ಉಡುಪಿ ಜಿಲ್ಲಾ ಫುಟ್ಬಾಲ್ ಕೇಂದ್ರ ಶೇಖರ ಬಂಗೇರರ ಕನಸಾಗಿತ್ತು
Team Udayavani, Jun 11, 2021, 6:30 AM IST
ಉಡುಪಿ: ಗುರುವಾರ ನಿಧನ ಹೊಂದಿದ ಭಾರತದ ಮಾಜಿ ಫುಟ್ಬಾಲ್ ಆಟಗಾರ ಶೇಖರ ಬಂಗೇರ ಅವರ ಬಹು ದೊಡ್ಡ ಯೋಜನೆಯೆಂದರೆ ಉಡುಪಿ ಜಿಲ್ಲೆಯಲ್ಲಿ ಫುಟ್ಬಾಲ್ ಅಕಾಡೆಮಿ ಹಾಗೂ ತರಬೇತಿ ಕೇಂದ್ರವನ್ನು ಆರಂಭಿಸುವುದಾಗಿತ್ತು. ಜಾರ್ಖಂಡ್ನ ಧನ್ಬಾದ್ ಫುಟ್ಬಾಲ್ ಅಕಾಡೆಮಿಯು ರಾಜ್ಯಾದ್ಯಂತ ಫುಟ್ಬಾಲ್ ತರಬೇತಿ ಕೇಂದ್ರಗಳನ್ನು ಆರಂಭಿಸಲು ಚಿಂತನೆ ನಡೆಸಿದಾಗ ಉಡುಪಿಯ ಎಂಜಿಎಂ ಕ್ರೀಡಾಂಗಣವನ್ನೂ ಆಯ್ಕೆ ಮಾಡಿತ್ತು.
ಇದರ ಕೋಚ್ ಆಗಿ ಶೇಖರ ಬಂಗೇರ ಆಯ್ಕೆಯಾಗಿದ್ದರು. ಅವರು ಮುಂಬಯಿಯಲ್ಲಿ ಜೈ ಭಾರತ್ ನ್ಪೋರ್ಟ್ಸ್ ಕ್ಲಬ್ ಮೂಲಕ ಹಲವಾರು ಮಂದಿ ಕನ್ನಡಿಗರಿಗೆ ತರಬೇತಿ ನೀಡಿದ್ದರು. ಧನ್ಬಾದ್ ಫುಟ್ಬಾಲ್ ಅಕಾಡೆಮಿಯಲ್ಲಿ ಪ್ರಧಾನ ತರಬೇತುದಾರರೂ ಆಗಿದ್ದರು. ಬಂಗೇರ ಜತೆಗೆ ಸಹ ಕೋಚ್ ಹಾಗೂ ಫಿಸಿಕಲ್ ಟ್ರೇನರ್ ಆಗಿ ಗಣೇಶ್ ಕೋಟ್ಯಾನ್ ತೊಟ್ಟಂ ಅವರನ್ನು ಆಯ್ಕೆ ಮಾಡಲಾಗಿತ್ತು.
ಧನ್ಬಾದ್ ಅಕಾಡೆಮಿಯು ಗೋವಾ, ಕೇರಳ, ಮಹಾರಾಷ್ಟ್ರದಲ್ಲಿ ತರಬೇತಿ ಕೇಂದ್ರಗಳನ್ನು ಹೊಂದಿದ್ದು, ಅಲ್ಲಿಯೂ ಶೇಖರ್ ಬಂಗೇರ ಅವರನ್ನು ಮುಖ್ಯ ತರಬೇತುದಾರರನ್ನಾಗಿ ನಿಯೋಜಿಸಲಾಗಿತ್ತು. ಉಡುಪಿಯಲ್ಲಿ 8 ರಿಂದ 25 ವರ್ಷ ವಯೋಮಿತಿಯವರಿಗೆ ವಾರದಲ್ಲಿ ಮೂರು ದಿನಗಳ ಕಾಲ ತರಬೇತಿ ನೀಡುವುದು, ಶಾಲಾವಾರು ಟೂರ್ನಿಗಳನ್ನು ನಡೆಸುವುದು ಬಂಗೇರ ಅವರ ಉದ್ದೇಶವಾಗಿತ್ತು. ಆದರೆ ಕೋವಿಡ್ ಮೊದಲ ಅಲೆ ಇದಕ್ಕೆಲ್ಲ ದೊಡ್ಡ ಕಂಟಕವಾಗಿ ಪರಿಣಮಿಸಿತು. ಎರಡನೇ ಅಲೆಯಲ್ಲಿ ಫುಟ್ಬಾಲ್ ಕನಸುಗಾರ ಶೇಖರ ಬಂಗೇರ ಅವರೇ ಕಾಲವಾದದ್ದು ವಿಪರ್ಯಾಸ!