IPL 2023 “ಇದು ಕೊನೆಯ ಹಂತ…” ನಿವೃತ್ತಿಯ ಸುಳಿವು ನೀಡಿದ ಮಹೇಂದ್ರ ಸಿಂಗ್ ಧೋನಿ
Team Udayavani, Apr 22, 2023, 8:33 AM IST
ಚೆನ್ನೈ: ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶುಕ್ರವಾರದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸುಲಭ ಜಯ ಸಾಧಿಸಿದೆ. ಹೈದರಾಬಾದ್ ನೀಡಿದ 135 ರನ್ ಗಳ ಸುಲಭ ಗುರಿ ಬೆನ್ನತ್ತಿದ ಚೆನ್ನೈ ತಂಡವು 18.4 ಓವರ್ ಗಳಲ್ಲಿ ಗೆಲುವು ಕಂಡಿತು.
ಪಂದ್ಯದ ಬಳಿಕ ಸಿಎಸ್ ಕೆ ನಾಯಕ ಎಂ.ಎಸ್. ಧೋನಿ ನಿವೃತ್ತಿ ಸುಳಿವು ನೀಡಿದ್ದಾರೆ.
“ನನ್ನ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದೇನೆ. ಆದರೆ ಹೆಚ್ಚು ಸಮಯ ನಾನು ಆಡಿದಂತೆ ಅದನ್ನು ಆನಂದಿಸುವುದು ಮುಖ್ಯ” ಎಂದಿದ್ದಾರೆ.
“ಎರಡು ವರ್ಷದ ನಂತರದ ಇಲ್ಲಿ ಅಭಿಮಾನಿಗಳು ಬಂದು ಪಂದ್ಯ ನೋಡುತ್ತಿದ್ದಾರೆ. ಕ್ರೀಡಾಂಗಣ ತುಂಬಿದೆ. ಇಲ್ಲಿ ಆಡಲು ಖುಷಿಯಾಗುತ್ತದೆ. ನಾವು ಚೆನ್ನೈನಲ್ಲಿ ಹೆಚ್ಚು ಪಂದ್ಯಗಳನ್ನಾಡಿಲ್ಲ. ಈ ಜನರು ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ. ಅವರು ಯಾವತ್ತೂ ನನ್ನ ಮಾತುಗಳನ್ನು ಕೇಳಲು ಇರುತ್ತಾರೆ. ( ಪ್ರೆಸೆಂಟೇಶನ್ ಮಾತುಗಳು) ಹೆಚ್ಚು ಬ್ಯಾಟಿಂಗ್ ಮಾಡಲು ಅವಕಾಶ ಸಿಗುತ್ತಿಲ್ಲ, ಪರವಾಗಿಲ್ಲ, ಹುಡುಗರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ” ಎಂದು ಧೋನಿ ಹೇಳಿದರು.
41 ವರ್ಷದ ಧೋನಿ 2020ರ ಆಗಸ್ಟ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಆದರೆ ಬಳಿಕವೂ ಐಪಿಎಲ್ ಆಡುತ್ತಿದ್ದಾರೆ. 2022ರ ಸೀಸನ್ ನ ಆರಂಭದಲ್ಲಿ ಚೆನ್ನೈ ತಂಡದ ನಾಯಕತ್ವವನ್ನು ರವೀಂದ್ರ ಜಡೇಜಾಗೆ ನೀಡಲಾಗಿತ್ತು. ಆದರೆ ಅವರು ವಿಫಲರಾದ ಹಿನ್ನೆಲೆಯಲ್ಲಿ ಧೋನಿ ಮತ್ತೆ ನಾಯಕತ್ವ ನಿಭಾಯಿಸುತ್ತಿದ್ದಾರೆ.