T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
Team Udayavani, Apr 18, 2024, 3:12 PM IST
ಮುಂಬೈ: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಟ್ವೆಂಟಿ-20 ವಿಶ್ವಕಪ್ 2024 ರ ಆಯ್ಕೆಯ ಬಗ್ಗೆ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ವಿಶೇಷ ಮಾತುಕತೆ ನಡೆಸಿದ್ದರು ಎಂಬ ಮಾಧ್ಯಮ ವರದಿಗಳನ್ನು ನಿರಾಕರಿಸಿದ್ದಾರೆ.
ಟಿ20 ವಿಶ್ವಕಪ್ ತಂಡದ ಆಯ್ಕೆಯ ಬಗ್ಗೆ ಊಹಾಪೋಹಗಳು ಮತ್ತು ವದಂತಿಗಳನ್ನು ನಂಬಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.
ಯುಎಸ್ ಮತ್ತು ವೆಸ್ಟ್ ಇಂಡೀಸ್ನಲ್ಲಿ ಪ್ರಾರಂಭವಾಗುವ ಟಿ20 ವಿಶ್ವಕಪ್ ನಲ್ಲಿ ತಾನು ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ಆರಂಭಿಸುವ ವರದಿಯ ಬಗ್ಗೆಯೂ ರೋಹಿತ್ ಸುಮ್ಮನೆ ನಗಾಡಿ ಅಲ್ಲಗಳೆದರು.
ಆ್ಯಡಂ ಗಿಲ್ ಕ್ರಿಸ್ಟ್ ಮತ್ತು ಮೈಕಲ್ ವಾನ್ ಜೊತೆ ಪಾಡ್ ಕಾಸ್ಟ್ ನಲ್ಲಿ ಮಾತನಾಡಿದ ರೋಹಿತ್, ಅಜಿತ್ ಅಗರ್ಕರ್ ಅವರು ದುಬೈನಲ್ಲಿ ಗಾಲ್ಫ್ ಆಡುತ್ತಿದ್ದಾರೆ. ದ್ರಾವಿಡ್ ಅವರು ಮಗನಿಗೆ ಕ್ರಿಕೆಟ್ ಕಲಿಸುತ್ತಿದ್ದಾರೆ. ನಾನು ಅವರನ್ನು ಭೇಟಿಯಾಗಿಲ್ಲ ಎಂದರು.
“ನಾವು ಭೇಟಿಯಾಗಿಲ್ಲ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇಂದಿನ ದಿನಮಾನಗಳಲ್ಲಿ, ಸ್ವತಃ ನಾನೇ, ರಾಹುಲ್, ಅಜಿತ್ ಅಥವಾ ಬಿಸಿಸಿಐನ ಯಾರೋ ಒಬ್ಬರು ಕ್ಯಾಮೆರಾ ಮುಂದೆ ಬಂದು ಮಾತನಾಡದ ಹೊರತು, ಯಾವುದನ್ನೂ ನಂಬಬೇಡಿ” ಎಂದು ರಾಹುಲ್ ಹೇಳಿದರು.