B. K. Hariprasad ”ಅಹಿಂದ” ಅಲ್ಲ.. ಸಿದ್ದರಾಮಯ್ಯ ವಿರುದ್ಧ ಪರೋಕ್ಷ ಆಕ್ರೋಶ
ನಾನು 5 ರಾಜ್ಯಗಳಲ್ಲಿ ಕ್ಯಾಬಿನೆಟ್ ರಚನೆ ಮಾಡಿದವನು..ಸ್ವಂತ ಮನೆಯಲ್ಲಿ ಇರುವವನು...!
Team Udayavani, May 27, 2023, 7:20 PM IST
ಬೆಂಗಳೂರು: ”ನಾನು ಸ್ವಂತ ಮನೆಯಲ್ಲಿ ಇರುವವನು, ಬಾಡಿಗೆ ಮನೆ ತೆಗೆದುಕೊಂಡು ಬಂದವನಲ್ಲ.ಈ ಮನೆ ಬಿಟ್ಟು ಹೋಗಲು ಅಥವಾ ಧ್ವಂಸ ಮಾಡಲು. ರಾಜೀನಾಮೆ ಗೀಜಿನಾಮೆ ಪ್ರಶ್ನೆ ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಓಡಾಡುತ್ತಿದೆ.ಅದಕ್ಕೆ ನಾನು ಉತ್ತರ ಕೊಡಲು ಸಾಧ್ಯವಿಲ್ಲ” ಎಂದು ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಶನಿವಾರ ಹೇಳಿಕೆ ನೀಡಿದ್ದಾರೆ.
ಸಚಿವ ಸ್ಥಾನ ಕೈತಪ್ಪಿದ್ದರಿಂದ ತೀವ್ರ ಅಸಮಾಧಾನಗೊಂಡಿರುವ ಹಿರಿಯ ಕಾಂಗ್ರೆಸ್ ನಾಯಕ ಸುದ್ದಿಗಾರರೊಂದಿಗೆ ಮಾತನಾಡಿ,” ನನ್ನ ಸಾಮಾಜಿಕ ನ್ಯಾಯಕ್ಕೂ, ಅಹಿಂದಕ್ಕೂ ಬಹಳ ವ್ಯತ್ಯಾಸವಿದೆ. ನಾನು ಅಹಿಂದ ಎಂದು ಯೋಚನೆ ಮಾಡುವವನಲ್ಲ.ನಾನು ಯೋಚನೆ ಮಾಡತಕ್ಕಂತಹದ್ದು ಪ್ರತಿಯೊಬ್ಬರಿಗೂ ಸಹ ಸಮಾನವಾದ ಅವಕಾಶಗಳು, ಸಮಾನವಾದ ಹಕ್ಕು. ಕಾಂಗ್ರೆಸ್ ಪಕ್ಷದ ಸಿದ್ದಾಂತ ಏನಿದೆ, ಸರ್ವ ಧರ್ಮ ಸಮನ್ವಯ ಸಮಭಾವ ಅದರಲ್ಲಿ ನಂಬಿಕೆ ಇಟ್ಟುಕೊಂಡವನು. ಯಾವುದೇ ಬೇಧ ಭಾವ ಇಲ್ಲ. ದೊಡ್ಡವರು-ಸಣ್ಣವರು ಇಲ್ಲ, ಎಲ್ಲರೂ ಸಹ ಒಂದೆ” ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರ ಹಾಕಿದರು.
ನಾನು5 ರಾಜ್ಯಗಳಲ್ಲಿ ಕ್ಯಾಬಿನೆಟ್ ರಚಿಸಿ ಬಂದವನು. ಅದನ್ನು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಿದ್ದು. ಈಗಿರುವ ಮಂತ್ರಿಗಳು 500 ವರ್ಷ ಇರಬಹುದು. ಬಿಜೆಪಿಯವರು ಆ ಕನಸು ಕಂಡಿದ್ದರು, ನಾವೂ ಆ ಕನಸು ಕಾಣುವುದರಲ್ಲಿ ತಪ್ಪಿಲ್ಲ ಎಂದು ವ್ಯಂಗ್ಯವಾಡಿದರು.
ಡಿ.ಕೆ.ಶಿವಕುಮಾರ್ ಅವರನ್ನು ಡಿಸಿಎಂ ಮಾಡಿದ್ದೇವೆಲ್ಲ. ಸಿಎಂ ಆಗಲು ಇನ್ನು ಒಂದು ಸ್ಟೆಪ್ ಮುಂದಕ್ಕೆ ಹೋಗಬೇಕು. ಸಮಯ ಬಂದಾಗ ಮಾತನಾಡುತ್ತೇನೆ. ವಾಟ್ಸಾಪ್ ಯೂನಿವರ್ಸಿಟಿ, ಟೆಲಿವಿಷನ್ ಯೂನಿವರ್ಸಿಟಿ ಚೆನ್ನಾಗಿದ್ದರೆ ಸರಕಾರದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂದರು.
ಅಧಿಕಾರ ಹಂಚಿಕೆ ವಿಚಾರ ಗೊತ್ತಿರುವುದು ಏಳು ಜನರಿಗೆ ಮಾತ್ರ ಗೊತ್ತಿರುವುದು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಣ್ ದೀಪ್ ಸಿಂಗ್ ಸುರ್ಜೆವಾಲಾ, ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರ ಗೊತ್ತಿದೆ . ಎಂಟನೆಯವನು ಹೇಳಿದರೆ ಅದು ಸುಳ್ಳು ಅಧಿಕೃತವಲ್ಲ, ಏಳು ಜನರ ಮಧ್ಯೆ ಮಾತ್ರ ಚರ್ಚೆ ನಡೆದಿದೆ. ಉಳಿದವರು ಹೇಳುತ್ತಿರುವುದು ಯಾರನ್ನಾದರೂ ಸಂತೋಷ ಪಡಿಸಲು ಮಾತ್ರ ಎಂದರು.
ಬಿಜೆಪಿಯವರು 36% ಮತದಲ್ಲೇ ಉಳಿದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ ಮತ್ತು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡು ಒಕ್ಕಲಿಗ ಸಮುದಾಯದ ಮತ ಪ್ರಮಾಣ ಕಾಂಗ್ರೆಸ್ ಗೆ ಬಂದಿದೆ ಎಂದರು.
ಗ್ಯಾರಂಟಿ ಜಾರಿ ಮಾಡಲು ಎಪಿಎಂಸಿ ಮಾರುಕಟ್ಟೆ ಅಲ್ಲ, ಕ್ಯಾಬಿನೆಟ್ ನಲ್ಲಿ ಚರ್ಚೆಯಾಗಿ ಅನುಷ್ಠಾನಕ್ಕೆ ತರಲು ಸಮಯ ಹಿಡಿಯುತ್ತದೆ ಎಂದರು.
ನಾವು ಲೋಕಸಭಾ ಚುನಾವಣೆಯಲ್ಲಿ ನಮ್ಮ ಗುರಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡುವುದು ನಮ್ಮ ಗುರಿಯಾಗಿದೆ. ಹೊಸ ಸಂಸದ್ ಭವನದ ಉದ್ಘಾಟನೆಯ ವೇಳೆ ಸೆಂಗೋಲ್ ಅನ್ನುವುದನ್ನು ತಂದಿದ್ದಾರೆ. ಅದು ಸರ್ವಾಧಿಕಾರವನ್ನು ಸೂಚಿಸುತ್ತದೆ ಎಂದರು.