ಬ್ಯಾಟ್ ತಾಗಿದ್ದರೂ ಎಲ್ ಬಿಡಬ್ಲ್ಯೂ ತೀರ್ಪು! ಅಂಪೈರ್ ತೀರ್ಮಾನಕ್ಕೆ ಹಲವರ ಆಕ್ಷೇಪ
Team Udayavani, Dec 3, 2021, 3:28 PM IST
ಮುಂಬೈ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟವೇ ಹಲವು ನಾಟಕೀಯ ತಿರುವುಗಳನ್ನು ಕಂಡಿದೆ. ನಾಯಕ ವಿರಾಟ್ ಕೊಹ್ಲಿ ಔಟ್ ತೀರ್ಮಾನದ ಕುರಿತು ಹಲವು ಅನುಮಾನಗಳು ಎದ್ದಿವೆ.
ಚೇತೇಶ್ವರ ಪೂಜಾರ ಔಟಾದ ಬೆನ್ನಲ್ಲೇ ಮೈದಾನಕ್ಕಾಗಮಿಸಿದ ವಿರಾಟ್ ಕೊಹ್ಲಿ ತಾನೆದುರಿಸಿದ ನಾಲ್ಕನೇ ಎಸೆತಕ್ಕೆ ಎಲ್ ಬಿ ಬಲೆಗೆ ಬಿದ್ದರು. ಅಜಾಜ್ ಪಟೇಲ್ ಎಸೆದ ಬಾಲ್ ನ್ನು ಡಿಫೆನ್ಸ್ ಮಾಡಲು ವಿರಾಟ್ ಮುಂದಾದರು. ಆದರೆ ಪ್ಯಾಡ್ ಮತ್ತು ಬ್ಯಾಟ್ ಮಧ್ಯೆ ಬಾಲ್ ಬಡಿದಿತ್ತು. ಅಂಪೈರ್ ಅನಿಲ್ ಚೌಧರಿ ಔಟ್ ತೀರ್ಪಿತ್ತಿದ್ದರು.
ಆದರೆ ವಿರಾಟ್ ಕೊಹ್ಲಿ ಕೂಡಲೇ ರಿವಿವ್ಯೂ ಪಡೆದರು. ಬಾಲ್ ಬ್ಯಾಟ್ ಗೆ ಬಡಿದಿರುವುದು ಸ್ಪಷ್ಟವಾಗಿ ಕಂಡಿದ್ದರೂ ಮೂರನೇ ಅಂಪೈರ್ ವೀರೆಂದರ್ ಶರ್ಮಾ ಮಾತ್ರ “ ಯಾವುದೇ ಸಮರ್ಪಕ ಆಧಾರ” ಇರದ ಕಾರಣ ಗ್ರೌಂಡ್ ಅಂಪೈರ್ ತೀರ್ಮಾನವನ್ನೇ ಎತ್ತಿಹಿಡಿದರು.
ಇದನ್ನೂ ಓದಿ:ಕೊನೆಗೂ ಪಂದ್ಯ ಆರಂಭ: ಭಾರತ ತಂಡದಲ್ಲಿ 3 ಬದಲಾವಣೆ, ಕಿವೀಸ್ ಗೂ ಹೊಸ ನಾಯಕ
ಮೂರನೇ ಅಂಪೈರ್ ತೀರ್ಪಿಗೆ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲೇ ಅಸಮಾಧಾನ ತೋರಿದರು. ಅಂಪೈರ್ ನಿತಿನ್ ಮೆನನ್ ಬಳಿ ಸಾಗಿ ಚರ್ಚೆ ಮಾಡಿದರು. ಆದರೆ ಅನಿವಾರ್ಯವಾಗಿ ಮೈದಾನ ತೊರೆಯಬೇಕಾಯಿತು.
ವಿರಾಟ್ ಕೊಹ್ಲಿ ಔಟ್ ನಿರ್ಧಾರಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ‘ಕೂ’ ಮಾಡಿರುವ ಮಾಜಿ ಆಟಗಾರ ವಾಸಿಂ ಜಾಫರ್, “ಅದು ನನ್ನ ಅಭಿಪ್ರಾಯದಲ್ಲಿ ಮೊದಲು ಬ್ಯಾಟ್ ಆಗಿತ್ತು. ನಾನು ‘ನಿರ್ಣಾಯಕ ಸಾಕ್ಷ್ಯ’ ಭಾಗವನ್ನು ಅರ್ಥಮಾಡಿಕೊಂಡಿದ್ದೇನೆ. ಆದರೆ ಇದು ಸಾಮಾನ್ಯ ಜ್ಞಾನವು ಮೇಲುಗೈ ಸಾಧಿಸಬೇಕಾದ ಉದಾಹರಣೆ ಎಂದು ನಾನು ಭಾವಿಸುತ್ತೇನೆ. ಆದರೆ ಹಲವರು ಹೇಳುವಂತೆ ‘ಸಾಮಾನ್ಯ ಜ್ಞಾನವು ತುಂಬಾ ಸಾಮಾನ್ಯವಲ್ಲ” ಎಂದು ಹೇಳಿದ್ದಾರೆ.