ಟೀಂ ಇಂಡಿಯಾದಲ್ಲಿ ಮತ್ತೆ ಒಡಕು: ಕೊಹ್ಲಿ ವಿರುದ್ಧ ದೂರು ನೀಡಿದ ಮತ್ತಿಬ್ಬರು ಆಟಗಾರರು
Team Udayavani, Sep 30, 2021, 8:45 AM IST
ಮುಂಬೈ: ಭಾರತೀಯ ಪುರುಷರ ಕ್ರಿಕೆಟ್ ತಂಡದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಮತ್ತೆ ಸಾಬೀತಾಗಿದೆ. ತಂಡವೀಗ ಒಡೆದ ಮನೆಯಾಗಿದೆ. ನಾಯಕ ವಿರಾಟ್ ಕೊಹ್ಲಿ ವಿರುದ್ಧ ಹಿರಿಯ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ವಿರಾಟ್ ವಿರುದ್ಧ ಬಿಸಿಸಿಐ ಗೆ ದೂರು ನೀಡಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಹಿರಿಯ ಆಟಗಾರರಾದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಕೂಡಾ ವಿರಾಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಜೂನ್ ತಿಂಗಳಿನಲ್ಲಿ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿತ್ತು. ಈ ಮೂಲಕ ಚೊಚ್ಚಲ ಟೆಸ್ಟ್ ಚಾಂಪಿಯನ್ ಆಗುವ ಅವಕಾಶ ಕೈತಪ್ಪಿತ್ತು. ಈ ಪಂದ್ಯದ ಸೋಲಿನ ಬಳಿಕ ರಹಾನೆ ಮತ್ತು ಪೂಜಾರ ಅವರು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಗೆ ಕರೆ ಮಾಡಿ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಅಸಮಾಧಾನ ತೋರಿದ್ದರು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ರಾಜಸ್ಥಾನ್ ವಿರುದ್ಧ RCB ಜಯ : ಪ್ಲೇ ಆಫ್ ಗೆ ಬೆಂಗಳೂರು ಸನಿಹ
ಕಿವೀಸ್ ವಿರುದ್ಧದ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಅವರು ಹಿರಿಯ ಆಟಗಾರರ ಮನಸ್ಥಿತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. “ನಾವು ರನ್ ಗಳಿಸುವ ಬಗ್ಗೆ ಮನಸ್ಥಿತಿ ಹೊಂದಿರಬೇಕು. ನೀವು ಔಟಾಗುವ ಬಗ್ಗೆ ಹೆಚ್ಚು ಭಯಪಟ್ಟರೆ ಬೌಲರ್ ಗಳು ನಿಮ್ಮ ಮೇಲೆ ಹೆಚ್ಚು ದಾಳಿ ನಡೆಸುತ್ತಾರೆ” ಎಂದು ರಹಾನೆ ಮತ್ತು ಪೂಜಾರ ಹೆಸರೆತ್ತದೆ ಕೊಹ್ಲಿ ಹೇಳಿದ್ದರು.
ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ನ ವರದಿಯ ಪ್ರಕಾರ, ಕೊಹ್ಲಿಯ ನಾಯಕತ್ವದ ಬಗ್ಗೆ ಚರ್ಚಿಸಲು ಪೂಜಾರ ಮತ್ತು ರಹಾನೆ ಜಯ್ ಶಾಗೆ ಕರೆ ಮಾಡಿದ್ದರು. ಹೀಗಾಗಿ ಬಿಸಿಸಿಐ ಮಧ್ಯ ಪ್ರವೇಶಿಸಲು ನಿರ್ಧರಿಸಿತ್ತು. ಇಬ್ಬರು ಹಿರಿಯ ಆಟಗಾರರಿಂದ ಕರೆ ಬಂದ ನಂತರ, ಬಿಸಿಸಿಐ ಇತರ ಆಟಗಾರರಿಂದಲೂ ಪ್ರತಿಕ್ರಿಯೆ ಕೇಳಿದೆ. ಪ್ರವಾಸ ಮುಗಿದ ನಂತರ ತಂಡವು ಅದರ ಮೇಲೆ ಕಾರ್ಯನಿರ್ವಹಿಸಲು ನಿರ್ಧರಿಸಿದೆ.
ವರ್ಕ್ ಲೋಡ್ ಕಾರಣದಿಂದ ವಿರಾಟ್ ಟಿ20 ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ್ದಾರೆ. ಟಿ20 ವಿಶ್ವಕಪ್ ಅವರ ಕೊನೆಯ ನಾಯಕತ್ವದ ಜವಾಬ್ದಾರಿಯಾಗಿರಲಿದೆ. ಮುಂದಿನ ವರ್ಷದ ಏಕದಿನ ವಿಶ್ವಕಪ್ ಬಳಿಕ ಕೊಹ್ಲಿ ಒಡಿಐ ನಾಯಕತ್ವಕ್ಕೂ ವಿದಾಯ ಹೇಳುತ್ತಾರೆ ಎನ್ನಲಾಗಿದೆ.