ಒಲಿಂಪಿಕ್ ತಪ್ಪಿದ್ದಕ್ಕೆ ಎಐಟಿಎ ವಿರುದ್ಧ ರೋಹನ್ ಬೋಪಣ್ಣ ಕಿಡಿ
Team Udayavani, Jul 20, 2021, 3:50 PM IST
ನವದೆಹಲಿ: ಟೋಕ್ಯೋ ಒಲಿಂಪಿಕ್ ಶುರುವಾಗಲು ಕೆಲವೇ ದಿನಗಳು ಉಳಿದಿವೆ. ಅಷ್ಟರಲ್ಲಿ ಭಾರೀ ವಿವಾದವೊಂದು ಭಾರತೀಯ ಟೆನಿಸ್ ವಲಯದಲ್ಲಿ ಎದ್ದಿದೆ.
ಟೋಕ್ಯೋ ಒಲಿಂಪಿಕ್ ಡಬಲ್ಸ್ನಲ್ಲಿ ಅರ್ಹತೆ ಪಡೆಯಲು ತನಗೆ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆ ಭಾರತ ಟೆನಿಸ್ ಸಂಸ್ಥೆಯ (ಎಐಟಿಎ) ಬೇಜವಾಬ್ದಾರಿಯೇ ಕಾರಣ ಎನ್ನುವುದು ರೋಹನ್ ಬೋಪಣ್ಣ ಆರೋಪ. ತಮ್ಮಿಂದೇನೂ ತಪ್ಪಾಗಿಲ್ಲ. ಅವರನ್ನು ಟೋಕ್ಯೋಗೆ ಕಳಿಸಲು ತಮ್ಮಿಂದಾದ ಎಲ್ಲ ಪ್ರಯತ್ನ ಮಾಡಿದ್ದೇವೆ ಎಂದು ಎಐಟಿಎ ಹೇಳಿಕೊಂಡಿದೆ.
ಇದನ್ನೂ ಓದಿ:ಪೆಗಾಸಸ್ : ದೇಶಾದ್ಯಂತ 22 ರಂದು ರಾಜ್ ಭವನಕ್ಕೆ ಕಾಂಗ್ರೆಸ್ ಮೆರವಣಿಗೆ
ಈ ಬೆಳವಣಿಗೆಯಿಂದ ಸಾನಿಯಾ ಮಿರ್ಜಾ ಕೂಡ ಎಐಟಿಎ ವಿರುದ್ಧ ಕಿಡಿಕಾರಿದ್ದಾರೆ. ಬೋಪಣ್ಣಗೆ ಅರ್ಹತೆ ಸಿಕ್ಕಿದ್ದರೆ, ತನ್ನೊಂದಿಗೆ ಮಿಶ್ರ ಡಬಲ್ಸ್ನಲ್ಲಿ ಆಡಬಹುದಾಗಿತ್ತು. ಆಗೊಂದು ಪದಕ ಗೆಲ್ಲುವುದು ಸಾಧ್ಯವಾಗುತ್ತಿತ್ತು. ಇಲ್ಲಿ ಎಐಟಿಎ ಸರಿಯಾದ ನಿರ್ಧಾರ ಮಾಡಿಲ್ಲ ಎನ್ನುವುದು ಸಾನಿಯಾ ಅಭಿಪ್ರಾಯ.
ಬೋಪಣ್ಣ ಹೇಳುವುದೇನು?: ಐಟಿಎಫ್ ಸುಮಿತ್ ನಾಗಲ್ ಮತ್ತು ತನ್ನ ಜೋಡಿಯನ್ನು ಒಪ್ಪಿರಲೇ ಇಲ್ಲ. ಜೂ.22ರ ನಂತರ ಯಾವುದೇ ಶಿಫಾರಸನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಐಟಿಎಫ್ ಮುಂಚಿತವಾಗಿಯೇ ಹೇಳಿತ್ತು. ಆದರೂ ತಮಗೊಂದು ಅವಕಾಶವಿದೆ ಎಂದು ಎಐಟಿಎ ಹೇಳುತ್ತಲೇ ಬಂದು, ಇಡೀ ದೇಶವನ್ನು ದಾರಿತಪ್ಪಿಸಿದೆ ಎಂದು ಬೋಪಣ್ಣ ಆರೋಪಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ, ಎಐಟಿಎ ಜೂ.22ಕ್ಕೆ ಮುಂಚಿತವಾಗಿಯೇ ನಾಗಲ್ ಮತ್ತು ತನ್ನ ಹೆಸರನ್ನು ಪರ್ಯಾಯವಾಗಿ ಸೂಚಿಸಿರಬೇಕಾಗಿತ್ತು, ಇಲ್ಲಿ ಅದು ತಪ್ಪು ಮಾಡಿದೆ ಎಂದು ಬೋಪಣ್ಣ ಅಭಿಪ್ರಾಯಿಸಿದ್ದಾರೆ.
ಆದ ಸಮಸ್ಯೆಯಾದರೂ ಏನು?: ಈ ಬಾರಿ ಒಲಿಂಪಿಕ್ನ ಪುರುಷರ ಡಬಲ್ಸ್ನಲ್ಲಿ ಆಡಲು ಶ್ರೇಯಾಂಕ ಲೆಕ್ಕಾಚಾರದಲ್ಲಿ ರೋಹನ್ ಬೋಪಣ್ಣ ದಿವಿಜ್ ಶರಣ್ ಅರ್ಹತೆ ಪಡೆದಿರಲಿಲ್ಲ. ದಿವಿಜ್ ಶ್ರೇಯಾಂಕ ಕಡಿಮೆಯಿದ್ದಿದ್ದೇ ಕಾರಣ. ಆದರೂ ಇಬ್ಬರ ಹೆಸರನ್ನು ಡಬಲ್ಸ್ಗೆ ಜೂ.22ರೊಳಗೆ ಎಐಟಿಎ ಹೆಸರು ಶಿಫಾರಸು ಮಾಡಿತ್ತು.ಬೇರೆ ಆಟಗಾರರು ಹಿಂದೆ ಸರಿದರೆ ಇವರಿಬ್ಬರಿಗೆ ಅವಕಾಶ ಸಿಗುವ ದೂರ ಸಾಧ್ಯತೆಯೊಂದಿದೆ ಇದರ ಹಿಂದಿನ ತರ್ಕ.
ಪ್ರಮುಖ ಅಂತಾರಾಷ್ಟ್ರೀಯ ಸಿಂಗಲ್ಸ್ ಆಟಗಾರರು ಒಲಿಂಪಿಕ್ನಿಂದ ಹಿಂದೆ ಸರಿದ ಪರಿಣಾಮ; ಮೊನ್ನೆ ಶುಕ್ರವಾರ ಸಿಂಗಲ್ಸ್ನಲ್ಲಿ ಆಡಲು ಸುಮಿತ್ ನಾಗಲ್ ಅನಿರೀಕ್ಷಿತವಾಗಿ ಅರ್ಹತೆ ಪಡೆದರು! ಇದರಿಂದ ಖುಷಿಯಾದ ಎಐಟಿಎ ಡಬಲ್ಸ್ನಿಂದ ದಿವಿಜ್ ಶರಣ್ ಹೆಸರನ್ನು ಹಿಂಪಡೆದು, ನಾಗಲ್ಗೆ ಡಬಲ್ಸ್ ಜೊತೆಗಾರನಾಗಿ ರೋಹನ್ ಬೋಪಣ್ಣ ಹೆಸರನ್ನು ಶಿಫಾರಸು ಮಾಡಿತು. ಆದರೆ ಇದನ್ನು ಐಟಿಎಫ್ (ಅಂ.ರಾ. ಟನಿಸ್ ಒಕ್ಕೂಟ) ಒಪ್ಪಲಿಲ್ಲ. ಜೂ.22ರೊಳಗೆ ಈ ಜೋಡಿಯ ಹೆಸರನ್ನು ಪರ್ಯಾಯವಾಗಿ ಎಐಟಿಎ ಸೂಚಿಸಿರಲಿಲ್ಲ ಎನ್ನುವುದು ಐಟಿಎಫ್ ಖಚಿತ ನುಡಿ.