ವಿಶ್ವಕಪ್ನಿಂದ ಧವನ್ ಔಟ್; ತಂಡ ಸೇರಿದ ಪಂತ್
ಆಸ್ಟ್ರೇಲಿಯ ವಿರುದ್ಧ ಬ್ಯಾಟಿಂಗ್ ವೇಳೆ ಕೈ ಬೆರಳಿನ ಮೂಳೆ ಮುರಿತ
Team Udayavani, Jun 20, 2019, 5:50 AM IST
ಸೌತಾಂಪ್ಟನ್: ಭಾರತದ ಎಡಗೈ ಆರಂಭಕಾರ ಶಿಖರ್ ಧವನ್ ಅವರ ವಿಶ್ವಕಪ್ ಕನಸು ಎರಡೇ ಪಂದ್ಯಕ್ಕೆ ಛಿದ್ರಗೊಂಡಿದೆ. ಅವರೀಗ ಈ ಪ್ರತಿಷ್ಠಿತ ಕೂಟದಿಂದಲೇ ಹೊರಬಿದ್ದಿದ್ದಾರೆ. ಮುನ್ನೆಚರಿಕೆಯ ಕ್ರಮವಾಗಿ ಕರೆ ಪಡೆದಿದ್ದ ರಿಷಭ್ ಪಂತ್ ಅವರನ್ನು ಬದಲಿ ಆಟಗಾರನನ್ನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ತಂಡದ ಕಾರ್ಯ ನಿರ್ವಾಹಕ ಪ್ರಬಂಧಕ ಸುನೀಲ್ ಸುಬ್ರಹ್ಮಣ್ಯಂ ಬುಧವಾರ ಈ ವಿಷಯವನ್ನು ಮಾಧ್ಯಮದವರಿಗೆ ತಿಳಿಸಿದರು.
ಜುಲೈ ಮಧ್ಯಾವಧಿ ತನಕ ವಿಶ್ರಾಂತಿ
ಜೂನ್ 9ರ ಆಸ್ಟ್ರೇಲಿಯ ವಿರುದ್ಧದ ಪಂದ್ಯದ ಬ್ಯಾಟಿಂಗ್ ವೇಳೆ ಚೆಂಡು ಬಂಡಿದು ಶಿಖರ್ ಧವನ್ ಅವರ ಎಡಗೈ ಹೆಬ್ಬೆರಳಿನ ಮೂಳೆ ಮುರಿತಕ್ಕೊಳಗಾಗಿದ್ದರು. ಇದರಿಂದ ಕನಿಷ್ಠ 3 ಪಂದ್ಯಗಳಿಗೆ ಧವನ್ ಸೇವೆ ಲಭಿಸದು ಎನ್ನಲಾಗಿತ್ತು. ಈ ಅವಧಿಯಲ್ಲಿ ಚೇತರಿಸಕೊಂಡರೆ ಅವರನ್ನು ತಂಡದಲ್ಲಿ ಮುಂದುವರಿಸುವುದು ಭಾರತದ ಯೋಜನೆಯಾಗಿತ್ತು. ಒಮ್ಮೆ ಕೂಟದಿಂದ ಹೊರಬಿದ್ದ ಬಳಿಕ ಮರಳಿ ತಂಡವನ್ನು ಸೇರಿಕೊಳ್ಳಲು ಐಸಿಸಿ ನಿಯಮದಲ್ಲಿ ಆಸ್ಪದ ಇಲ್ಲದಿರುವುದೇ ಇದಕ್ಕೆ ಕಾರಣ. ಹೀಗಾಗಿ ಪಂತ್ ಕೂಡ ಟೀಮ್ ಇಂಡಿಯಾದ ಅಧಿಕೃತ ಸದಸ್ಯನಾಗಿರಲಿಲ್ಲ. ಆದರೆ ಬುಧವಾರ ಎಲ್ಲದಕ್ಕೂ ಒಂದು ಅಂತ್ಯ ಲಭಿಸಿದೆ.
“ಶಿಖರ್ ಧವನ್ ಜುಲೈ ಮಧ್ಯಾವಧಿ ತನಕ ವಿಶ್ರಾಂತಿ ಯಲ್ಲಿ ಇರಬೇಕಾಗುತ್ತದೆ. ಹೀಗಾಗಿ ಅವರು ವಿಶ್ವಕಪ್ ತಂಡದಿಂದ ಬೇರ್ಪಡುವುದು ಅನಿ ವಾರ್ಯ. ಬದಲಿ ಆಟಗಾರನಾಗಿ ರಿಷಭ್ ಪಂತ್ ಅವರನ್ನು ಸೇರಿಸಿಕೊಳ್ಳಲು ಈಗಾಗಲೇ ಐಸಿಸಿಗೆ ಪತ್ರ ಬರೆಯಲಾಗಿದೆ’ ಎಂದು ಸುಬ್ರಹ್ಮಣ್ಯಂ ಹೇಳಿದರು.
ತಲೆ ಕೆಳಗಾದ ಲೆಕ್ಕಾಚಾರ
ಆಸ್ಟ್ರೇಲಿಯ ವಿರುದ್ಧ ಶತಕ ಬಾರಿಸಿ ಮೆರೆದಿದ್ದ ಶಿಖರ್ ಧವನ್ ಜೂ. 30ರ ಇಂಗ್ಲೆಂಡ್ ಎದುರಿನ ಬರ್ಮಿಂಗ್ಹ್ಯಾಮ್ ಪಂದ್ಯದ ವೇಳೆ ತಂಡಕ್ಕೆ ಮರಳುವ ನಿರೀಕ್ಷೆ ಇತ್ತು. ಆದರೀಗ ಲೆಕ್ಕಾಚಾರವೆಲ್ಲ ತಲೆಕೆಳಗಾಗಿದೆ.
ಅಕಸ್ಮಾತ್ ರಿಷಭ್ ಪಂತ್ ಅವರನ್ನು ಸೇರಿಸಿಕೊಳ್ಳದೇ ಹೋಗಿದ್ದರೆ ಆಗ ಜೂ. 22ರ ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಭಾರತ ಕೇವಲ 13 ಸದಸ್ಯರ ನಡುವೆ ಆಡುವ ಬಳಗದ ಆಯ್ಕೆ ಮಾಡಿಕೊಳ್ಳಬೇಕಿತ್ತು. ಭುವನೇಶ್ವರ್ ಕುಮಾರ್ ಕೂಡ ಗಾಯಾಳಾದುದು ಇದಕ್ಕೆ ಕಾರಣ.
ಭುವನೇಶ್ವರ್ ಹೇಗಿದ್ದಾರೆ?
ಪಾಕಿಸ್ಥಾನ ವಿರುದ್ಧದ ಪಂದ್ಯದ ವೇಳೆ ಗಾಯಾಳಾಗಿದ್ದ ಭುವನೇಶ್ವರ್ ಕುಮಾರ್ ಸದ್ಯ ಮುಂದಿನ 3 ಪಂದ್ಯಕ್ಕೆ ಲಭ್ಯರಿರುವುದಿಲ್ಲ. ಮುಂದೇನು ಎಂಬುದನ್ನು ಕಾದು ನೋಡಬೇಕಿದೆ. ಭುವನೇಶ್ವರ್ ಅವರ ಸ್ಥಿತಿಯನ್ನು ಫಿಸಿಯೋ ಪ್ಯಾಟ್ರಿಕ್ ಫರ್ಹಾತ್ ಗಮನಿಸುತ್ತಿದ್ದಾರೆ’ ಎಂದು ತಂಡದ ಟ್ರೇನರ್ ಶಂಕರ್ ಬಸು ತಿಳಿಸಿದ್ದಾರೆ.
ನಾನಿನ್ನು ವಿಶ್ವಕಪ್ ಕೂಟದಲ್ಲಿ ಮುಂದು ವರಿಯುವುದಿಲ್ಲ ಎಂದು ತಿಳಿಸಲು ಬಹಳ ದುಃಖವಾಗುತ್ತಿದೆ. ತಂಡ ಮತ್ತು ದೇಶದ ಕ್ರಿಕೆಟ್ ಅಭಿಮಾನಿಗಳು ತೋರಿದ ಪ್ರೀತಿಗೆ ಆಭಾರಿ. ಜೈಹಿಂದ್.
-ಶಿಖರ್ ಧವನ್