ಧವನ್-ವಿಜಯ್ ಜೋಡಿಗೆ ಮೊದಲ ಆದ್ಯತೆ: ರವಿಶಾಸ್ತ್ರಿ
Team Udayavani, Dec 19, 2017, 9:27 AM IST
ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತದ ಇನ್ನಿಂಗ್ಸ್ ಆರಂಭಿಸುವ ಜೋಡಿ ಯಾವುದು ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಕೋಚ್ ರವಿಶಾಸ್ತ್ರಿ ಅವರು ಆಫ್ರಿಕಾದ ಟೆಸ್ಟ್ ಸರಣಿಯ ವೇಳೆ ಧವನ್-ವಿಜಯ್ ಅವರು ಭಾರತದ ಮೊದಲ ಆದ್ಯತೆಯ ಆರಂಭಿಕರು ಎಂಬುದಾಗಿ ಹೇಳಿದ್ದಾರೆ.
“ಈ ಸಂದರ್ಭದಲ್ಲಿ ನಾವು ಆನುಭವ ಹಾಗೂ ವೈವಿಧ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ಆಗ ಶಿಖರ್ ಧವನ್ ಮತ್ತು ಮುರಳಿ ವಿಜಯ್ ಜೋಡಿ ಹೆಚ್ಚು ಸೂಕ್ತವೆನಿಸುತ್ತದೆ. ಧವನ್ ಎಡಗೈ ಆಟಗಾರನಾಗಿರುವುದು ಲಾಭದಾಯಕ. ವಿಜಯ್ ಅನುಭವಿ ಆಟಗಾರ. ವಿದೇಶದಲ್ಲಿ ವಿಜಯ್ ದಾಖಲೆ ಉತ್ತಮ ಮಟ್ಟದಲ್ಲಿದೆ. ಅವರು ತಂಡಕ್ಕೆ ಸ್ಥಿರತೆ ತರಬಲ್ಲರು. ಪುನರಾಗಮನದ ಟೆಸ್ಟ್ನಲ್ಲೇ ವಿಜಯ್ ಶತಕ ಹೊಡೆದಿದ್ದಾರೆ’ ಎಂದು ಶಾಸ್ತ್ರಿ ಹೇಳಿದರು.
“ಯುವ ಆಟಗಾರ ರಾಹುಲ್ ಕೂಡ ಪ್ರತಿಭಾವಂತ. ಅವರಿಗೂ ಅವಕಾಶ ಒದಗಿ ಬರಲಿದೆ. ಇದಕ್ಕಾಗಿ ಸ್ವಲ್ಪ ಕಾಯಬೇಕಾಗುತ್ತದೆ. ಕಳೆದ 18 ತಿಂಗಳ ಅವಧಿಯಲ್ಲಿ ಅತ್ಯಂತ ಸುಧಾರಿತ ಆಟಗಾರನಾಗಿ ಮೂಡಿ ಬಂದದ್ದು ರಾಹುಲ್ ಹೆಗ್ಗಳಿಕೆ. ಆದರೆ 60ನ್ನು 150 ಆಗಿ ಪರಿವರ್ತಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಇದನ್ನು ಕಲಿಯಬೇಕಿದೆ’ ಎಂದರು.