ಗಿರೀಶ ಭಾರದ್ವಾಜ್ಗೆ ಗೌ.ಡಾಕ್ಟರೇಟ್
Team Udayavani, Mar 19, 2019, 1:15 AM IST
ಬೆಳಗಾವಿ: ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವ ಸೋಮವಾರ ಜ್ಞಾನ ಸಂಗಮ ಆವರಣದಲ್ಲಿ ನಡೆಯಿತು.
ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್ ನಿಧನದಿಂದ ದೇಶಾದ್ಯಂತ ಶೋಕಾಚರಣೆ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ರಾಜ್ಯಪಾಲ ವಜುಬಾಯಿ ವಾಲಾ ಅವರು ಘಟಿಕೋತ್ಸವಕ್ಕೆ ಬರಲಿಲ್ಲ. ವಿಟಿಯು ಕುಲಪತಿ ಪ್ರೊ| ಕರಿಸಿದ್ದಪ್ಪ ಘಟಿಕೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ನಂತರ ಬಿಇ ಹಾಗೂ ಬಿ.ಟೆಕ್ 64881, ಬಿ.ಆರ್ಕಿಟೆಕ್ಟರ್ 619, ಎಂಬಿಎ 4425, ಎಂಸಿಎ 1801, ಎಂ.ಟೆಕ್ 2859,ಎಂ.ಟೆಕ್ (ಪಾರ್ಟ್ ಟೈಮ್) 172, ಎಂ.ಆರ್ಕಿಟೆಕ್ಟರ್ 26, ಎಂ.ಎಸ್ಸಿ ಎಂಜಿನಿಯರಿಂಗ್ 33, ಡುಯಲ್ ಡಿಗ್ರಿ 6 ಹಾಗೂ 600 ಜನರಿಗೆ ಪಿ.ಎಚ್ಡಿ ಪದವಿ ಪ್ರದಾನ ಮಾಡಲಾಯಿತು. ತೂಗು ಸೇತುವೆ ನಿರ್ಮಾತೃ ಪದ್ಮಶ್ರೀ ಬಿ. ಗಿರೀಶ ಭಾರದ್ವಾಜ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಯಿತು.
ಚಿನ್ನದ ಹುಡಗಿಯರು: ದಾವಣಗೆರೆಯ ಜೈನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಬಿಇ ಸಿವಿಲ್ ಎಂಜಿನಿಯರಿಂಗ್ನಲ್ಲಿ ಮೊದಲ ರ್ಯಾಂಕ್ ಗಳಿಸಿದ ಸುಚಿತಾ ಎನ್. 9 ಚಿನ್ನದ ಪದಕ ಪಡೆದು ಬಂಗಾರದ ಹುಡುಗಿಯಾಗಿ ಮಿಂಚಿದರು. ದಾವಣಗೆರೆಯ ಬಾಪೂಜಿ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿಯ ಬಿಇ ಸಿವಿಲ್ ವಿಭಾಗದಲ್ಲಿ ರ್ಯಾಂಕ್ ಗಳಿಸಿದ ಮಧುಶ್ರೀ ಎಸ್.ಆರ್.ಹಾಗೂ ಮೈಸೂರು ವಿದ್ಯಾವರ್ಧಕ ಕಾಲೇಜ್ ಆಫ್ ಎಂಜಿನಿಯರಿಂಗ್ನ ಇ ಆ್ಯಂಡ್ ಸಿ ವಿಭಾಗದ ಮೇಘನಾ ಪ್ರಕಾಶ ತಲಾ ಆರು ಚಿನ್ನದ ಪದಕ, ಮೈಸೂರು ವಿದ್ಯಾವರ್ಧಕ ಕಾಲೇಜ್ ಆಫ್ ಎಂಜಿನಿಯರಿಂಗ್ನ ಇ ಆ್ಯಂಡ್ ಇ ವಿಭಾಗದ ಜೀವಿತಾ ಎಸ್. ಐದು ಚಿನ್ನದ ಪದಕ ಪಡೆದರು. ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ನ ಕಂಪ್ಯೂಟರ್ ಸೈನ್ಸ್ ವಿಭಾಗದ ಪವಿತ್ರಿ ಬಿ ಶೆಟ್ಟಿ ನಾಲ್ಕು ಚಿನ್ನ ಪಡೆದರು.