ಭಾರತೀಯ ವೇಗಿಗಳು ಇಷ್ಟು ನಿಖರವಾಗಿ ಯಾರ್ಕರ್ ಎಂದೂ ಹಾಕುತ್ತಿರಲಿಲ್ಲ: ಕರ್ಸನ್ ಘಾರ್ವಿ
Team Udayavani, May 26, 2020, 10:33 AM IST
ಹೊಸದಿಲ್ಲಿ: ಕರ್ಸನ್ ಘಾರ್ವಿ ಹೆಸರನ್ನು ಆಧುನಿಕ ಕ್ರಿಕೆಟ್ ಪ್ರೇಮಿಗಳು ಹೆಚ್ಚಾಗಿ ಕೇಳಿರಲಿಕ್ಕಿಲ್ಲ. 1974ರಿಂದ 1981ರವರೆಗೆ ಟೀಂ ಇಂಡಿಯಾ ಪರ ಆಡಿದ್ದ ಎಡಗೈ ವೇಗಿ ಘಾರ್ವಿ. ಸದ್ಯ ಟೀಂ ಇಂಡಿಯಾ ದ ವೇಗಿಗಳ ಪ್ರದರ್ಶನ ಕಂಡು ಹರ್ಷ ವ್ಯಕ್ತಪಡಿಸಿರುವ ಘಾರ್ವಿ ಇಷ್ಟೊಂದು ನಿಖರವಾಗಿ ಯಾರ್ಕರ್ ಗಳನ್ನು ಭಾರತೀಯರು ಎಸೆಯಬಹುದು ಎಂದು ಯಾವತ್ತೂ ಎಂದುಕೊಂಡಿರಲಿಲ್ಲ ಎಂದಿದ್ದಾರೆ.
ಘಾರ್ವಿ ಅವರು ಟೀಂ ಇಂಡಿಯಾದಲ್ಲಿ ಆಡುವ ಸಮಯದಲ್ಲಿ ತಂಡ ಹೆಚ್ಚಾಗಿ ಸ್ಪಿನ್ನರ್ ಗಳ ವೇಲೆ ಅವಲಂಬಿತವಾಗಿತ್ತು. ಭಾಗ್ವತ್ ಚಂದ್ರಶೇಖರ್, ಎರ್ರಪಳ್ಳಿ ಪ್ರಸನ್ನ, ಬಿಷನ್ ಸಿಂಗ್ ಬೇಡಿ ಮತ್ತು ಎಸ್ ವೆಂಕಟರಾಘವನ್ ಮುಂತಾದ ಭಾರತೀಯ ಸ್ಪಿನ್ನರ್ ಗಳು ವಿಶ್ವ ಕ್ರಿಕೆಟ್ ಅನ್ನು ಆಳುತ್ತಿದ್ದರು.
ಈಗಿನ ಕಾಲದ ವೇಗಿಗಳ ಬಗ್ಗೆ ಮಾತನಾಡಿದ ಘಾರ್ವಿ, ಭಾರತದ ವಿಶ್ವಶ್ರೇಷ್ಠ ವೇಗಿಗಳನ್ನು ಹೊಂದಿದೆ. ಅದು ಅಪೂರ್ವ. ಮೊಹಮ್ಮದ್ ಶಮಿ, ಇಶಾಂತ್ ಶರ್ಮ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಇವರೆಲ್ಲಾ ಅದ್ಭುತ ಬೌಲಿಂಗ್ ನಡೆಸುತ್ತಿದ್ದಾರೆ ಎಂದಿದ್ದಾರೆ.
ಹಿಂದೂಸ್ಥಾನ್ ಟೈಮ್ಸ್ ಜೊತೆಗೆ ಮಾತನಾಡಿದ ಘಾರ್ವಿ, ಒಂದು ಟೆಸ್ಟ್ ಪಂದ್ಯ ಗೆಲ್ಲಬೇಕಾದರೆ, 20 ವಿಕೆಟ್ ಪಡೆಯಬೇಕು. ಈ ಬೌಲರ್ ಗಳು ನಿರಂತರವಾಗಿ 20 ವಿಕೆಟ್ ಕಬಳಿಸುತ್ತಿದ್ದಾರೆ. ಹಾಗಾಗಿ ಭಾರತವೂ ಟೆಸ್ಟ್ ಕ್ರಿಕೆಟ್ ನಲ್ಲಿ ನಿರಂತರವಾಗಿ ಜಯ ಸಾಧಿಸುತ್ತಿದೆ ಎಂದಿದ್ಧಾರೆ.