Real Star ಉಪ್ಪಿಗೆ ಬಿಗ್ ರಿಲೀಫ್; ಎಫ್ಐಆರ್ ಗೆ ಹೈಕೋರ್ಟ್ ತಡೆ
ವಿವಾದಕ್ಕೆ ಗುರಿಯಾಗಿದ್ದ ಹೇಳಿಕೆ
Team Udayavani, Aug 14, 2023, 3:36 PM IST
ಬೆಂಗಳೂರು:ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಹೈಕೋರ್ಟ್ ಸೋಮವಾರ ರಿಲೀಫ್ ನೀಡಿದ್ದು, ವಿವಾದಕ್ಕೆ ಗುರಿಯಾಗಿದ್ದ ಹೇಳಿಕೆ ಕುರಿತು ದಾಖಲಾಗಿದ್ದ ಎಫ್ ಐಆರ್ ಗೆ ತಡೆ ನೀಡಿದೆ.
‘ಗಾದೆ ಮಾತು ಉಲ್ಲೇಖಿಸಿ ಹೇಳಿಕೆ ನೀಡಿದ್ದು ಎಸ್ ಸಿ, ಎಸ್ ಟಿ ದೌರ್ಜನ್ಯ ತಡೆ ಕಾಯಿದೆ ಇದಕ್ಕೆ ಅನ್ವಯವಾಗುವುದಿಲ್ಲ.ಆ ಒಂದೇ ಮಾತಿಗೆ ಇಷ್ಟೊಂದು ಎಫ್ ಐಆರ್ ಯಾಕೆ ‘ ಎಂದು ನ್ಯಾಯಮೂರ್ತಿ ಹೇಮಂತ್ ಚಂದನ್ ಎಫ್ ಐಆರ್ ಗೆ ತಡೆ ನೀಡಿದ್ದಾರೆ. ಉಪೇಂದ್ರ ಪರ ವಕೀಲ ಉದಯ್ ಹೊಳ್ಳ ವಾದ ಮಂಡಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಮಾತನಾಡುವ ವೇಳೆ ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಪದ ಬಳಕೆ ಮಾಡಿದ ಆರೋಪದಡಿ ನಟ, ನಿರ್ದೇಶಕ ಉಪೇಂದ್ರ ವಿರುದ್ಧ “ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ’ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಕರ್ನಾಟಕ ರಣಧೀರ ಪಡೆ ರಾಜ್ಯಾಧ್ಯಕ್ಷ ಬೈರಪ್ಪ ಹರೀಶ್ ಕುಮಾರ್ ನೀಡಿದ ದೂರಿನ ಅನ್ವಯ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲೂ ಎಫ್ ಐಆರ್ ದಾಖಲಿಸಲಾಗಿತ್ತು.
ಆಕ್ಷೇಪಾರ್ಹ ಪದ ಬಳಕೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ನಟ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿದ್ದರು.