ರಾಸಾಯನಿಕ ಸಿಂಪಡಿಸಿ ಜಾಗೃತಿ ಮೂಡಿಸಿದ ಶಾಸಕರು
Team Udayavani, Mar 23, 2020, 3:03 AM IST
ಬೆಳಗಾವಿ: ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಗಡಿ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದ್ದು, ಇಲ್ಲಿಯ ಇಬ್ಬರು ಶಾಸಕರು ಸಾರ್ವಜನಿಕ ಸ್ಥಳಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದರು.
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಬೆಳಗ್ಗೆ 6ರಿಂದ 6:45ರವರೆಗೆ ತಮ್ಮ ತಂಡದ ಸದಸ್ಯರ ಜತೆ ಛತ್ರಪತಿ ಶಿವಾಜಿ ಉದ್ಯಾನವನ ಸೇರಿದಂತೆ ವಿವಿಧ ಸ್ಥಳಗಳಲ್ಲಿ ರಾಸಾಯನಿಕ ಸಿಂಪಡಿಸಿ ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.
ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಅವರು ಬಸ್ ನಿಲ್ದಾಣ, ಬಸ್ ತಂಗುದಾಣ ಮೊದಲಾದ ಪ್ರದೇಶಗಳಲ್ಲಿ ಕೊರೊನಾ ವೈರಸ್ ತಡೆಗಟ್ಟಲು ಕ್ಲೋರಿನೇಶನ್ ಮಾಡಿ ಜನರಲ್ಲಿ ವೈರಸ್ ಬಗ್ಗೆ ಜಾಗೃತರಾಗಿರುವಂತೆ ಅರಿವು ಮೂಡಿಸಿದರು.