ಕುಸ್ತಿ ಒಕ್ಕೂಟದ ತುರ್ತು ಸಭೆ ರದ್ದು; ವಿವಾದ ಹೊಸತಲ್ಲ
Team Udayavani, Jan 22, 2023, 11:18 PM IST
ಅಯೋಧ್ಯಾ: ರವಿವಾರ ಇಲ್ಲಿ ನಡೆಯಬೇಕಾಗಿದ್ದ ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್ಐ) ತುರ್ತು ಸಾಮಾನ್ಯಸಭೆ ರದ್ದಾಗಿದೆ. ಕುಸ್ತಿ ಒಕ್ಕೂಟದ ದಿನವಹಿ ಕಾರ್ಯಕ್ರಮಗಳನ್ನು ನೋಡಿಕೊಳ್ಳಲು ಕೇಂದ್ರ ಸರಕಾರ ಸಮಿತಿ ನೇಮಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ. ಅಷ್ಟು ಮಾತ್ರವಲ್ಲ, ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ ತತ್ಕಾಲೀನವಾಗಿ ಬ್ರಿಜ್ ಭೂಷಣ್ ಸಿಂಗ್ ಹೊರಗುಳಿದಿದ್ದಾರೆ. ಹೀಗಾಗಿ ಸಭೆಗೆ ಯಾವುದೇ ಮಹತ್ವವೂ ಇಲ್ಲವಾಗಿದೆ.
ಬ್ರಿಜ್ ಭೂಷಣ್ ಸಿಂಗ್ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ, ಆರ್ಥಿಕ ಅವ್ಯವಹಾರ ನಡೆಸಿದ್ದಾರೆ ಎಂದು ದೇಶದ ಪ್ರಮುಖ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಭಜರಂಗ್ ಪುನಿಯ, ರವಿ ದಹಿಯಾ, ಸಾಕ್ಷಿ ಮಲಿಕ್ ಆರೋಪಿಸಿದ್ದರು. ಹಾಗೆಯೇ ಅವರನ್ನು ಕೆಳಕ್ಕಿಳಿಸದಿದ್ದರೆ, ಒಕ್ಕೂಟದಲ್ಲಿರುವ ಶೋಷಕರನ್ನು ಹೊರಹಾಕದಿದ್ದರೆ ಧರಣಿಯನ್ನು ನಿಲ್ಲಿಸುವುದಿಲ್ಲ ಎಂದು ಪಟ್ಟುಹಿಡಿದಿದ್ದರು. ಅಂತಿಮವಾಗಿ ಕುಸ್ತಿಪಟುಗಳ ಪ್ರತಿಭಟನೆಗೆ ಮಣಿದಿದ್ದ ಕೇಂದ್ರ ಕ್ರೀಡಾ ಸಚಿವಾಲಯ, ಶನಿವಾರ ತನಿಖೆಗೆ ಸಮಿತಿ ರಚಿಸಿತ್ತು. ಇದೇ ವೇಳೆ ಐಒಎ ಕೂಡ 7 ಮಂದಿಯ ತನಿಖಾ ಸಮಿತಿ ರಚಿಸಿದೆ.
ವಿವಾದ ಹೊಸತಲ್ಲ
ರಾಮಮಂದಿರ ಹೋರಾಟದಲ್ಲಿ ಬ್ರಿಜ್ ಭೂಷಣ್ ಜೈಲುಪಾಲಾಗಿದ್ದರು. ಅವರ ವಿರುದ್ಧ ಕೊಲೆ ದೂರೂ ದಾಖಲಾಗಿತ್ತು. 2021, ಡಿಸೆಂಬರ್ನಲ್ಲಿ ರಾಂಚಿಯಲ್ಲಿ ನಡೆಯುತ್ತಿದ್ದ ಅಂಡರ್-15 ರಾಷ್ಟ್ರೀಯ ಕುಸ್ತಿ ಕೂಟದ ವೇಳೆ, ಯುವ ಕುಸ್ತಿಪಟುವಿನ ಕೆನ್ನೆಗೆ ಬಾರಿಸಿದ್ದರು.