ನ್ಯೂಜಿಲ್ಯಾಂಡ್ ಓಪನ್ ಬ್ಯಾಡ್ಮಿಂಟನ್: ಪ್ರಣಯ್ ಭಾರತದ ಏಕೈಕ ಭರವಸೆ
Team Udayavani, May 3, 2019, 6:00 AM IST
ಆಕ್ಲೆಂಡ್: ಭಾರತದ ಎಚ್.ಎಸ್. ಪ್ರಣಯ್ ನ್ಯೂಜಿಲ್ಯಾಂಡ್ ಓಪನ್ಕೂಟದಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ. ಆದರೆ ಬಿ. ಸಾಯಿ ಪ್ರಣೀತ್, ಪುರುಷರ ಡಬಲ್ಸ್ ಜೋಡಿ ಸೋಲನುಭವಿಸಿ ಕೂಟದಿಂದ ನಿರ್ಗಮಿಸಿದ್ದಾರೆ.
ಗುರುವಾರ ನಡೆದ ಪುರುಷರ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಪ್ರಣಯ್ ಇಂಡೋನೇಶ್ಯದ ಟಾಮಿ ಸುಗಿರ್ಟೊ ಅವರನ್ನು 21-14, 21-6 ಗೇಮ್ಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಶ್ರೇಯಾಂಕ ರಹಿತ ಆಟಗಾರ ಪ್ರಣಯ್ ಎರಡನೇ ಶ್ರೇಯಾಂಕದ ಟಾಮಿ ಅವರನ್ನು ಕೇವಲ 37 ನಿಮಿಷಗಳಲ್ಲಿ ಸೋಲಿಸಿದರು. ಕ್ವಾರ್ಟರ್ಫೈನಲ್ನಲ್ಲಿ ಅವರು 5ನೇ ಶ್ರೇಯಾಂಕದ, ಜಪಾನಿನ ಕಂಟಾ ಸುನೆಯಮ ವಿರುದ್ಧ ಸೆಣಸಾಡಲಿದ್ದಾರೆ.
ವಿಶ್ವದ 26ನೇ ರ್ಯಾಂಕಿನ ಪ್ರಣಯ್ ವಿಶ್ವದ 13ನೇ ರ್ಯಾಂಕಿನ ಆಟಗಾರ ಸುಗಿರ್ಟೊ ಮೊದಲ ಬಾರಿಗೆ ಎದುರಾಗುತ್ತಿದ್ದು, ಮೊದಲ ಮುಖಾಮುಖೀಯಲ್ಲೇ ಅವರಿಗೆ ಆಘಾತ ನೀಡುವಲ್ಲಿ ಯಶಸ್ವಿಯಾದರು. ಮೊದಲ ಗೇಮ್ನಲ್ಲೇ ಉತ್ತಮ ಆರಂಭ ಪಡೆದ ಪ್ರಣಯ್ 7 -3 ಅಂಕಗ ಮುನ್ನಡೆಯಲ್ಲಿದ್ದರು. ಈ ಮುನ್ನಡೆಯನ್ನು 11-4ಕ್ಕೆ ಏರಿಸಿಕೊಂಡ ಪ್ರಣಯ್ ಅನಂತರದಿಂದ ಗೇಮ್ನ ಉದ್ದಕ್ಕೂ ಮುನ್ನಡೆ ಕಾಯ್ದುಕೊಂಡು 21-14 ಅಂಕಗಳ ಅಂತರದಲ್ಲಿ ಗೆದ್ದರು.
ದ್ವಿತೀಯ ಗೇಮ್ನ ಆರಂಭದಲ್ಲಿ ಇವರಿಬ್ಬರ ನಡುವೆ ತೀವ್ರ ಪೈಪೋಟಿ ನಡೆಯಿತು. ಸುಗಿರ್ಟೊ ಆರಂಭದಲ್ಲಿ 4-2 ಮುನ್ನಡೆಯಲ್ಲಿದ್ದರು. ಆದರೆ ಆಟಕ್ಕೆ ಮರಳಿದ ಪ್ರಣಯ್ ಸತತ 4 ಅಂಕಗಳನ್ನು ಗಳಿಸಿ 8-4 ಅಂತರವನ್ನು ಪಡೆದರು. ಒಂದು ಬಾರಿ ಮುನ್ನಡೆ ಪಡೆದ ಬಳಿಕ ತಿರುಗಿ ನೋಡದ ಪ್ರಣಯ್ ಎದುರಾಳಿಯನ್ನು 6 ಅಂಕಗಳಿಗೆ ಕಟ್ಟಿಹಾಕಿ 21-6 ಅಂತರದಲ್ಲಿ ಗೆದ್ದು ಮುನ್ನಡೆದರು.
ಪ್ರಣೀತ್ಗೆ ಸೋಲು
ಪುರುಷರ ಸಿಂಗಲ್ಸ್ ವಿಭಾಗದ ಇನ್ನೊಂದು ಪಂದ್ಯದಲಲಿ ಬಿ ಸಾಯಿ ಪ್ರಣೀತ್ 7ನೇ ಶ್ರೇಯಾಂಕದ, ಚೀನದ ಲಿನ್ ಡಾನ್ ವಿರುದ್ಧ 12-21, 12-21 ಗೇಮ್ಗಳಿಂದ ಸೋತು ನಿರಾಸೆ ಮೂಡಿಸಿದರು. ಪುರುಷರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಭಾರತದ ಭರವಸೆಯ ಜೋಡಿ ಮನು ಅತ್ರಿ-ಸುಮೀತ್ ಬಿ ರೆಡ್ಡಿ ಮಲೇಶ್ಯದ ಗೊಹ್ ವಿ ಶೆಮ್-ತಾನ್ ವೀ ಕಿಯಾಂಗ್ ಜೋಡಿ ವಿರುದ್ಧ 17-21, 19-21 ಗೇಮ್ಗಳಿಂದ ಪರಾಭವಗೊಂಡಿತು.ಈ ಎರಡು ಸೋಲಿನೊಂದಿಗೆ ಎಚ್.ಎಸ್. ಪ್ರಣಯ್ ಈ ಕೂಟದಲ್ಲಿ ಭಾರತದ ಏಕೈಕ ಭರವಸೆಯಾಗಿದ್ದಾರೆ.