತರದಿಂದ ಜಯಿಸಿತು. ಭಾರತದ ನಾಯಕರಾಗಿದ್ದವರು ಲಾಲಾ ಅಮರನಾಥ್.
1952ರಲ್ಲಿ ಇಂಗ್ಲೆಂಡ್ ತಂಡದ ಆಗಮನವಾದಾಗ ಭಾರತಕ್ಕೆ ಅದೃಷ್ಟ ಒಲಿಯಿತು. ವಿಜಯ್ ಹಜಾರೆ ನೇತೃತ್ವದ ಭಾರತ ಇನ್ನಿಂಗ್ಸ್ ಹಾಗೂ 8 ರನ್ನುಗಳ ವಿಜಯ ಸಾಧಿಸಿತು. ಇದು ಚೆನ್ನೈಯಲ್ಲಿ ಭಾರತಕ್ಕೆ ಒಲಿದ ಮೊದಲ ಗೆಲುವು.
1932ರಿಂದ ಮೊದಲ್ಗೊಂಡು 2016ರ ತನಕ ಭಾರತವಿಲ್ಲಿ 32 ಟೆಸ್ಟ್ಗಳನ್ನಾಡಿದ್ದು, 14ರಲ್ಲಿ ಜಯ ಸಾಧಿಸಿದೆ. ಆರರಲ್ಲಿ ಸೋತಿದೆ. 11 ಪಂದ್ಯಗಳು ಡ್ರಾಗೊಂಡಿವೆ. ಒಂದು ಟೆಸ್ಟ್ ರೋಚಕ ಟೈ ಆಗಿರುವುದು ಉಲ್ಲೇಖನೀಯ.
ಭಾರತ–ಆಸೀಸ್ ಟೈ ರೋಮಾಂಚನ
144 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ 2,407 ಪಂದ್ಯಗಳು ನಡೆದರೂ ಇದರಲ್ಲಿ ಟೈ ಆದದ್ದು ಕೇವಲ ಎರಡು ಟೆಸ್ಟ್ ಮಾತ್ರ. ಈ ಎರಡರಲ್ಲೂ ಆಸ್ಟ್ರೇಲಿಯ ಕಾಣಿಸಿ ಕೊಂಡಿತ್ತು. ಒಂದರಲ್ಲಿ ಭಾರತವೂ ಇತ್ತು, ಮತ್ತು ಈ ಪಂದ್ಯ ಚೆನ್ನೈಯಲ್ಲಿ ನಡೆದಿತ್ತು!
1986ರ ಪ್ರವಾಸದ ವೇಳೆ ಇಲ್ಲಿ ನಡೆದ ಭಾರತ- ಆಸ್ಟ್ರೇಲಿಯ ನಡುವಿನ ಟೆಸ್ಟ್ ಈಗಿನ ಟಿ20 ಪಂದ್ಯಕ್ಕಿಂತಲೂ ಹೆಚ್ಚಿನ ರೋಮಾಂಚನ ಸೃಷ್ಟಿಸಿತ್ತು. ಅಲನ್ ಬೋರ್ಡರ್ ನಾಯಕತ್ವದ ಆಸೀಸ್ ದ್ವಿತೀಯ ಸರದಿಯನ್ನು ಡಿಕ್ಲೇರ್ ಮಾಡಿ ಭಾರತಕ್ಕೆ 348 ರನ್ನುಗಳ ಟಾರ್ಗೆಟ್ ನೀಡಿತ್ತು. ಅಂತಿಮ ದಿನದ ಪೂರ್ತಿ ಅವಧಿ ಭಾರತದ ಬ್ಯಾಟಿಂಗಿಗೆ ಲಭ್ಯವಿತ್ತು. ಕಪಿಲ್ ಪಡೆ ಒಂದು ವಿಕೆಟಿಗೆ 150ರ ಗಡಿ ದಾಟಿದ ಬಳಿಕ ಒಂದು ಕೈ ನೋಡಿಯೇ ಬಿಡೋಣ ಎಂದು ಹೊರಟಿತು.
ಸಾಮಾನ್ಯವಾಗಿ ನಿಧಾನ ಗತಿಯಲ್ಲಿ ಆಡುವ ರವಿಶಾಸ್ತ್ರಿ ಅಂದು ಬಿರುಸಿನ ಆಟಕ್ಕೆ ಮುಂದಾದದ್ದು ವಿಶೇಷವಾಗಿತ್ತು (40 ಎಸೆತ, ಅಜೇಯ 48 ರನ್, 3 ಫೋರ್, 2 ಸಿಕ್ಸರ್). ಆದರೆ ಕೊನೆಯ ಹಂತದಲ್ಲಿ ವಿಕೆಟ್ಗಳು ಪಟಪಟನೆ ಬೀಳತೊಡಗಿದವು. ಭಾರತ ಸೋಲುವ ಹಂತಕ್ಕೂ ಬಂತು. ಅದೃಷ್ಟವಶಾತ್ ಸ್ಕೋರ್ ಸಮನಾಯಿತು. ಆಗ ಮಣಿಂದರ್ ಸಿಂಗ್ ಲೆಗ್ ಬಿಫೋರ್ ಬಲೆಗೆ ಬಿದ್ದರು. ಅಪರೂಪದ ಟೈ ಪಂದ್ಯಕ್ಕೆ ಚೆನ್ನೈ ಸಾಕ್ಷಿಯಾಯಿತು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮದರಸಾಗಳನ್ನು ಮುಚ್ಚಬೇಕೆನ್ನುವ ಅಸ್ಸಾಂ ಸಿಎಂ ಹೇಳಿಕೆ ಖಂಡಿಸಿದ ಗಾಲಿ ರೆಡ್ಡಿ
ಈ ದೇಶ ಯಾರೋ ಒಬ್ಬರ, ಅದಾನಿ ಸ್ವತ್ತಲ್ಲ : ಬೆಳಗಾವಿಯಲ್ಲಿ ರಾಹುಲ್ ಗಾಂಧಿ
ಉಡುಪಿ:ಹೊಟೇಲ್ಗಳಿಗೆ ತಟ್ಟಿದ ನೀರಿನ ಬಿಸಿ – ಹೆಚ್ಚಿದ ಟ್ಯಾಂಕರ್ಗಳ ಓಡಾಟ
ಅಮೃತಪಾಲ್ ಗಾಗಿ ಶೋಧ; ಐದು ಸಹಚರರರ ವಿರುದ್ಧ NSA ; ಐಎಸ್ಐ ಪಾತ್ರ?
ಏನು ಹೇಳಿದರೂ ನಿನದೇ ಸರಿ …ಸಂಕಟ ಕಾಲದಲ್ಲಿ ಮತದಾರನೇ ವೆಂಕಟರಮಣ !