ವಿಧಾನಸಭೆ ಚುನಾವಣೆ: ಮುಳಬಾಗಿಲುವಿನಿಂದ ಜೆಡಿಎಸ್ ಪ್ರಚಾರ ಆರಂಭವೇಕೆ?
ಜೆಡಿಎಸ್ ಕಾರ್ಯಾಗಾರಕ್ಕೆ ಶಾಸಕ ಜಿ.ಟಿ. ದೇವೇಗೌಡ ಗೈರು!
Team Udayavani, Oct 19, 2022, 3:07 PM IST
ಮೈಸೂರು : ಮುಂಬರುವ ವಿಧಾನಸಭೆ ಚುನಾವಣೆಗೆ ಕೋಲಾರದ ಮುಳಬಾಗಿಲುವಿನಿಂದ ಜೆಡಿಎಸ್ ಪ್ರಚಾರ ಆರಂಭಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬುಧವಾರ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ,”1994 ರಲ್ಲೂ ಮುಳಬಾಗಿಲುನಿಂದಲೇ ಹೆಚ್. ಡಿ. ದೇವೇಗೌಡರು ಪ್ರಚಾರ ಆರಂಭಿಸಿ ಯಶಸ್ಸು ಕಂಡಿದ್ದಾರೆ.ಹಾಗಾಗಿ ಮುಂಬರುವ ವಿಧಾನಸಭೆ ಚುನಾವಣೆಗೂ ಮುಳಬಾಗಿಲುನಿಂದಲೇ ಚುನಾವಣಾ ಪ್ರಚಾರ ಆರಂಭಿಸುತ್ತೇವೆ.ನಂತರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಚಾರ ನಡೆಸುತ್ತೇವೆ. ಮಿಷನ್ 123 ಜೆಡಿಎಸ್ ಗುರಿಯಾಗಿದೆ.ಆದರೆ ಕೆಲವರು ಜೆಡಿಎಸ್ ಗೆ 15 , 20, 30 ಸೀಟುಗಳು ಬರಬಹುದು ಎಂದು ಕೆಲವರು ಕುಹಕವಾಡುತ್ತಿದ್ದಾರೆ. ಅವರೆಲ್ಲರಿಗೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಲಿದ್ದೇವೆ” ಎಂದರು.
”ಚಾಮುಂಡೇಶ್ವರಿಯ ಸನ್ನಿಧಾನವಾಗಿರುವ ಮೈಸೂರಿನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಪಕ್ಷದ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ.ಜೆಡಿಎಸ್ ನ 126 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದೇವೆ. ರಾಜ್ಯದಲ್ಲಿ ಜೆಡಿಎಸ್ ಗೆ ಉತ್ತಮ ವಾತಾವರಣದ ಇದೆ. ಮಿಷನ್ 123 ಗುರಿ ಮುಟ್ಟುವ ವಿಶ್ವಾಸವಿದೆ. ಎಲ್ಲ 224 ಕ್ಷೇತ್ರದಲ್ಲೂ ಜೆಡಿಎಸ್ ಸ್ಪರ್ಧಿಸಲಿದೆ. ಸ್ಥಳೀಯ ಪಕ್ಷಗಳೊಂದಿಗೆ ಕೆಲ ಕ್ಷೇತ್ರಗಳಲ್ಲಿ ಹೊಂದಾಣಿಕೆಗೂ ಸಿದ್ದರಿದ್ದೇವೆ” ಎಂದರು.
ಜಿ.ಟಿ. ದೇವೇಗೌಡ ಗೈರು
ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜೆಡಿಎಸ್ ಕಾರ್ಯಾಗಾರಕ್ಕೆ ಸ್ಥಳೀಯ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಗೈರಾಗಿದ್ದು, ಈ ಕುರಿತು ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿ,”ಜಿ.ಟಿ. ದೇವೇಗೌಡರು ನನ್ನಿಂದ ಅನುಮತಿ ಪಡೆದೇ ಗೈರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಪಕ್ಷ ಹಮ್ಮಿಕೊಳ್ಳುವ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗಿಯಾಗುವುದಾಗಿ ಹೇಳಿದ್ದಾರೆ. ಜಿ. ಟಿ. ದೇವೇಗೌಡರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ.ಶಾಸಕರಾದ ಪುಟ್ಟರಾಜು, ಸಾ ರಾ ಮಹೇಶ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಜಿಟಿಡಿ ಜೊತೆ ಸಂಪರ್ಕದಲ್ಲಿದ್ದಾರೆ.ಬರುವ ಜನವರಿಯಲ್ಲಿ ಮೈಸೂರಿನಲ್ಲಿ ಹಮ್ಮಿಕೊಂಡಿರುವ ಪಂಚರತ್ನ ಕಾರ್ಯಕ್ರಮ ಜಿ. ಟಿ. ದೇವೇಗೌಡರ ನೇತೃತ್ವದಲ್ಲೇ ನಡೆಯಲಿದೆ” ಎಂದು ಸ್ಪಷ್ಟನೆ ನೀಡಿದರು.
ನಾಳೆ ಹೆಚ್. ಡಿ. ದೇವೇಗೌಡರು ಕಾರ್ಯಾಗಾರದಲ್ಲಿ ಭಾಗಿಯಾಗಲಿದ್ದಾರೆ. ಇಂದಿನ ಕಾರ್ಯಾಗಾರದಲ್ಲಿ ಚುನಾವಣೆಗೆ ಹೇಗೆ ಹೋಗಬೇಕು ಎಂಬುದರ ಕುರಿತು ಚರ್ಚೆ ಮಾಡುತ್ತೇವೆ. ಪಂಚರತ್ನ ಕಾರ್ಯಕ್ರಮದ ಬಗ್ಗೆಯೂ ನೀಲಿ ನಕ್ಷೆ ಸಿದ್ದವಾಗಿದೆ. ಉಚಿತ ವಿದ್ಯುತ್, ಶಿಕ್ಷಣ, ರೈತರ ಕಷ್ಟಗಳು, ಪ್ರತಿ ಕುಟುಂಬಕ್ಕೆ ಉದ್ಯೋಗ, ವಸತಿ ಸೇರಿದಂತೆ ಐದು ಕಾರ್ಯಕ್ರಮದ ಬಗ್ಗೆ ಪ್ರತಿ ಮನೆ ಮನೆಗೆ ತಿಳಿಸಬೇಕು. ನವೆಂಬರ್ 1ರಂದು ಕನ್ನಡ ರಾಜೋತ್ಸವ ದಿನದಂದು ರಥಯಾತ್ರೆಗೆ ಚಾಲನೆ ನೀಡುತ್ತೇವೆ. ಕೋಲಾರ ಮುಳಬಾಗಿಲಿನ ಅಂಜನೇಯ ಗಣಪತಿ ದೇವಾಲಯದಿಂದ ರಥ ಯಾತ್ರೆ ಹೊರಡಲಿದೆ ಎಂದರು.
ದೇವೇಗೌಡರ ಪ್ರಚಾರ ಶುರುವಾಗಿದ್ದು ಅಲ್ಲಿಂದಲೇ. ಪ್ರತಿ ದಿನ 6 ಕಾರ್ನರ್ ಮೀಟಿಂಗ್ ಹಾಗೂ ಮೂರು ಸಾರ್ವಜನಿಕ ಸಭೆ ನಡೆಯಲಿವೆ. ಜೊತೆಗೆ ಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವೂ ನಡೆಯಲಿದೆ ಎಂದು ತಿಳಿಸಿದರು.
ಸಿಎಂಗೆ ಧಮ್ ಇದ್ರೆ ರಾಹುಲ್ ಗಾಂಧಿಗೆ ಏಕೆ ಕಡತಗಳನ್ನು ಕಳುಹಿಸಿತ್ತೀರಿ, ನೀವೇ ಅದನ್ನು ಕ್ಯಾಬಿನೆಟ್ ನಲ್ಲಿ ಇಟ್ಟು ತನಿಖೆ ಮಾಡಿಸಿ.ಅದನ್ನು ರಾಹುಲ್ ಗಾಂಧಿಗೆ ಕಳುಹಿಸಿ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಬೆಂಗಳೂರು ನಗರದ ಬಗ್ಗೆ ಕಳೆದ ಒಂದು ವರ್ಷದಲ್ಲಿ ನ್ಯಾಯಾಲಯದಲ್ಲೂ ಛೀಮಾರಿ ಹಾಕಿದ್ದಾರೆ.ಆದರೂ ಸರ್ಕಾರಕ್ಕೆ ಪಾಪ ಪ್ರಜ್ಞೆ ಇಲ್ಲ. ಮಂತ್ರಿಗಳು, ಜನಪ್ರತಿನಿಧಿಗಳು ಸರಿಯಾಗಿ ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.ಸಿಎಂ ಇನ್ನೂ ಮಾಹಿತಿ ಪಡೆಯುತ್ತೇವೆ ಎನ್ನುತ್ತಾರೆ. ಇಂತಹ ಸರ್ಕಾರ ದೇಶದಲ್ಲಿ ಬಂದಿಲ್ಲ. ಪಂಚರತ್ನ ಯೋಜನೆ ಮೂಲಕ ಯಾವುದೇ ಮತಗಳನ್ನು ಸೆಳೆಯುವ ಪ್ರಯತ್ನ ಇಲ್ಲ. ವೋಟ್ ಪಡೆಯುವ ಉದ್ದೇಶ, ಅಧಿಕಾರ ಪಡೆಯುವ, ಸಿಎಂ ಆಗುವ ಉದ್ದೇಶ ನನಗಿಲ್ಲ.ಯಾವುದೇ ಸಮುದಾಯದ ಮತಗಳನ್ನು ಪಡೆಯಲು ಈ ಕಾರ್ಯಕ್ರಮ ನಡೆಸುತ್ತಿಲ್ಲ. ಸರ್ವಜನಾಂಗದ ಶಾಂತಿಯ ತೋಟ ಆಗಬೇಕಾದರೆ ವೋಟ್ ಕೊಡಿ ಎಂದು ಕೇಳುತ್ತೇವೆ ಎಂದರು.
‘ರಾಹುಲ್ ಗಾಂಧಿ ಭಾರತ್ ಜೋಡೋ ಸಂದೇಶ ಕೊಟ್ಟರೋ, ಸಿದ್ದು-ಡಿಕೆಶಿ ಜೋಡೋ ಮಾಡುವ ಸಂದೇಶ ಕೊಟ್ಟರೋ? ಅವರು ಬಂದಿದ್ದು ಸಿದ್ದು-ಡಿಕೆಶಿ ಜೋಡೋ ಮಾಡುವುದಕ್ಕೆ, ಆದರೆ ಅದು ನಡೆಯುವುದಿಲ್ಲ’ ಎಂದರು.
ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ
ಮೀಸಲಾತಿ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯಿಸಿ, ”ಅಂಬೇಡ್ಕರ್ ಅವರ ಅವಧಿಗೂ ಇಂದಿಗೂ ಸಾಕಷ್ಟು ಬದಲಾವಣೆ ಆಗಿದೆ.ಮೀಸಲಾತಿ ಬಗ್ಗೆ ಹಲವು ಸ್ವಾಮೀಜಿಗಳನ್ನು ರಾಜಕಾರಣಿಗಳೇ ಬೀದಿಗಿಳಿಸಿದ್ದಾರೆ.ಮೀಸಲಾತಿ ಮೂಲಕ ಅಸಮಾನತೆ ದೂರ ಮಾಡಲು ಆಗುವುದಿಲ್ಲ, ಅಂತಿಮವಾಗಿ ಇದು ಎಲ್ಲಿಗೆ ಬಂದು ನಿಲ್ಲುತ್ತದೆಯೋ ಗೊತ್ತಿಲ್ಲ.ನನ್ನ ಪ್ರಕಾರ ಮೀಸಲಾತಿ ಮೂಲಕ ಜನರ ಉದ್ದಾರ ಆಗುತ್ತದೆ ಎಂಬ ನಂಬಿಕೆ ನನಗಿಲ್ಲ. ಪ್ರತಿ ಕುಟುಂಬ ಸ್ವಾಭಿಮಾನದಿಂದ ಬದುಕುವ, ಆರ್ಥಿಕ, ಶೈಕ್ಷಣಿಕ ಶಕ್ತಿ ನೀಡುವುದು ನಮ್ಮ ಗುರಿ. ಈ ಐದು ಕಾರ್ಯಕ್ರಮ ಅನುಷ್ಠಾನಕ್ಕೆ ತರದಿದ್ದರೆ ನನ್ನ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂಬುದು, ನನ್ನ ಸವಾಲು. ನಾಡಿನ ಜನತೆ 123 ಸ್ಥಾನ ನೀಡಿದರೆ, ಭ್ರಷ್ಟಾಚಾರದ ಬಗ್ಗೆ ಅಂದು ಮಾತಾಡುತ್ತೇನೆ” ಎಂದರು.