ಸೋಲಿನ ಹೊಣೆ ಹೊತ್ತ ಲಂಕಾ ನಾಯಕ ಲಸಿತ ಮಾಲಿಂಗ
Team Udayavani, Jan 12, 2020, 1:53 PM IST
ಪುಣೆ: ಭಾರತದೆದುರಿನ ಟಿ20 ಸರಣಿ ಸೋಲಿನ ಹೊಣೆಯನ್ನು ತಾನೇ ಹೊತ್ತುಕೊಳ್ಳುವುದಾಗಿ ಶ್ರೀಲಂಕಾ ತಂಡದ ನಾಯಕ ಲಸಿತ ಮಾಲಿಂಗ ಹೇಳಿದ್ದಾರೆ. ಅನನುಭವಿ ತಂಡವೊಂದನ್ನು ಮುನ್ನಡೆಸುವ ಒತ್ತಡ ಎನ್ನುವುದು ತನ್ನ ಸಾಧನೆಗೆ ಅಡ್ಡಿಯಾಯಿತು ಎಂದಿದ್ದಾರೆ.
ನಾವು 2-0 ಅಂತರದಿಂದ ಸರಣಿ ಸೋತೆವು. ನಿಜಕ್ಕಾದರೆ ನಾಯಕನಾದ ನಾನು ಈ ಸರಣಿಯಲ್ಲಿ ಉತ್ತಮ ನಿರ್ವಹಣೆ ತೋರಬೇಕಿತ್ತು. ಏಕೆಂದರೆ, ನಾನು ಟಿ20 ಕ್ರಿಕೆಟಿನ ಅತ್ಯಂತ ಅನುಭವಿ ಆಟಗಾರ. ನಾನೋರ್ವ ವಿಕೆಟ್ ಟೇಕಿಂಗ್’ ಬೌಲರ್. ಹೀಗಾಗಿ ನನ್ನ ಮೇಲೆ ಭಾರೀ ಒತ್ತಡವಿತ್ತು. ಆದರೆ ನನಗೆ ಈ ಸರಣಿಯಲ್ಲಿ ಒಂದೂ ವಿಕೆಟ್ ಕೀಳಲಾಗಲಿಲ್ಲ.ಪಂದ್ಯ ಗೆಲ್ಲಬೇಕಾದರೆ ಪವರ್ ಪ್ಲೇ ಅವಧಿಯಲ್ಲಿ ಒಂದೆರಡು ವಿಕೆಟ್ ಉರುಳಿಸಲೇಬೇಕು. ಅದು ನಮ್ಮಿಂದ ಸಾಧ್ಯವಾಗಲಿಲ್ಲ. ಭಾರತದ ಆರಂಭಿಕರು ಉತ್ತಮ ಜತೆಯಾಟ ನಿಭಾಯಿಸಿದರು’ ಎಂದು 82 ಟಿ20 ಪಂದ್ಯಗಳ ಅನುಭವಿ ಮಾಲಿಂಗ ಹೇಳಿದರು.
ನಾನು 2014ರಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾಗ ನಮ್ಮಲ್ಲಿ ಸಂಗಕ್ಕರ, ಜಯವರ್ಧನ, ದಿಲ್ಶನ್ ಇದ್ದರು.ಇವರು ಇನಿಂಗ್ಸ್ ಕಟ್ಟುವ ಕೆಲಸ ಮಾಡುತ್ತಿದ್ದರು. ಈಗಿನದು ಎಳೆಯರ ತಂಡ. ಆದರೆ ಅನುಭವಿಗಳಲ್ಲ. ನಾನು ಎಲ್ಲರಿಗೂ ಮಾರ್ಗದರ್ಶನ ನೀಡಬೇಕಾಗುತ್ತದೆ. ಇದು ವೈಯಕ್ತಿಕ ನಿರ್ವಹಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎಂಬುದು ಮಾಲಿಂಗ ಅಭಿಪ್ರಾಯ.