Bengaluru: ಸಚಿವ ರಾಮಲಿಂಗಾ ರೆಡ್ಡಿ ಸಂಧಾನ; ರಸ್ತೆಗಿಳಿದ ಖಾಸಗಿ ಸಾರಿಗೆ ವಾಹನಗಳು
ರ್ಯಾಪಿಡೋ ಬೈಕ್ ಸವಾರನಿಗೆ ಧರ್ಮದೇಟು
Team Udayavani, Sep 11, 2023, 5:05 PM IST
ಬೆಂಗಳೂರು: ಸರ್ಕಾರದ ಶಕ್ತಿ ಯೋಜನೆಯಿಂದಾಗಿ ನಷ್ಟಕ್ಕೆ ಸಿಲುಕಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಸೋಮವಾರ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಭೇಟಿ ನೀಡಿ ಸಂಧಾನ ಮಾತುಕತೆ ನಡೆಸಿದ್ದಾರೆ.
ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಸರಕಾರದ ಪರವಾಗಿ ರಾಮಲಿಂಗಾ ರೆಡ್ಡಿ ಅವರು ಭರವಸೆ ನೀಡಿದ ಹಿನ್ನಲೆಯಲ್ಲಿ ನಡೆಸುತ್ತಿದ್ದ ಪ್ರತಿಭಟನೆ ಮತ್ತು ಬಂದ್ ಕರೆಯನ್ನು ಸಂಜೆ ಹಿಂತೆಗೆದುಕೊಳ್ಳಲಾಗಿದೆ. ಸೋಮವಾರ ಮಧ್ಯರಾತ್ರಿಯವರೆಗೂ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಬೆಂಗಳೂರು ಬಂದ್ ಘೋಷಿಸಿ, ವಾಹನಗಳನ್ನು ರಸ್ತೆಗಿಳಿಸದಿರಲು ನಿರ್ಧರಿಸಿತ್ತು. ಸಚಿವರ ಮಾತುಕತೆಯ ಬಳಿಕ ಪ್ರತಿಭಟನೆಯನ್ನ ಹಿಂಪಡೆದುಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ತಿಳಿಸಿದ್ದಾರೆ.
ನಷ್ಟಕ್ಕೆ ಸಿಲುಕಿರುವ ರಾಜ್ಯ ಖಾಸಗಿ ಸಾರಿಗೆ ಚಾಲಕರಿಗೆ ಮಾಸಿಕ 10 ಸಾವಿರ ರೂ. ಪರಿಹಾರ ಧನ ಸೇರಿ 32 ಬೇಡಿಕೆಗಳನ್ನು ಈಡೇರಿಸುವಂತೆ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಬೆನ್ನಲ್ಲೇ ಆಟೋಗಳು, ಟ್ಯಾಕ್ಸಿ ಗಳು ರಸ್ತೆಗಿಳಿದು ಸೇವೆ ನೀಡಲು ಆರಂಭಿಸಿವೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೂ ಸೇವೆ ಸಂಜೆಯಿಂದ ಪುನರಾರಂಭವಾಗಿದೆ.
ಬಂದ್’ಗೆ ಕರೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಿಎಂಟಿಸಿ ಬಸ್ಗಳು ಕಾರ್ಯಾಚರಣೆ ಮಾಡಿವೆ.
ರ್ಯಾಪಿಡೋ ಬೈಕ್ ಸವಾರನಿಗೆ ಧರ್ಮದೇಟು
ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಪ್ರಯಾಣಿಕನನ್ನು ಕೂರಿಸಿಕೊಂಡು ಸಾಗುತ್ತಿದ್ದ ರ್ಯಾಪಿಡೋ ಬೈಕ್ ಸವಾರನನ್ನು ತಡೆದು ಪ್ರತಿಭಟನಾಕಾರರು ಥಳಿಸಿ ಆಕ್ರೋಶ ಹೊರಹಾಕಿದ್ದಾರೆ.
ಮುಷ್ಕರದ ಕರೆಯನ್ನು ಧಿಕ್ಕರಿಸಿದ ಆಟೋ, ಟ್ಯಾಕ್ಸಿ ಚಾಲಕರನ್ನು ಪ್ರತಿಭಟನಾಕಾರರು ತಡೆದು ಹಲ್ಲೆ ನಡೆಸಿದ ನಿದರ್ಶನಗಳು ಬೆಂಗಳೂರಿನಲ್ಲಿ ವರದಿಯಾಗಿವೆ. ಕೆಲವೆಡೆ ವಾಹನಗಳಿಗೆ ಹಾನಿಯಾದ ಘಟನೆಗಳು, ಚಕ್ರದ ಗಾಳಿ ತೆಗೆದ ಘಟನೆಗಳು ನಡೆದಿವೆ.