ವಿಮಾನಕ್ಕೆ ಬಾಂಬ್ ಬೆದರಿಕೆ: ಪ್ರಯಾಣಿಕನಿಂದಲೇ ಕೃತ್ಯ
Team Udayavani, Aug 9, 2022, 11:00 PM IST
ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಇಂಡಿಗೋ ವಿಮಾನದಲ್ಲಿ ಶೌಚಾಲಯದಲ್ಲಿದ್ದ ಟಿಶ್ಯೂ ಪೇಪರ್ ಮೇಲೆ ಬಾಂಬ್ ಬೆದರಿಕೆ ಪತ್ರ ಪತ್ತೆಯಾಗಿದ್ದು, ವಿಮಾನ ನಿಲ್ದಾಣದಲ್ಲಿ ಕೆಲಕಾಲ ಆಂತಕದ ವಾತಾವರಣ ನಿರ್ಮಾಣವಾಗಿತ್ತು.
ರವಿವಾರ ರಾತ್ರಿ 9.26ಕ್ಕೆ ವಿಮಾನ ನಿಲ್ದಾಣಕ್ಕೆ ಬಂದಿದ್ದ ವಿಮಾನದಲ್ಲಿ ಬೆದರಿಕೆ ಸಂದೇಶ ಕಂಡು ವಿಮಾನದ ಸಿಬಂದಿ ಕೂಡಲೇ ಪೈಲೆಟ್ ಗಮನಕ್ಕೆ ತಂದಿದ್ದು, ಪೈಲೆಟ್ ಸಹಾಯವಾಣಿ ಮೂಲಕ ದೂರು ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಸಿಐಎಸ್ಎಫ್ ಸಿಬಂದಿ ವಿಮಾನ ಸಂಪೂರ್ಣವಾಗಿ ತಪಾಸಣೆ ನಡೆಸಿದ್ದಾರೆ. ಬಳಿಕ ಸುಳ್ಳು ಸಂದೇಶ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ 175 ಪ್ರಯಾಣಿಕರನ್ನು ಹೊತ್ತ ತಂದಿದ್ದ ಇಂಡಿಗೋ ವಿಮಾನದ ಹಿಂಭಾಗದ ಶೌಚಾಲಯದಲ್ಲಿ ಟಿಶ್ಯೂ ಪೇಪರ್ ಬಿದ್ದಿದ್ದನ್ನು ಕ್ಯಾಬಿನ್ ಸಿಬಂದಿ ಗಮನಿಸಿದ್ದಾರೆ. ಅದರಲ್ಲಿ ಲ್ಯಾಂಡ್ ನಾ ಕರ್ನಾ, ಇಸ್ ಫ್ಲೈಟ್ ಮೆ ಬಾಂಬ್ ಹೈ (ವಿಮಾನವನ್ನು ಇಳಿಸಬೇಡಿ, ಇದರಲ್ಲಿ ಬಾಂಬ್ ಇದೆ) ಎಂದು ಹಿಂದಿಯಲ್ಲಿ ಉಲ್ಲೇಖಿಸಲಾಗಿತ್ತು. ಅಷ್ಟರಲ್ಲಿ ವಿಮಾನ ಲ್ಯಾಂಡ್ ಮಾಡಲಾಗಿತ್ತು. ಪ್ರಯಾಣಿಕರೇ ಕೃತ್ಯವೆಸಗಿದ್ದು, ಶಂಕಿತ ಪ್ರಯಾಣಿಕರ ಕೈಬರಹದ ತಪಾಸಣೆ, ತನಿಖೆ ಮುದುವರಿದಿದೆ.