ಸಿಎಎ ವಿರೋಧಿ ಹೋರಾಟ ಒಳ್ಳೆಯ ಬೆಳವಣಿಗೆ: ಕಟೀಲ್
Team Udayavani, Mar 2, 2020, 3:04 AM IST
ಹಾಸನ: ದೇಶದಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ (ಸಿಎಎ) ವಿರೋಧಿಸಿ ಪ್ರತಿಭಟನೆಗಳನ್ನು ನಡೆಸುತ್ತಿರುವುದು ಒಂದು ರೀತಿಯಲ್ಲಿ ಒಳ್ಳೆಯದೇ. ಏಕೆಂದರೆ, ದೇಶ ವಿರೋಧಿಗಳು ಕೂಡ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಬಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದಲ್ಲಿ ನಡೆದ ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಿಎಎಯನ್ನು ಜಾರಿಗೆ ತರಬೇಕು ಎಂದು ಇಂದಿರಾಗಾಂಧಿ ಕಾಲದಲ್ಲೇ ಹೇಳುತ್ತಿದ್ದರು. ಆದರೆ, ಕಾಂಗ್ರೆಸ್ ಅವರ ಚಿಂತನೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತಕ್ಕೆ ಬಂದ ಸಂದರ್ಭದಲ್ಲಿ ದೆಹಲಿಯಲ್ಲಿ ಗಲಭೆ ಸೃಷ್ಟಿಸಲಾಯಿತು. ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸಿದರು. ಇದೇ ವೇಳೆ, ಜೆಡಿಎಸ್ ವಿರುದ್ಧ ಹರಿಹಾಯ್ದ ಅವರು, ರಾಜಕೀಯ ಎಂಬ ಕಾಲೆಳೆಯುವ ಕಬಡ್ಡಿಯಾಟದಲ್ಲಿ ಹಾಸನ ಜಿಲ್ಲೆಯಲ್ಲಿ ಅಪ್ಪ ಪ್ರಧಾನಿಯಾದರೆ, ಮಗ ಮಂತ್ರಿಯಾಗಬೇಕು. ಸೊಸೆ ಶಾಸಕಿಯಾಗಬೇಕು.
ಮೊಮ್ಮಕ್ಕಳು ಸಂಸದರಾಗಬೇಕೆಂಬ ಧೋರಣೆಯಿದೆ. ಎಚ್.ಡಿ.ಕುಮಾರ ಸ್ವಾಮಿ ಅವರು ತಮ್ಮ ಅಧಿಕಾರಾವಧಿಯಲ್ಲಿ ತಾಜ್ ಹೋಟೆಲ್ನಲ್ಲೇ ಹೆಚ್ಚಿನ ಕಾಲ ಕಳೆದರು. ಇದರಿಂದ ಬೇಸತ್ತ ಶಾಸಕರು ರಾಜೀನಾಮೆ ಕೊಟ್ಟು ಹೊರ ಬಂದು, ಬಿಜೆಪಿ ಅಧಿಕಾರ ನಡೆಸಲು ಸಹಕಾರಿಯಾದರು ಎಂದರು.