ಡಿಕೆಶಿ ಸುತ್ತ ಸಿಬಿಐ: ಶಿವಕುಮಾರ್-ಸುರೇಶ್ ಆಪ್ತರ ಮನೆಗಳ ಮೇಲೆ ದಾಳಿ
Team Udayavani, Jun 1, 2018, 6:00 AM IST
ಬೆಂಗಳೂರು: ಕಾಂಗ್ರೆಸ್ನ ಪ್ರಭಾವಿ ಹಾಗೂ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ಆಪ್ತರ ಮೇಲೆ ಸಿಬಿಐ ದಾಳಿ ನಡೆದಿದೆ. ನೋಟು ಅಮಾನ್ಯಿಕರಣ ಪ್ರಕರಣದಲ್ಲಿ ಡಿ.ಕೆ.ಸುರೇಶ್ರ ಮಾಜಿ ಆಪ್ತ ಸಹಾಯಕ ಪದ್ಮನಾಭಯ್ಯ, ಉಪ ತಹಸೀಲ್ದಾರ್ ಶಿವಾನಂದ್, ಗುಮಾಸ್ತ ನಂಜಪ್ಪ ಅವರ ನಿವಾಸಗಳ ಮೇಲೆ ಗುರುವಾರ ಸರ್ಚ್ ವಾರಂಟ್ ನೊಂದಿಗೆ ದಾಳಿ ನಡೆಸಲಾಗಿದೆ.
ಬೆಂಗಳೂರು, ಕನಕಪುರ ಮತ್ತು ರಾಮನಗರದ ಒಟ್ಟು ಐದು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಸಿಬಿಐ ಆಧಿಕಾರಿಗಳು ಕೆಲವೊಂದು ದಾಖಲೆಗಳನ್ನು ವಶಪಡಿಸಿ ಕೊಂಡಿದ್ದಾರೆ. ನೋಟು ಅಮಾನ್ಯ ಸಂದರ್ಭದಲ್ಲಿ ಮತದಾರರಿಗೆ ಗೊತ್ತಿಲ್ಲದೇ ಅವರ ಗುರುತಿನ ಚೀಟಿ ತಯಾರಿಸುವಲ್ಲಿ ಹಾಗೂ ನೋಟು ಬದಲಾವಣೆಯಲ್ಲಿ ಬ್ಯಾಂಕ್ ವ್ಯವಸ್ಥಾಪಕ ಸೇರಿ ಅಧಿಕಾರಿಗಳು ಶಾಮೀಲಾಗಿದ್ದರು ಎಂದು 2017 ಏಪ್ರಿಲ್ 7ರಂದು ಪ್ರಕರಣ ದಾಖಲಿಸಲಾಗಿತ್ತು. ಮುಂದುವರಿದ ಭಾಗವಾಗಿ ದಾಳಿ ನಡೆಸಲಾಗಿದೆ ಎಂದು ಸಿಬಿಐ ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ?: 2016ರ ನೋಟು ಅಮಾನ್ಯಿಕರಣ ಬಳಿಕ 2017ರ ಏಪ್ರಿಲ್ 7ರಂದು ರಾಮನಗರದ ಕಾರ್ಪೊರೇಷನ್ ಬ್ಯಾಂಕ್ ಶಾಖೆಯ ಮುಖ್ಯ ವ್ಯವಸ್ಥಾಪಕ ಬಿ.ಪ್ರಕಾಶ್ ಆರ್ಬಿಐ ಮಾರ್ಗಸೂಚಿ ಪಾಲಿಸದೆ 10ಲಕ್ಷ ರೂ. ಹಣವನ್ನು ವಿನಿಮಯ ಮಾಡಿದ್ದರು. ಈ ಸಂಬಂಧ ಸಿಬಿಐ ಪ್ರಕರಣ ದಾಖಸಿಕೊಂಡು ತನಿಖೆ ಕೈಗೊಂಡಿತ್ತು. ಈ ವೇಳೆ ಸಂಸದ ಡಿ.ಕೆ.ಸುರೇಶ್ ಅವರ ಆಪ್ತ ಸಹಾಯಕ ಪದ್ಮನಾಭಯ್ಯ ಅವರು ಕನಕಪುರ ಉಪ ತಹಶೀಲ್ದಾರ್, ಚುನಾವಣಾ ವಿಭಾಗದ ಅಧಿಕಾರಿ ಶಿವಾನಂದ ಹಾಗೂ ಗುಮಾಸ್ತ ನಂಜಪ್ಪ ಹಾಗೂ ಇತರರ ಜತೆ ಸೇರಿ ಅಕ್ರಮ ಎಸಗಿರುವುದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಈ ಮೂವರು ವ್ಯಕ್ತಿಗಳಿಗೆ ಸೇರಿದ ಐದು ಕಡೆಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಡಿ.ಕೆ.ಸುರೇಶ್ ಆಪ್ತ ಪದ್ಮನಾಭಯ್ಯ ಹಾಗೂ ಕಾರ್ಪೊರೇಷನ್ ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕ ಪ್ರಕಾಶ್ ಆಪ್ತರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಕನಕಪುರ ತಹಶೀಲ್ದಾರ್ ಕಚೇರಿ ಚುನಾವಣಾ ವಿಭಾಗದ ಅಧಿಕಾರಿ ಶಿವಾನಂದ ಮತ್ತು ಗುಮಾಸ್ತ ನಂಜಪ್ಪ ತಮ್ಮ ಅಧಿಕಾರ ಬಳಸಿ ಚುನಾವಣಾ ಗುರುತಿನ ಚೀಟಿಗಳು, ಚಾಲನಾ ಪರವಾನಿಗೆಗಳನ್ನು ಅಕ್ರಮಕ್ಕೆ ಬಳಸಿಕೊಂಡಿದ್ದರು. ಸುಮಾರು 120 ಗುರುತಿನ ಚೀಟಿಗಳನ್ನು ಅಕ್ರಮವಾಗಿ ಮುದ್ರಿಸಿ, 2016 ನ.10 ಮತ್ತು 11ರಲ್ಲಿ ತಹಶೀಲ್ದಾರ್ ಅವರ ಲಾಗಿನ್ ಐಡಿ ಬಳಸಿ ಹಾಲೋಗ್ರಾಮ್ಸ್ ಬಳಸಿದ್ದಾರೆ. ಇದನ್ನು ಪದ್ಮನಾಭಯ್ಯ ಮತ್ತು ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕ ಪ್ರಕಾಶ್ಗೆ ನೀಡಿದ್ದರು. ಇದರಿಂದ ಪ್ರಕಾಶ್ 250 ನಕಲಿ ರಸೀದಿಗಳನ್ನು ಸೃಷ್ಟಿಸಿ 10 ಲಕ್ಷ ರೂ. ಹಳೇ ನೋಟುಗಳನ್ನು ಬದಲಾಯಿಸಿಕೊಟ್ಟಿದ್ದಾರೆ. ಅಲ್ಲದೆ, ಪದ್ಮನಾಭಯ್ಯ ಅವರು ಶೇಷಗಿರಿ ಹಾಗೂ ಇತರೆ ವ್ಯಕ್ತಿಗಳನ್ನು ಬಳಸಿಕೊಂಡು ನಕಲಿ ಮನವಿ ಸ್ವೀಕರಿಸಿ ಬ್ಯಾಂಕಿಗೆ ಸಲ್ಲಿಸಿ ನೋಟು ಬದಲಾವಣೆ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು.
ಈ ಹಿಂದೆ ಐಟಿ ದಾಳಿನಡೆದಿತ್ತು: 2017 ಆಗಸ್ಟ್ 4 ರಂದು ಡಿ.ಕೆ.ಶಿವಕುಮಾರ್ ಅವರ ಬೆಂಗಳೂರಿನ ನಿವಾಸ ಹಾಗೂ ಕನಕಪುರದ ನಿವಾಸ, ಡಿ.ಕೆ.ಸುರೇಶ್ ಅವರ ಸದಾಶಿವನಗರ ನಿವಾಸ ಹಾಗೂ ಅವರ ಆಪ್ತರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ದಾಳಿ ನಡೆಸಲಾಗಿತ್ತು. ಸತತ ಐದು ದಿನಗಳ ಕಾಲ ದಾಳಿ ನಡೆದು ಕೋಟ್ಯಂತರ ರೂ. ನಗದು ಹಾಗೂ ಆಸ್ತಿ ದಾಖಲೆ ವಶಕ್ಕೆ ಪಡೆಯಲಾಗಿತ್ತು. ಬುಧವಾರವೂ ಪ್ರಕರಣ ಸಂಬಂಧ ಡಿ.ಕೆ. ಶಿವಕುಮಾರ್ ಸಿಬಿಐ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಬೆದರಿಕೆಗೆ ನಾವು ಬಗ್ಗುವುದಿಲ್ಲ
ನಾವು ಯಾವುದೇ ಕಾರಣಕ್ಕೂ ಬಿಜೆಪಿಗೆ ಶರಣಾಗುವುದಿಲ್ಲ. ನಾವೂ ಕಾನೂನು ಹೋರಾಟ ನಡೆಸುತ್ತೇವೆ ಎಂದರು. ಡಿಕೆ ಸೋದರರ ವಿರುದಟಛಿ ಸಿಬಿಐ ವಾರೆಂಟ್ ಬಂದಿದೆ ಎಂಬ ಸುದ್ದಿ ತಿಳಿದು, ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಅವರ ಮನೆ ಎದುರು ಜಮಾಯಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲಿಯೇ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಆದರೆ, ಸಿಬಿಐ ಸರ್ಚ್ ವಾರೆಂಟ್ ಹೊರಡಿಸಿರುವ ಮಾಹಿತಿ ಸೋರಿಕೆಯಾಗಿದ್ದು, ಹೇಗೆ ಎಂಬುದು ಖುದ್ದು ಸಿಬಿಐ ಅಧಿಕಾರಿಗಳಲ್ಲೇ ಅಚ್ಚರಿ ಮೂಡಿಸಿದೆ. ಏಕೆಂದರೆ, ದಾಳಿಗೆ ಮುನ್ನವೇ ಡಿ.ಕೆ.ಶಿವಕುಮಾರ್ ಸರ್ಚ್ ವಾರೆಂಟ್ನ ನಿಖರ ಮಾಹಿತಿ ಲಭಿಸಿತ್ತು. ಹೀಗಾಗಿ ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿದೆ ಎಂದು ಹೇಳಲಾಗಿದೆ. ಈ ಮಧ್ಯೆ, ಸಂಸದ ಮುದ್ದುಹನುಮೇಗೌಡ ಕೂಡ ಪತ್ರಿಕಾಗೋಷ್ಠಿ ನಡೆಸಿ, ಡಿ.ಕೆ. ಸಹೋದರರು ಕಾಂಗ್ರೆಸ್ನ ಶಕ್ತಿಯಾಗಿದ್ದು, ಇಬ್ಬರನ್ನು ಮಣಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇದೇ ರೀತಿ ತೃಣಮೂಲ ಕಾಂಗ್ರೆಸ್ನ ಸುದೀಪ್ ಬಂಡೋಪಾಧ್ಯಾಯ ಅವರ ಮೇಲೆ ಕೇಂದ್ರ ಸರ್ಕಾರ ಸಿಬಿಐ ಅಸ್ತ್ರ ಬಳಸಿ, ಮೂರು ತಿಂಗಳು ಕಿರುಕುಳ ನೀಡಿದ್ದರು. ಡಿ.ಕೆ. ಸುರೇಶ್ ಹಾಗೂ ಶಿವಕುಮಾರ್ ಪ್ರಬಲರಾಗಿದ್ದಾರೆ. ಕೇಂದ್ರದ ಯಾವುದೇ ದಾಳಿಯನ್ನು ಎದುರಿಸುವ ಶಕ್ತಿ ಅವರಿಗಿದೆ. ಅವರು ಯಾವುದೇ ಕಾನೂನು ವಿರೋಧಿ ಕೆಲಸ ಮಾಡಿಲ್ಲ. ಕೇಂದ್ರ ಸರ್ಕಾರ ಪ್ರತಿಪಕ್ಷಗಳ ನಾಯಕರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಸಂಸತ್ತಿನಲ್ಲಿಯೂ ಈ ವಿಷಯ ಪ್ರಸ್ತಾಪಿಸುವುದಾಗಿ ಅವರು ಹೇಳಿದರು.
ಸಿಬಿಐ ಸರ್ಚ್ ವಾರೆಂಟ್ ಹೊರಡಿಸಿರುವ ವಿಚಾರಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಸಿಬಿಐ ಕೇಂದ್ರ ಸರ್ಕಾರದ
ಅಧೀನದಲ್ಲಿರುವುದು. ಅದು ಕೇಂದ್ರ ಸರ್ಕಾರ ಮತ್ತು ಡಿಕೆ ಸೋದರರಿಗೆ ಬಿಟ್ಟ ವಿಚಾರ.
● ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಕೇಂದ್ರ ಸರ್ಕಾರ ಸಿಬಿಐ ಮೂಲಕ ಕಾಂಗ್ರೆಸ್ ನವರನ್ನೇ ಟಾರ್ಗೆಟ್ ಮಾಡುತ್ತಿದೆ. ದುರುದ್ದೇಶ ಪೂರ್ವಕವಾಗಿ ಟಾರ್ಗೆಟ್ ಮಾಡಿದರೆ ಕಾನೂನಿನ ಬಲ ಇರುವುದಿಲ್ಲ. ಬಿಜೆಪಿಯವರು ಇದರಲ್ಲಿ ಯಶಸ್ವಿಯಾಗುವುದಿಲ್ಲ.
● ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
2 017 ಆಗಸ್ಟ್ 4ರಂದು ಕೇಂದ್ರ ತೆರಿಗೆ ಇಲಾಖೆ ಡಿ.ಕೆ. ಶಿವಕುಮಾರ್ ಅವರ ಕನಕ ಪುರ ನಿವಾಸ, ಸದಾಶಿವನಗರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿತ್ತು.
ವರ್ಷ ತುಂಬುವುದರೊಳಗೇ ಇದೀಗ ಡಿಕೆಶಿಗೆ ಸಿಬಿಐ ಅಧಿಕಾರಿಗಳಿಂದ ಶಾಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
MUST WATCH
ಹೊಸ ಸೇರ್ಪಡೆ
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್