INDvsNZ; ಹಾರ್ದಿಕ್ ಅನುಪಸ್ಥಿತಿಯಿಂದ ತಂಡದ ಸಮತೋಲನಕ್ಕೆ ಪೆಟ್ಟು ಬಿದ್ದಿದೆ: ಕೋಚ್ ದ್ರಾವಿಡ್
Team Udayavani, Oct 22, 2023, 11:27 AM IST
ಧರ್ಮಶಾಲಾ: ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಇದುವರೆಗೆ ಆಡಿರುವ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಗೆದ್ದು ಅಜೇಯರಾಗಿರುವ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಇಂದು ಮುಖಾಮುಖಿಯಾಗಲಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಯಾರು ತಮ್ಮ ಅಜೇಯ ಅಭಿಯಾನವನ್ನು ಮುಂದುವರಿಸಲಿದ್ದಾರೆ ಎಂಬ ಕುತೂಹಲ ಕ್ರೀಡಾಪ್ರೇಮಿಗಳಿಗಿದೆ.
ಭಾರತದ ತಂಡದ ಉಪ ನಾಯಕ ಹಾರ್ದಿಕ್ ಪಾಂಡ್ಯ ಅವರು ಕಳೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದರು. ಬೌಲಿಂಗ್ ವೇಳೆ ಜಾರಿದ ಅವರು ನಂತರ ಮೈದಾನ ತೊರೆಯಬೇಕಾಯಿತು. ಅವರು ಇಂದಿನ ಮಹತ್ವದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹಾರ್ದಿಕ್ ಅನುಪಸ್ಥಿತಿಯು ತಂಡದ ಸಮತೋಲನಕ್ಕೆ ಪೆಟ್ಟು ನೀಡಿದೆ ಎಂದು ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
“ಹಾರ್ದಿಕ್ ನಮಗೆ ಪ್ರಮುಖ ಆಟಗಾರ. ಅವರು ನಿಸ್ಸಂಶಯವಾಗಿ ಈ ಪಂದ್ಯವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ನಾವು ಉಳಿ 14 ಆಟಗಾರರ ಸುತ್ತ ಕೆಲಸ ಮಾಡಲು ಪ್ರಯತ್ನಿಸುತ್ತೇವೆ. ಉತ್ತಮ ಸಂಯೋಜನೆ ಮಾಡುತ್ತೇವೆ. ಆದರೆ ನಾವು ಮೊದಲ ನಾಲ್ಕು ಪಂದ್ಯಗಳಲ್ಲಿ ಹೊಂದಿದ್ದ ಸಮತೋಲನವನ್ನು ನಾವು ಸ್ಪಷ್ಟವಾಗಿ ಕಳೆದುಕೊಳ್ಳುತ್ತೇವೆ” ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಹಾರ್ದಿಕ್ ನ್ಯೂಜಿಲ್ಯಾಂಡ್ ಪಂದ್ಯಕ್ಕೆ ಗೈರುಹಾಜರಾಗಲಿದ್ದಾರೆ ಮತ್ತು ಲಕ್ನೋದಲ್ಲಿ ನೇರವಾಗಿ ತಂಡವನ್ನು ಮತ್ತೆ ಸೇರಿಕೊಳ್ಳುತ್ತಾರೆ ಎಂದು ಭಾರತ ತಂಡವು ಖಚಿತಪಡಿಸಿದೆ. ಲಕ್ನೋದಲ್ಲಿ ಭಾರತವು ಅಕ್ಟೋಬರ್ 29 ರಂದು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.