ಚಿಕ್ಕಮಗಳೂರಿನ ಸಮಗ್ರ ಅಭಿವೃದ್ಧಿಗೆ ನಾನು ಬದ್ಧ: ಸಿಎಂ ಬೊಮ್ಮಾಯಿ
ಪುನರ್ ಪರಿಶೀಲನೆ ಮಾಡಿ ನೈಜ ಪ್ರವಾಹ ಸಂತ್ರಸ್ತರಿಗೆ ಶೀಘ್ರ ಪರಿಹಾರ: ಸಿಎಂ
Team Udayavani, May 18, 2022, 6:24 PM IST
ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ಅನೇಕ ಬಾರಿ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಬರಲಾಗಿರಲಿಲ್ಲ. ಈ ದಿನ ಮಳೆ ಇದ್ದರೂ ಕೂಡ ಚಿಕ್ಕಮಗಳೂರಿಗೆ ಬಂದಿದ್ದೇನೆ. ಚಿಕ್ಕಮಗಳೂರಿನ ಸಮಗ್ರ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ಇಡೀ ರಾಜ್ಯಕ್ಕೆ ನಿಸರ್ಗವನ್ನು ಹಂಚುವಂತಹ ಶಕ್ತಿ ಚಿಕ್ಕಮಗಳೂರಿಗಿದೆ ಹಾಗಾಗಿ, ವಿಶೇಷವಾಗಿ ಸಮಗ್ರ ಅಭಿವೃದ್ಧಿ ಜೊತೆಗೆ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುತ್ತೇನೆ ಎಂದು ಸಿಎಂ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, 2019ರ ಪ್ರವಾಹದ ಸಂತ್ರಸ್ತರಿಗೆ ಪರಿಹಾರ ಸಿಗದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಮೂಡಿಗೆರೆ ಕ್ಷೇತ್ರದ ಸಮಸ್ಯೆಯನ್ನು ವಿಶೇಷವಾಗಿ ಗಮನಿಸುತ್ತೇನೆ. ವರದಿ ತೆಗೆದುಕೊಂಡು ನ್ಯಾಯಸಮ್ಮತವಾಗಿ ಪರಿಹಾರ ನೀಡಲು ಸೂಚಿಸುತ್ತೇನೆ. ಬೆಳಗಾವಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಇದೇ ರೀತಿ ಸಮಸ್ಯೆಯಾಗಿತ್ತು. ಪುನರ್ ಪರಿಶೀಲನೆ ಮಾಡಿ ನೈಜ ಸಂತ್ರಸ್ತರಿಗೆ ಪರಿಹಾರ ಕೊಡುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ನಾವು ವಿವೇಕಾನಂದರ ವಂಶಸ್ಥರೇ ವಿನಃ ಮೊಘಲರ ವಂಶಸ್ಥರಲ್ಲ: ಸುನಿಲ್ ಕುಮಾರ್
ರಾಜಧಾನಿಯ ಮಳೆ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನಲ್ಲಿ ಅತಿ ಹೆಚ್ಚು ಮಳೆಯಾಗಿರುವುದರಿಂದ ಸ್ವಲ್ಪ ತೊಂದರೆಯಾಗಿದೆ. ಕೆಲವು ಏರಿಯಾಗಳಿಗೆ ಖುದ್ದು ನಾನೇ ಭೇಟಿಯಾಗಿದ್ದೇನೆ. ಇನ್ನು ಎರಡು ದಿನ ಮಳೆಯ ಮುನ್ಸೂಚನೆ ಇದೆ. ಅಗತ್ಯ ಮುನ್ನೆಚ್ಚರಿಕೆಯನ್ನು ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಮುಂಗಾರು ಆರಂಭವಾಗಿದ್ದರಿಂದ ರೈತರು ಕೃಷಿ ಚಟುವಟಿಕೆಗಳಿಗೆ ಸನ್ನದ್ಧರಾಗಿದ್ದಾರೆ. ಅಗತ್ಯ ಗೊಬ್ಬರದ ದಾಸ್ತಾನು ಬಗ್ಗೆ ಕೇಂದ್ರದ ಸಚಿವರೊಂದಿಗೆ ಜೊತೆ ಮಾತನಾಡಿದ್ದೇನೆ ಎಂದರು.