ಕರ್ಕಶ ಹಾರ್ನ್, ಬೈಕ್ ವ್ಹೀಲಿಂಗ್ ಮಾಡಿದ್ರೆ ಜೈಲು!
Team Udayavani, Jan 10, 2021, 9:33 AM IST
ಬೆಂಗಳೂರು: ಬೈಕ್ ವ್ಹೀಲಿಂಗ್ ಮಾಡುವವರು, ಕರ್ಕಶ ಶಬ್ದದ ಉಪಕರಣ ಅಳವಡಿಸಿಕೊಂಡು ಹಾರ್ನ್ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು, ಜೈಲಿಗೂ ಕಳುಹಿಸಲಾಗುತ್ತದೆ ಎಂದು ನಗರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ರಾಜಾಜಿನಗರ ಸಂಚಾರ ಠಾಣೆಯ ಹಿಂಭಾಗದಲ್ಲಿರುವ ಶ್ರೀ ಜಗದ್ಗುರು ಬಸವೇಶ್ವರ ಪ್ರೌಢಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆದ “ಸಂಚಾರ ಸಂಪರ್ಕ ದಿನ’ ಕಾರ್ಯಕ್ರಮದಲ್ಲಿ ಪೊಲೀಸರು ಈ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು ಕರ್ಕಶ ಶಬ್ದ ಮಾಡುವವರು ಹಾಗೂ ಬೈಕ್ ವ್ಹೀಲಿಂಗ್ ನಿಂದ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಕರ್ಕಶ ಹಾರ್ನ್ ಮಾಡುವವರ ವಿರುದ್ಧ ಕೈಗೊಳ್ಳುವ ಕಾನೂನು ಕ್ರಮಗಳು ಜತೆಗೆ ಜೈಲಿಗೆ ಕಳುಹಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಬಿಎಸ್ ವೈ ಗೆ ದಿಲ್ಲಿ ವರಿಷ್ಠರ ಬುಲಾವ್: ಸಚಿವ ಸ್ಥಾನಾಕಾಂಕ್ಷಿಗಳಿಗೆ ಸಂಕ್ರಾಂತಿ ಸಿಹಿ?
ಈ ವೇಳೆ ಮಾತನಾಡಿದ ಪೊಲೀಸ್ ಆಯುಕ್ತ ಕಮಲ್ ಪಂಥ್, ನಗರದಲ್ಲಿ ಕೆಲವು ಕಡೆ ಪೊಲೀಸ್ ಠಾಣೆಗಳ ಜಾಗ ಕಡಿಮೆಯಿದ್ದು ತೊಂದರೆ ಉಂಟಾಗುತ್ತಿದೆ. ಅಂತಹ ಕಡೆ ಪೊಲೀಸ್ ಠಾಣೆ, ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದ ಎಸಿಪಿ, ಕಚೇರಿ, ಡಿಸಿಪಿ ಕಚೇರಿಯನ್ನು ಒಂದೇ ಕಟ್ಟಡದಲ್ಲಿ ನಿರ್ಮಿಸಲಾಗುತ್ತಿದೆ. ಇದರಿಂದ ನಾಗರಿಕರಿಗೂ ಅನುಕೂಲ ಆಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಂಟಿ ಪೊಲೀಸ್ ಆಯುಕ್ತ ಡಾ. ಬಿ.ಆರ್ ರವಿಕಾಂತೇಗೌಡ, ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಡಾ. ಸೌಮ್ಯಲತಾ ಉಪಸ್ಥಿತರಿದ್ದರು.