ಪ್ರತಿಷ್ಠಿತ ಕೊರಿಯರ್ ಸಂಸ್ಥೆಗಳ ಹೆಸರು ಬಳಸಿ ಜನರಿಗೆ ಮೋಸ: ನಾಲ್ವರ ಬಂಧನ
Team Udayavani, Jul 21, 2022, 9:53 AM IST
ಬೆಂಗಳೂರು: ನಗರದ ಪ್ರತಿಷ್ಠಿತ ಕೊರಿಯರ್ ಸಂಸ್ಥೆಗಳ ವೆಬ್ಪೇಜ್ನಲ್ಲಿ ತಮ್ಮ ಮೊಬೈಲ್ ನಂಬರ್ ಹಾಗೂ ವಿಳಾಸದ ಜಾಹೀರಾತು ನೀಡಿ ದೂರದ ಊರುಗಳಿಗೆ ವಾಹನಗಳನ್ನು ಸಾಗಾಟ ಮಾಡುವುದಾಗಿ ಕೊಂಡೊಯ್ದು ಬಳಿಕ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರು ಅಂತಾರಾಜ್ಯ ವಂಚಕರನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ಪೂರನ್ ಸಿಂಗ್ ಚೌವ್ಹಾಣ್(25), ನರೇಂದ್ರ (32), ಧರ್ಮೇಂದರ್(21) ಹಾಗೂ ಹರಿಯಾಣ ಮೂಲದ ಧರ್ಮವೀರ್(24) ಬಂಧಿತರು.
ಇತ್ತೀಚೆಗೆ ದೂರುದಾರರ ರಾಯಲ್ ಎನ್ಫೀಲ್ಡ್ ಬುಲೆಟ್ ಅನ್ನು ಬೆಂಗಳೂರಿನಿಂದ ಹುಬ್ಬಳ್ಳಿಗೆ ದೂರುದಾರರು ಕಳುಹಿಸಲು ಗೂಗಲ್ನಲ್ಲಿ ಸಿಕ್ಕ ಪ್ರತಿಷ್ಠಿತ ಕೊರಿಯರ್ ಸಂಸ್ಥೆಯ ವೆಬ್ಪೇಜ್ನಲ್ಲಿ ದೊರೆತ ಮೊಬೈಲ್ ನಂಬರ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೆಲ ಹೊತ್ತಿನ ಬಳಿಕ 4 ಸಾವಿರ ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಬಳಿಕ ಮನೆಗೆ ಬಂದು ಬುಲೆಟ್ ಪ್ಯಾಕ್ ಮಾಡಿಕೊಂಡು ಹೋಗಿದ್ದು, ನಂತರ ಬುಲೆಟ್ ಡೆಲಿವರಿ ಮಾಡಿಲ್ಲ. ನಂತರ ವಾಹನ ಕೊಂಡೊಯ್ದ ವ್ಯಕ್ತಿಗೆ ಕರೆ ಮಾಡಿದಾಗ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟು ಪಡೆದುಕೊಂಡಿದ್ದಾನೆ. ಹೀಗೆ ಎರಡ್ಮೂರು ಬಾರಿ ಹಣ ಪಡೆದುಕೊಂಡಿದ್ದರು. 20 ದಿನಗಳು ಕಳೆದರೂ ಬುಲೆಟ್ ಡೆಲಿವರಿ ಮಾಡಿಲ್ಲ. ಈ ಸಂಬಂಧ ಸೆನ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಎಲೆಕ್ಟ್ರಾನಿಕ್ ಸಿಟಿ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.
ಇದನ್ನೂ ಓದಿ: ಮುಖ್ಯಮಂತ್ರಿಗಳ ದೆಹಲಿ ಪ್ರವಾಸ: ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಸಾಧ್ಯತೆ
ಪ್ರತಿಷ್ಠಿತ ಸಂಸ್ಥೆಗಳ ಹೆಸರಿನಲ್ಲಿ ಜಾಹೀರಾತು
ಆರೋಪಿಗಳು ಹೆಸರಾಂತ ಕೋರಿಯರ್ ಸಂಸ್ಥೆಗಳಾದ ಗತಿ, ವಿಆರ್ಎಲ್ ಹಾಗೂ ಇತರೆ ಪ್ರತಿಷ್ಠಿತ ಸಂಸ್ಥೆಗಳ ಹೆಸರಿನ ಗೂಗಲ್ ವೆಬ್ಪೇಜ್ನಲ್ಲಿ ತಮ್ಮ ಮೊಬೈಲ್ ನಂಬರ್ ಹಾಗೂ ವಿಳಾಸ ಉಲ್ಲೇ ಖೀಸಿ ಜಾಹೀರಾತು ನೀಡುತ್ತಿದ್ದರು. ಸಾರ್ವಜನಿಕರು ಕೋರಿ ಯರ್ ಕಳುಹಿಸಲು ಗೂಗಲ್ನಲ್ಲಿ ಶೋಧಿಸಿದಾಗ ಆರೋಪಿಗಳ ಮೊಬೈಲ್ ಸಂಖ್ಯೆ ಸಿಗುತ್ತಿತ್ತು. ಈ ಸಂಖ್ಯೆಗೆ ಕರೆ ಮಾಡಿದಾಗ, ವಾಹನಗಳನ್ನು ನಿಗದಿತ ಸ್ಥಳಕ್ಕೆ ಸಾಗಿಸುವುದಾಗಿ ಮನೆಗಳಿಗೆ ಬಂದು ವಾಹನವನ್ನು ಪ್ಯಾಕ್ ಮಾಡಿಕೊಂಡು ಹೋಗುತ್ತಿದ್ದರು. ಬಳಿಕ ವಾಹನ ಸಾಗಿಸದೆ ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸುತ್ತಿದ್ದರು. ತಾವು ಕೇಳಿದಷ್ಟು ಹಣ ನೀಡಿದ ಬಳಿಕ ವಾಹನವನ್ನು ನಿಜವಾದ ಕೋರಿಯರ್ ಸಂಸ್ಥೆಗೆ ವಾಹನ ತಲುಪಿಸುತ್ತಿ ದ್ದರು. ಬಳಿಕ ಕೋರಿಯರ್ ಸಂಸ್ಥೆಯವರು ವಾಹನ ಡೆಲಿವರಿ ನೀಡಿ, ಸಂಬಂಧಪಟ್ಟವರಿಂದ ಹಣ ಪಡೆಯುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿಗಳು ನಗರದ ಹಲವೆಡೆ ಇದೇ ಮಾದರಿಯಲ್ಲಿ ಹಲವರಿಗೆ ವಂಚಿಸಿರುವ ಸಾಧ್ಯತೆಯಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಮಾರ್ಗದರ್ಶನದಲ್ಲಿ ಸೆನ್ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ರಾಮ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.