Maharaja Trophy: ಮಾಯಾಂಕ್ ಅಗರ್ವಾಲ್ ಶತಕ; 9ನೇ ಪಂದ್ಯದಲ್ಲಿ ಗೆದ್ದ ಬೆಂಗಳೂರು
Team Udayavani, Aug 26, 2023, 12:01 AM IST
ಬೆಂಗಳೂರು: “ಮಹಾರಾಜ ಟ್ರೋಫಿ’ ಕೆಎಸ್ಸಿಎ ಟಿ20 ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಶುಕ್ರವಾರ ನಡೆದ ತನ್ನ 9ನೇ ಹಾಗೂ ಕೂಟದ 25ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಗೆ 10 ರನ್ನುಗಳ ಸೋಲುಣಿಸುವ ಮೂಲಕ ಬ್ಲಾಸ್ಟರ್ ಮೊದಲ ಸಲ ಸದ್ದು ಮಾಡಿತು.
ಈ ಗೆಲುವೇನೂ ಸುಲಭದ್ದಾಗಿರಲಿಲ್ಲ. ನಾಯಕ ಮಾಯಾಂಕ್ ಅಗರ್ವಾಲ್ ಅವರ ಅಮೋಘ 105 ರನ್ ಪರಾಕ್ರಮದಿಂದ ಬೆಂಗಳೂರು 4 ವಿಕೆಟಿಗೆ 212 ರನ್ ಪೇರಿಸಿದರೂ ಮೈಸೂರು ಬೆನ್ನಟ್ಟಿಕೊಂಡು ಬಂತು. ಅಂತಿಮವಾಗಿ 8 ವಿಕೆಟಿಗೆ 202 ರನ್ ಗಳಿಸಿ ಗೆಲುವಿನಿಂದ ಸ್ವಲ್ಪವೇ ದೂರ ಉಳಿಯಿತು.
ಅಬ್ಬರಿಸಿದ ಅಗರ್ವಾಲ್ ಕೇವಲ 57 ಎಸೆತಗಳಿಂದ 105 ರನ್ ಬಾರಿಸಿದರು. ಸಿಡಿಸಿದ್ದು 8 ಸಿಕ್ಸರ್ ಹಾಗೂ 9 ಬೌಂಡರಿ. ಸೂರಜ್ ಅಹುಜಾ 35, ನಿಶ್ಚಲ್ 29 ಹಾಗೂ ಶುಭಾಂಗ್ ಹೆಗ್ಡೆ 24 ರನ್ ಮಾಡಿದರು.
ಮೈಸೂರು ತಂಡದ ಆರಂಭ ಭರ್ಜರಿಯಾಗಿತ್ತು. ಆರ್. ಸಮರ್ಥ್ (35), ಎಸ್.ಯು. ಕಾರ್ತಿಕ್ (70), ನಾಯಕ ಕರುಣ್ ನಾಯರ್ (32) ಅವರ ಬ್ಯಾಟಿಂಗ್ ಪರಾಕ್ರಮದಿಂದ 12ನೇ ಓವರ್ನಲ್ಲಿ ಒಂದೇ ವಿಕೆಟಿಗೆ 130 ರನ್ ಸೂರೆಗೈದು ಬೆಂಗಳೂರಿಗೆ ಭೀತಿಯೊಡ್ಡಿತು. ಆದರೆ ಮೊಹ್ಸಿನ್ ಖಾನ್ ಅವರ ಬೌಲಿಂಗ್ ದಾಳಿಗೆ ಕುಸಿತ ಅನುಭವಿಸಿತು. ಮೊಹ್ಸಿನ್ 35ಕ್ಕೆ 4 ವಿಕೆಟ್ ಕಿತ್ತರು.