Devdutt Padikkal ಸೆಂಚುರಿ ಪವರ್: ಚಂಡೀಗಢವನ್ನು ಉರುಳಿಸಿದ ಕರ್ನಾಟಕ
Team Udayavani, Dec 1, 2023, 11:25 PM IST
ಆನಂದ್: ದೇವದತ್ತ ಪಡಿಕ್ಕಲ್ ತಮ್ಮ ಭಾರತ “ಎ’ ತಂಡದ ಪ್ರವೇಶ ಸಂಭ್ರಮವನ್ನು ಶತಕದ ಮೂಲಕ ಆಚರಿಸಿದ್ದಾರೆ. “ವಿಜಯ್ ಹಜಾರೆ ಟ್ರೋಫಿ’ ಏಕದಿನ ಪಂದ್ಯಾವಳಿಯಲ್ಲಿ ಪ್ರಚಂಡ ಬ್ಯಾಟಿಂಗ್ ಮುಂದುವರಿಸಿದ ಪಡಿಕ್ಕಲ್, 114 ರನ್ ಬಾರಿಸಿ ಚಂಡೀಗಢ ವಿರುದ್ಧ ಕರ್ನಾಟಕದ 22 ರನ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದರೊಂದಿಗೆ ಕರ್ನಾಟಕ “ಸಿ’ ವಿಭಾಗದ ಈವರೆಗಿನ ಎಲ್ಲ 5 ಪಂದ್ಯಗಳನ್ನು ಗೆದ್ದು ಅಜೇಯ ಓಟ ಮುಂದುವರಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ರಾಜ್ಯ ತಂಡ 6 ವಿಕೆಟಿಗೆ 299 ರನ್ ಬಾರಿಸಿದರೆ, ಚಂಡೀಗಢ 7ಕ್ಕೆ 277 ರನ್ ಮಾಡಿ ಗೆಲುವಿನ ಗಡಿಯಿಂದ ಹಿಂದೆಯೇ ಉಳಿಯಿತು.
ಆರ್. ಸಮರ್ಥ್ (5) ಮತ್ತು ಮಾಯಾಂಕ್ ಅಗರ್ವಾಲ್ (19) ಬೇಗನೇ ಪೆವಿಲಿಯನ್ ಸೇರಿಕೊಂಡ ಬಳಿಕ ದೇವದತ್ತ ಪಡಿಕ್ಕಲ್ ಹಾಗೂ ನಿಕಿನ್ ಜೋಸ್ ಸೇರಿಕೊಂಡು ತಂಡವನ್ನು ಆಧರಿಸುವ ಕಾಯಕದಲ್ಲಿ ತೊಡಗಿದರು. ಇವರಿಂದ 3ನೇ ವಿಕೆಟಿಗೆ 171 ರನ್ ಒಟ್ಟುಗೂಡಿತು. ಪಡಿಕ್ಕಲ್ 9 ಫೋರ್, 6 ಸಿಕ್ಸರ್ಗಳೊಂದಿಗೆ ಅಬ್ಬರಿಸಿ 103 ಎಸೆತಗಳಿಂದ 114 ಬಾರಿಸಿದರು. ನಿಕಿನ್ ಜೋಸ್ ನಾಲ್ಕೇ ರನ್ನಿನಿಂದ ಸೆಂಚುರಿ ತಪ್ಪಿಸಿಕೊಂಡರು. ಇವರ 96 ರನ್ 114 ಎಸೆತಗಳಿಂದ ಬಂತು. ಸಿಡಿಸಿದ್ದು 6 ಬೌಂಡರಿ ಹಾಗೂ ಒಂದು ಸಿಕ್ಸರ್.
ಮನೀಷ್ ಪಾಂಡೆ ಅಜೇಯ 53 ರನ್ ಬಾರಿಸಿ ಮಿಂಚಿದರು. 48 ಎಸೆತಗಳ ಈ ಬ್ಯಾಟಿಂಗ್ ವೇಳೆ 3 ಸಿಕ್ಸರ್ ಸಿಡಿಸಿದರು.
ಅರ್ಸ್ಲಾನ್ ಶತಕ ವ್ಯರ್ಥ
ಚೇಸಿಂಗ್ ವೇಳೆ ಚಂಡೀಗಢ ಚೆಂದದ ಬ್ಯಾಟಿಂಗ್ ಮಾಡಿತಾದರೂ ರನ್ರೇಟ್ ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು. ಆರಂಭಕಾರ ಅರ್ಸ್ಲಾನ್ ಖಾನ್ 103 ರನ್ ಬಾರಿಸುವ ಮೂಲಕ ತಂಡದ ಪಾಲಿನ ಆಪತಾºಂಧವರಾದರು (103 ಎಸೆತ, 11 ಬೌಂಡರಿ, 1 ಸಿಕ್ಸರ್). ನಾಯಕ ಮಮನ್ ವೋಹ್ರಾ 34, ಅಂಕಿತ್ ಕೌಶಿಕ್ 51, ಭಾಗಮೇಂದ್ರ ಲಾಥರ್ 32 ರನ್ ಹೊಡೆದರು.
ಒಂದು ಹಂತದಲ್ಲಿ ಚಂಡೀಗಢ 2 ವಿಕೆಟಿಗೆ 210 ರನ್ ಬಾರಿಸಿತ್ತು. ಆದರೆ ಆಗಲೇ 39 ಓವರ್ ಉರುಳಿದ್ದರಿಂದ ಒತ್ತಡಕ್ಕೆ ಸಿಲುಕಿತು. ವಿದ್ವತ್ ಕಾವೇರಪ್ಪ, ವಾಸುಕಿ ಕೌಶಿಕ್, ಕೃಷ್ಣಪ್ಪ ಗೌತಮ್ ಬಿಗಿಯಾದ ಬೌಲಿಂಗ್ ಸಂಘಟಿಸಿದರು.ರವಿವಾರ ಕರ್ನಾಟಕ-ಹರ್ಯಾಣ ಮುಖಾಮುಖೀ ಆಗಲಿವೆ.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ-6 ವಿಕೆಟಿಗೆ 299 (ದೇವದತ್ತ ಪಡಿಕ್ಕಲ್ 114, ನಿಕಿನ್ ಜೋಸ್ 96, ಮನೀಷ್ ಪಾಂಡೆ ಅಜೇಯ 53, ಮನ್ದೀಪ್ ಸಿಂಗ್ 31ಕ್ಕೆ 2, ಸಂದೀಪ್ ಶರ್ಮ 51ಕ್ಕೆ 2). ಚಂಡೀಗಢ-7 ವಿಕೆಟಿಗೆ 277 (ಅಸ್ಲಾìನ್ ಖಾನ್ 102, ಅಂಕಿತ್ ಕೌಶಿಕ್ 51, ಮನನ್ ವೋಹ್ರಾ 34, ವಿ. ಕೌಶಿಕ್ 44ಕ್ಕೆ 2, ಕೆ. ಗೌತಮ್ 36ಕ್ಕೆ 1).