ಹೈದರಾಬಾದ್ ಹೊರಬೀಳುವ ಹೊತ್ತು! ಇಂದು ಮುಂಬೈ ಎದುರಾಳಿ
ಎರಡು ಪಂದ್ಯ ಗೆದ್ದರೂ ಕೇನ್ ಪಡೆಗೆ ಸಿಹಿ ಸಂಶಯ
Team Udayavani, May 17, 2022, 6:35 AM IST
ಹೊಸದಿಲ್ಲಿ: ಮೊದಲೆರಡು ಸೋಲುಗಳ ಬಳಿಕ ಸತತ 5 ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿದ ಸನ್ರೈಸರ್ ಹೈದರಾಬಾದ್ ನೆಚ್ಚಿನ ತಂಡವಾಗ ಮೂಡಿಬಂದದ್ದು ಸಹಜ. ಆದರೆ ಅನಂತರದ ಸತತ 5 ಸೋಲು ಕೇನ್ ವಿಲಿಯಮ್ಸನ್ ಪಡೆಯ ಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿದೆ.
ಇದೀಗ ಮಂಗಳವಾರ ಮುಂಬೈ ಇಂಡಿಯನ್ಸ್ ವಿರುದ್ಧ ತನ್ನ 13ನೇ ಪಂದ್ಯವನ್ನು ಆಡಲಿಳಿಯಲಿದೆ. ಒಂದೇ ಸಾಲಲ್ಲಿ ಹೇಳುವುದಾದರೆ, ಇದು ಹೈದರಾಬಾದ್ ಹೊರಬೀಳುವ ಹೊತ್ತು!
ಈ ಪಂದ್ಯದ ಫಲಿತಾಂಶದಿಂದ ಮುಂಬೈಗೆ ಯಾವುದೇ ಲಾಭವಿಲ್ಲ. ಹಾಗೆಯೇ ಹೈದರಾಬಾದ್ಗೂ ಲಾಭವಾಗುವ ಪ್ರಶ್ನೆಯೇ ಇಲ್ಲ. ಉಳಿದೆರಡೂ ಪಂದ್ಯಗಳನ್ನು ಗೆದ್ದು, ಅಂಕವನ್ನು 14ಕ್ಕೆ ಏರಿಸಿಕೊಂಡರೆ ವಿಲಿಯಮ್ಸನ್ ಪಡೆ 4ನೇ ಸ್ಥಾನವಾಗಿ ಪ್ಲೇ ಆಫ್ ತಲುಪುತ್ತದೆಂಬ ನಿರೀಕ್ಷೆಯನ್ನು ಇರಿಸಿಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ಸೋಮ ವಾರದ ಪಂದ್ಯಕ್ಕೂ ಮೊದಲಿನ ಲೆಕ್ಕಾಚಾರದಂತೆ ಈ ಒಂದು ಸ್ಥಾನಕ್ಕೆ 5 ತಂಡಗಳ ಸ್ಪರ್ಧೆ ಇದೆ. ಇವುಗಳಲ್ಲಿ ಹೈದರಾಬಾದ್ ಕಟ್ಟಕಡೆಯ ಸ್ಥಾನಿ ಯಾಗಿದೆ. ರನ್ರೇಟ್ ಮೈನಸ್ನಲ್ಲಿರುವುದರಿಂದ ಇಲ್ಲಿ ಯಾವುದೇ ಪವಾಡ ಅಸಾಧ್ಯ.
ಮುಂಬೈ ವಿರುದ್ಧ ಗೆದ್ದು ಒಂದಿಷ್ಟು ಪ್ರತಿಷ್ಠೆ ಗಳಿಸಿಕೊಳ್ಳ ಬಹುದು, ಅಷ್ಟೇ. ಆದರೆ ತಾನು ಹೊರಬಿದ್ದ ಬಳಿಕ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹೊರದಬ್ಬುವ ಮೂಲಕ ಮುಂಬೈ ಸುದ್ದಿಯಾಗಿದೆ. ಇನ್ನೀಗ ಹೈದರಾಬಾದ್ಗೂ ಕೂಟದಿಂದ ಗೇಟ್ಪಾಸ್ ಕೊಟ್ಟು ಕಳೆದುಹೋದ ತನ್ನ ಪ್ರತಿಷ್ಠೆಯನ್ನು ಒಂದಿಷ್ಟಾದರೂ ಗಳಿಸಿಕೊಳ್ಳುವುದು ರೋಹಿತ್ ಶರ್ಮ ಬಳಗದ ಯೋಜನೆ. ಅಂದಹಾಗೆ ಇದು ಪ್ರಸಕ್ತ ಸಾಲಿನಲ್ಲಿ ಇತ್ತಡಗಳ ನಡುವಿನ ಮೊದಲ ಪಂದ್ಯ.
ಹೈದರಾಬಾದ್ ಹಿನ್ನಡೆ
ಹೈದರಾಬಾದ್ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗವೆರಡೂ ಸತತವಾಗಿ ಹಿನ್ನಡೆ ಅನು ಭವಿಸುತ್ತ ಬಂದಿದೆ. ಮೊದಲಾಗಿ ನಾಯಕನೇ “ಕಪ್ತಾನನ ಆಟ’ ಆಡುತ್ತಿಲ್ಲ. ಕೇನ್ ವಿಲಿಯ ಮ್ಸನ್ ಮಟ್ಟಿಗೆ ಈ ಐಪಿಎಲ್ ಬಿಗ್ ಫ್ಲಾಪ್. ಇವರ ಜತೆಗಾರ ಅಭಿಷೇಕ್ ಶರ್ಮ ಒಂದು ಹಂತದ ತನಕವಷ್ಟೇ ಮಿಂಚಿ ದರು. ರಾಹುಲ್ ತ್ರಿಪಾಠಿ, ಐಡನ್ ಮಾರ್ಕ್ರಮ್, ನಿಕೋಲಸ್ ಪೂರಣ್ ಅವರನ್ನೊಳಗೊಂಡ ಮಧ್ಯಮ ಕ್ರಮಾಂಕ ಎಂದೂ “ಟೀಮ್’ ಆಗಿ ಆಡಿಲ್ಲ. ವಾಷಿಂಗ್ಟನ್ ಸುಂದರ್, ಶಶಾಂಕ್ ಸಿಂಗ್ “ಫಿನಿಶಿಂಗ್ ರೋಲ್’ನಲ್ಲಿ ವೈಫಲ್ಯವನ್ನೇ ಕಾಣುತ್ತಿದ್ದಾರೆ.
ಹೈದರಾಬಾದ್ ಬೌಲಿಂಗ್ ವಿಭಾಗ ವೇಗಕ್ಕೆ ಹೆಸರುವಾಸಿ. ಆದರೆ ಒಮ್ಮೆ ಈ ವೇಗದ ಮರ್ಮ ಅರಿತರೆ ಇಡೀ ಬೌಲಿಂಗ್ ವಿಭಾಗವೇ ಚಿಂದಿಯಾಗುತ್ತದೆ. ಹೈದರಾಬಾದ್ ಈಗ ಇದೇ ಸ್ಥಿತಿಯಲ್ಲಿದೆ. ಉಮ್ರಾನ್ ಮಲಿಕ್ ಹೊರತುಪಡಿಸಿ ಬೇರೆ ಯಾವ ವೇಗಿಯೂ ಘಾತಕವಾಗಿ ಪರಿಣಮಿಸುತ್ತಿಲ್ಲ. ಪರ್ಯಾಯವಾಗಿ ಪರಿಣಾಮಕಾರಿ ಸ್ಪಿನ್ನರ್ ಕೂಡ ಇಲ್ಲ.
ಕೊನೆಯ ಸ್ಥಾನದ ಸಂಕಟ
ಮುಂಬೈ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈಯನ್ನು 97ಕ್ಕೆ ಉಡಾಯಿಸಿದ ಖುಷಿಯಲ್ಲಿದೆ. ಆದರೆ ಇದನ್ನು ಬೆನ್ನಟ್ಟುವಾಗ ಸಾಕಷ್ಟು ಪರದಾಡಿದ್ದು ಸುಳ್ಳಲ್ಲ. ಯುವ ಬ್ಯಾಟರ್ ತಿಲಕ್ ವರ್ಮ ಕ್ರೀಸ್ ಆಕ್ರಮಿಸಿಕೊಳ್ಳದೇ ಹೋಗಿದ್ದರೆ ಮುಂಬೈ ಕೂಡ ಪಲ್ಟಿ ಹೊಡೆಯುವ ಸಾಧ್ಯತೆ ಇತ್ತು. ಮುಂಬೈ ಮುಂದಿರುವ ಯೋಜನೆಯೆಂದರೆ ಕಟ್ಟಕಡೆಯ ಸ್ಥಾನದ ಅವಮಾನವನ್ನು ತಪ್ಪಿಸಿಕೊಳ್ಳು ವುದು. ಸದ್ಯ ಅದು 3 ಪಂದ್ಯಗಳನ್ನು ಗೆದ್ದು 6 ಅಂಕ ಹೊಂದಿದೆ. 2 ಪಂದ್ಯ ಬಾಕಿ ಇದೆ. ಎರಡನ್ನೂ ಗೆದ್ದರೆ ಅಂಕ 10ಕ್ಕೆ ಏರಲಿದೆ.
ಇನ್ನೊಂದೆಡೆ ಚೆನ್ನೈ 13 ಪಂದ್ಯಗಳಿಂದ 8 ಅಂಕ ಗಳಿಸಿ ಮುಂಬೈಗಿಂತ ಒಂದು ಮೆಟ್ಟಿಲು ಮೇಲಿದೆ. ಧೋನಿ ಪಡೆಯನ್ನು ಹೊರದಬ್ಬಿದ ರೀತಿಯಲ್ಲಿ ಇದನ್ನು ಅಂಕಪಟ್ಟಿಯಲ್ಲಿ ಕೆಳಕ್ಕೆ ತಳ್ಳುವಲ್ಲೂ ರೋಹಿತ್ ಪಡೆ ಯಶಸ್ವಿಯಾದೀತೇ? ಈ ಹಾದಿಯ ಮೊದಲ ಹೆಜ್ಜೆಯೆಂದರೆ ಹೈದರಾಬಾದನ್ನು ಉರುಳಿಸುವುದು!