Puttur; ರಾಜ್ಯ ಮಟ್ಟದ ಕ್ರೀಡಾಕೂಟ ಆರಂಭ
Team Udayavani, Dec 2, 2023, 11:50 PM IST
ಪುತ್ತೂರು: ದ.ಕ. ಜಿಲ್ಲಾಡಳಿತ, ಜಿ.ಪಂ., ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲಾ ನೇತೃತ್ವದಲ್ಲಿ ಹದಿನೇಳರ ವಯೋಮಾನದ ಪ್ರೌಢಶಾಲಾ ಬಾಲಕ-ಬಾಲಕಿಯರ ರಾಜ್ಯಮಟ್ಟದ ಕ್ರೀಡಾಕೂಟ-ಕ್ರೀಡಾ ಕಾರಂಜಿ ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಉದ್ಘಾಟನೆಗೊಂಡಿತು.
ಶಾಸಕ ಅಶೋಕ್ ಕುಮಾರ್ ರೈ ದೀಪ ಬೆಳಗಿಸಿ ಉದ್ಘಾಟಿಸಿ, ಪುತ್ತೂರಿನ ಇತಿಹಾಸದಲ್ಲೇ ಪ್ರಥಮ ಎಂಬಂತೆ ಅತ್ಯಂತ ಅರ್ಥಪೂರ್ಣ ರೀತಿಯಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜನೆಗೊಂಡಿದೆ. ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡು ಮುಂದಿನ ದಿನಗಳಲ್ಲಿ ರಾಜ್ಯ, ದೇಶಕ್ಕೆ ಹೆಸರು ತರುವ ಕೆಲಸ ಕ್ರೀಡಾಪಟುಗಳ ಮೂಲಕ ಆಗಲಿ ಎಂದು ಶುಭ ಹಾರೈಸಿದರು.
ಸುಳ್ಯ ಶಾಸಕ ಭಾಗೀರಥಿ ಮುರುಳ್ಯ, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಕೂಳೂರು, ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಶುಭ ಹಾರೈಸಿದರು. ಸಹಾಯಕ ಆಯುಕ್ತ ಗಿರೀಶ್ ನಂದನ್, ನಗರಸಭೆ ಸದಸ್ಯ ಜಗನ್ನಿವಾಸ್ ರಾವ್ ಪಿ.ಜಿ., ರಾಜ್ಯ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಚೌಡಪ್ಪ, ಸಹಕಾರ ಧುರೀಣ ದಂಬೆಕ್ಕಾನ ಸದಾಶಿವ ರೈ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಭುವನೇಶ್ ಜೆ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಸಾಜ ರಾಧಾಕೃಷ್ಣ ಆಳ್ವ, ಶಶಿಕುಮಾರ್ ರೈ ಬಾಲೊÂಟ್ಟು ಉಪಸ್ಥಿತರಿದ್ದರು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಎ. ಹೇಮನಾಥ ಶೆಟ್ಟಿ ಕಾವು ಸ್ವಾಗತಿಸಿ, ಡಿಡಿಪಿಐ ದಯಾನಂದ ನಾಯಕ್ ಪ್ರಸ್ತಾವನೆಗೈದರು. ಶ್ರೀ ರಾಮಕೃಷ್ಣ ಪ್ರೌಢಶಾಲಾ ಮುಖ್ಯಗುರು ಜಯಲಕ್ಷ್ಮೀ ಎ. ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಜೋಡುಕಟ್ಟೆ ನಿರೂಪಿಸಿದರು. ಡಿ.3 ಮತ್ತು 4ರಂದು ಬಾಲಕ ಮತ್ತು ಬಾಲಕಿಯರಿಗೆ ಒಟ್ಟು 17 ವಿಭಾಗದಲ್ಲಿ 34 ಸ್ಪರ್ಧೆಗಳು ನಡೆಯಲಿವೆ.