ಭಾಷಾ ದ್ವೇಷ ತಡೆಯುವುದು ಅಗತ್ಯ: ವೈದೇಹಿ
ನೃಪತುಂಗ ಪ್ರಶಸ್ತಿ ಪ್ರದಾನ
Team Udayavani, Mar 30, 2023, 5:00 AM IST
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಭಾಷೆ ಎಂಬುದು ಸೌಹಾರ್ದದ ಮಾರ್ಗವಾಗುವ ಬದಲು ದಹನದ ಉರುವಲಾಗುತ್ತಿದೆ. ಅದನ್ನು ತಡೆಯುವ ಹೊಣೆ ನಮ್ಮೆಲ್ಲರದ್ದಾಗಿದೆ ಎಂದು ಹಿರಿಯ ಸಾಹಿತಿ ಡಾ| ವೈದೇಹಿ ಅಭಿಪ್ರಾಯಪಟ್ಟರು.
ಬುಧವಾರ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಹಯೋಗದಲ್ಲಿ ನೀಡಲಾದ ನೃಪತುಂಗ ಸಾಹಿತ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ದೇಶ ಕೂಡು ಕುಟುಂಬವಿದ್ದಂತೆ. ಆದರೆ ಅದನ್ನು ಈ ಹಿಂದೆಯೇ ಒಡೆಯಲಾಗಿದೆ. ಒಮ್ಮೆ ಹೊಡೆದು ಹೋದ ಮೇಲೆ ಮತ್ತೆ ಒಂದಾಗುವುದು ಸುಲಭವಲ್ಲ. ಹಿಂದೆ ಉಂಟಾದ ಒಡಕು ಮತ್ತೆ ಕೂಡುವಂತಾಗಿಲ್ಲ. ಹೊತ್ತಿದ ಜ್ವಾಲೆ ಉರಿಯುತ್ತಲೇ ಇದೆ. ಅದನ್ನು ಆರಿಸುವ ಕೆಲಸ ಮಾಡದಿದ್ದರೆ ಮುಂದೆ ದೊಡ್ಡ ಅನಾಹುತವಾಗುತ್ತದೆ ಎಂದರು.
ಭಾಷೆ ಎಂಬುದು ಸೌಹಾರ್ದದ ಸೇತುವೆಯಾಗಬೇಕು. ಈ ಸೇತುವೆಯನ್ನು ಕಟ್ಟುವ ಕೆಲಸದಲ್ಲಿ ಲೇಖಕರ ಪಾತ್ರ ಮಹತ್ತರವಾಗಿದೆ. ಅದರ ಜತೆಗೆ ಕಲಾವಿದರು, ಮಾಧ್ಯಮದವರು ಸಹಿತ ಸಮಾಜದ ಪ್ರತಿಯೊಬ್ಬರೂ ಅದಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಮಹಿಳೆಯರಿಗೆ ಮರ್ಮಾಂತಿಕ ನೋವುಗಳು ಒಂದೆಡೆಯಾದರೆ, ತಾನು ಮಹಿಳೆ ಎಂದೇ ಮುಂದಿಟ್ಟುಕೊಂಡು ಸೃಷ್ಟಿಸುವ ಸಮಸ್ಯೆಗಳು ಮತ್ತೂಂದೆಡೆ. ನಾವು ಇವೆಲ್ಲದರ ಬಗೆಗೂ ಚಿಂತಿಸಬೇಕಿದೆ ಎಂದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ| ಚಂದ್ರಶೇಖರ ಕಂಬಾರ ಮಾತನಾಡಿ, ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದರೆ ಭಾಷೆಯ ಜತೆಗೆ ಶಿಕ್ಷಣ ಪಡೆದ ವ್ಯಕ್ತಿ, ಆತನ ವ್ಯಕ್ತಿತ್ವವೂ ಉಳಿಯುತ್ತದೆ. ಇಂಗ್ಲಿಷಿನ ಬೆರಗಿನಲ್ಲಿ ನಾವೆಲ್ಲ ಮೈ ಮರೆಯುತ್ತಿದ್ದೇವೆ. ಕನ್ನಡವನ್ನೇ ಮರೆಯುವ ಸ್ಥಿತಿಗೆ ತಲುಪುತ್ತಿದ್ದೇವೆ. ನಮ್ಮ ಸೃಜನಶೀಲತೆ ಉಳಿಯುವುದು ಮಾತೃಭಾಷೆಯಲ್ಲಿ ಮಾತ್ರ ಎಂಬುದನ್ನು ಎಲ್ಲರೂ ತಿಳಿಯಬೇಕು ಎಂದು ಹೇಳಿದರು.
ಹಿರಿಯ ಕವಿ ಡಾ| ಎಚ್.ಎಸ್. ವೆಂಕಟೇಶಮೂರ್ತಿ, ಕಸಾಪ ಅಧ್ಯಕ್ಷ ನಾಡೋಜ ಡಾ| ಮಹೇಶ ಜೋಷಿ, ಹಿರಿಯ ಕವಯಿತ್ರಿ ಸವಿತಾ ನಾಗಭೂಷಣ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ವ.ಚ. ಚನ್ನೇಗೌಡ ಇತರರಿದ್ದರು.
ಮಯೂರ ವರ್ಮ ಪ್ರಶಸ್ತಿ ಪುರಸ್ಕೃತರು
ಡಾ| ಬೇಲೂರು ರಘುನಂದನ, ವಿದ್ಯಾರಶ್ಮಿ ಪೆಲತ್ತಡ್ಕ, ಡಾ. ಸತ್ಯಮಂಗಲ ಮಹಾದೇವ, ಹನುಮಂತ ಸೋಮನಕಟ್ಟಿ, ಗುಡ್ಡಪ್ಪ ಬೆಟಗೇರಿ ಅವರಿಗೆ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಮೊತ್ತ 7 ಲಕ್ಷ ರೂ.
ಬಿಎಂಟಿಸಿ ಸಂಸ್ಥೆಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿಯ ಆಸಕ್ತಿಯ ಫಲವಾಗಿ 1.5 ಕೋಟಿ ರೂ.ಗಳನ್ನು ದತ್ತಿ ಇಡಲಾಗಿದೆ. ಕನ್ನಡದಲ್ಲಿ ಮೌಲಿಕ ಸಾಹಿತ್ಯ ರಚಿಸಿರುವ ಹಿರಿಯ ಸಾಹಿತಿಯೊಬ್ಬರಿಗೆ ಪ್ರತಿ ವರ್ಷ 7 ಲಕ್ಷ ರೂ. ಇರುವ ನೃಪತುಂಗ ಸಾಹಿತ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಸ್ತ್ರೀವಾದಕ್ಕೆ ಹೊಸ ಆಯಾಮ ನೀಡಿದ ವೈದೇಹಿ
ಬೆಂಗಳೂರು: ಸ್ತ್ರೀವಾದಕ್ಕೆ ಹೊಸ ಆಯಾಮ ನೀಡಿದವರು ಲೇಖಕಿ ವೈದೇಹಿ. ಅವರು “ಅಕ್ಕು’ ಪಾತ್ರದ ಮೂಲಕ ಸ್ತ್ರೀಯ ತಾಳ್ಮೆ, ಹುದುಗಿದ ಶಕ್ತಿ ಅನಾವರಣಗೊಳಿಸಿದ್ದಾರೆ ಎಂದು ಹಿರಿಯ ವಿಮರ್ಶಕ ಪ್ರೊ| ಸಿ.ಎನ್.ರಾಮಚಂದ್ರನ್ ಹೇಳಿದರು.
ಕರ್ನಾಟಕ ಲೇಖಕಿಯರ ಸಂಘ ಹಾಗೂ ವಸಂತ ಪ್ರಕಾಶನ ಸಹಯೋಗದಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಲೇಖಕಿ ವೈದೇಹಿ ಅವರಿಗೆ ಅಭಿನಂದನೆ ಹಾಗೂ ಲಲಿತಮ್ಮ ಚಂದ್ರಶೇಖರ್ ಅವರ “ನೆನಪಿನ ಉಗ್ರಾಣ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
MUST WATCH
ಹೊಸ ಸೇರ್ಪಡೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!