ಸಿಎಂ ಬೊಮ್ಮಾಯಿಗೆ ಮಾನವೀಯತೆ ಮರುತು ಹೋಗಿದೆ : ಪ್ರಿಯಾಂಕ್ ಖರ್ಗೆ
ಮಕ್ಕಳಿಗೆ ಶೂ,ಸಾಕ್ಸ್ ಕೊಡುವ ಹಣದಲ್ಲಿ 40% ಕಮಿಷನ್ ಹೊಡೆಯಬೇಡಿ
Team Udayavani, Jul 9, 2022, 2:27 PM IST
ಬೆಂಗಳೂರು: ಕೋವಿಡ್ ಸಮಯದಲ್ಲಿ ಭಿಕ್ಷೆ ಎತ್ತಿದ್ದ ಹಣ ಎಲ್ಲಿ ಹೋಯಿತು ಎಂಬ ಸಿಎಂ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರ ಹಾಕಿದ್ದು, ‘ಸಿಎಂಗೆ ಮಾನವೀಯತೆ ಮರುತು ಹೋಗಿದೆ’ ಎಂದಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಬಿಜೆಪಿಯವರು ಮಾಡಿದ್ದೇನು? ಮೊದಲನೇ,ಎರಡನೇ ಅಲೆ ವೇಳೆ ಕಾರ್ಮಿಕರು, ಬಡವರು ಅವರವರ ಊರಿಗೆ ಹೋಗಬೇಕು ಅಂದರೆ ಇವರು ಬಸ್ ದರ ಎಷ್ಟು ಮಾಡಿದರು? ಇಲ್ಲಿಂದ ಹೋಗಿ ಬಸ್ ವಾಪಸ್ ಬರುತ್ತೆ ಅಂತ ಅದಕ್ಕೂ ಚಾರ್ಜ್ ಮಾಡಿದರು. ಮರೆತು ಹೋಗಿದ್ದಾರಾ ಸಿಎಂ, ನಿಮ್ಮ ಸರ್ಕಾರ ಏನು ಮಾಡಿತ್ತು ಅಂತ.ಆಗ ನಾವು ಎಲ್ಲರೂ ಹೋಗಿ ಹಣ ಸಂಗ್ರಹ ಮಾಡಿ, ಒಂದು ಕೋಟಿ ರೂ ಕೆಎಸ್ಆರ್ ಟಿಸಿಗೆ ಕೊಡುವುದಕ್ಕೆ ಹೋದಾಗ, ಅವರಿಗೆ ನಾವು ಮಾನವೀಯತೆ ತೋರಿಸಬೇಕು, ಇಲ್ಲ ಅಂದರೆ ಕೆಟ್ಟ ಹೆಸರು ಬರುತ್ತದೆ ಎಂದು ಉಚಿತ ಮಾಡಿದರು. ನಾವು ಅಲ್ಲಿಗೆ ಹೋಗಿ ಒಂದು ಕೋಟಿ ರೂ. ಚೆಕ್ ನಿಮ್ಮ ಮುಖಕ್ಕೆ ಎಸೆದ ಮೇಲೆ ನೀವು ಉಚಿತವಾಗಿ ಕರೆದುಕೊಂಡು ಹೋಗಲು ಮುಂದಾದಿರಿ ಎಂದು ಕಿಡಿ ಕಾರಿದರು.
ಪಠ್ಯಪುಸ್ತಕ, ಶೂ ಸಾಕ್ಸ್ ಯಾಕೆ ಸರ್ಕಾರ ಕೊಟ್ಟಿಲ್ಲ. ಪ್ರತಿ ವರ್ಷ ಕೊಡುವುದು ಅಲ್ಲವೇ? ಇತಿಹಾಸ ತಿರುಚಿರುವರಿಗೆ ಮಹನೀಯರಿಗೆ ಅವಮಾನ ಮಾಡಿದವರಿಗೆ 150 ಕೋಟಿ ಖರ್ಚು ಮಾಡಲು ತಯಾರಿ ಇದ್ದೀರಿ. ಮಕ್ಕಳಿಗೆ ಶೂ ಬಾಕ್ಸ್ ,ಸಾಕ್ಸ್ ಕೋಡುವುದಕ್ಕೆ 132 ಕೋಟಿ ಇಲ್ಲವೇ? ಚಕ್ರತೀರ್ಥ ಮೇಲೆ ಇರುವ ಪ್ರೀತಿ ಶಾಲೆ ಮಕ್ಕಳ ಮೇಲೆ ಯಾಕೆ ಇಲ್ಲ? ಏನು ಸಮಸ್ಯೆ ನಿಮಗೆ ? ಮಕ್ಕಳು ಪ್ರತಿ ಬಾರಿಯೂ ಪಡೆಯಬೇಕಾ? ಸರ್ಕಾರಕ್ಕೆ ಯೋಗ್ಯತೆ ಇಲ್ಲವೇ? ದಯವಿಟ್ಟು ಬಿಡುಗಡೆ ಮಾಡಲಿರುವ 132 ಕೋಟಿ ಹಣದಲ್ಲಿ 40% ಕಮಿಷನ್ ಹೊಡೆಯಬೇಡಿ ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.