ಪಂದ್ಯಶ್ರೇಷ್ಠ ಪ್ರಶಸ್ತಿ ಘೋಷಿಸುವುದನ್ನೇ ಮರೆತ ರವಿಶಾಸ್ತ್ರಿ!
Team Udayavani, Apr 13, 2017, 11:25 PM IST
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ಮಟ್ಟಿಗೆ ರವಿಶಾಸ್ತ್ರಿ ಎರಡು ರೀತಿಯಲ್ಲಿ ಚಿರಪರಿಚಿತ. ಒಂದು ಕಾಲದಲ್ಲಿ ಖ್ಯಾತ ಆಲ್ರೌಂಡರ್ ಆಗಿದ್ದ ಅವರು ನಿವೃತ್ತಿಯ ಅನಂತರ ತಮ್ಮ ಕಂಚಿನ ಕಂಠದಿಂದ ವೀಕ್ಷಕ ವಿವರಣೆಕಾರರಾಗಿ ಹೆಸರು ಮಾಡಿದ್ದಾರೆ. ಭಾರತ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಾಗ, 2007ರ ಟಿ20 ವಿಶ್ವಕಪ್ನಲ್ಲಿ ಯುವರಾಜ್ ಸತತ 6 ಸಿಕ್ಸರ್ ಬಾರಿಸಿದಾಗ ರವಿಶಾಸ್ತ್ರಿಯೇ ವೀಕ್ಷಕ ವಿವರಣೆಕಾರರಾಗಿದ್ದರು. ತಮ್ಮ ಮಾತಿನಿಂದಲೇ ಗಮನ ಸೆಳೆದವರು. ಅಂತಹ ರವಿಶಾಸ್ತ್ರಿ ಮಾತಿನಲ್ಲಿ ಎಡವಿ ಎಡವಟ್ಟು ಮಾಡಿಕೊಂಡಿದ್ದಾರೆ.
ಇದು ನಡೆದಿದ್ದು ಬುಧವಾರದ ಮುಂಬೈ ಇಂಡಿಯನ್ಸ್-ಹೈದರಾಬಾದ್ ಐಪಿಎಲ್ ಪಂದ್ಯದ ವೇಳೆ. ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ರವಿಶಾಸ್ತ್ರಿ ಎಲ್ಲವನ್ನೂ ಹೇಳಿ ಪಂದ್ಯಶ್ರೇಷ್ಠ ಪ್ರಶಸ್ತಿ ಘೋಷಿಸುವುದನ್ನೇ ಮರೆತಿದ್ದಾರೆ. ಅಷ್ಟಕ್ಕೇ ನಿಲ್ಲದೇ ಶುಭರಾತ್ರಿ ಹೇಳಿಯೂ ಮುಗಿಸಿದ್ದಾರೆ. ಆ ಕೂಡಲೇ ಟಿವಿ ನೇರಪ್ರಸಾರವೂ ನಿಂತು ಹೋಗಿದೆ. ಕೂಡಲೇ ಟಿವಿ ಸ್ಟುಡಿಯೋದಲ್ಲಿದ್ದ ಕೆವಿನ್ ಪೀಟರ್ಸನ್, ಮುರಳಿ ಕಾರ್ತಿಕ್, ನಿರೂಪಕ ಗೌರವ್ ಕಪೂರ್ ನಕ್ಕಿದ್ದಾರೆ. ಅಷ್ಟರಲ್ಲಿ ಪ್ರೇಕ್ಷಕರೂ ಎದ್ದು ಹೋಗಲು ಸಿದ್ಧವಾಗಿದ್ದಾರೆ. ಆಗ ರವಿಶಾಸ್ತ್ರಿ ಕ್ಷಮೆಯಾಚಿಸಿ ಮತ್ತೆ ಪಂದ್ಯಶ್ರೇಷ್ಠ ಪ್ರಶಸ್ತಿ ಘೋಷಿಸಿದ್ದಾರೆ. ಮೊದಲನೇ ಬಸ್ಗೆ ಹೋಗಲು ಸಿದ್ಧವಾಗಿದ್ರಾ ಎಂದು ಕೇಳುವ ಮೂಲಕ ಟ್ವೀಟರ್ನಲ್ಲಿ ಕೆವಿನ್ ಪೀಟರ್ಸನ್ ಅವರು ರವಿಶಾಸ್ತ್ರಿ ಕಾಲೆಳೆದಿದ್ದಾರೆ.