ಉಮೇಶ್ ಕತ್ತಿ ನಿಧನಕ್ಕೆ ಸದನದಲ್ಲಿ ಕಂಬನಿ ಮಿಡಿದ ಸಿಎಂ ಬೊಮ್ಮಾಯಿ
Team Udayavani, Sep 12, 2022, 2:29 PM IST
ಬೆಂಗಳೂರು: ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಸೇರಿ ಅಗಲಿದ ಗಣ್ಯರಿಗೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಸೋಮವಾರ ಸಂತಾಪ ಸೂಚಿಸಲಾಗಿದ್ದು, ಸಚಿವ ಉಮೇಶ್ ಕತ್ತಿ ಅವರ ನಿಧನಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.
ಕತ್ತಿ ಅವರ ಅಗಲುವಿಕೆಯ ಬಗ್ಗೆ ಮಾತನಾಡಿದ ಬೊಮ್ಮಾಯಿ, “ಅತ್ಯಂತ ದುಃಖ ಹಾಗೂ ಭಾರದ ಮನಸ್ಸಿನಿಂದ ನಾನು ಈ ಕಲಾಪದಲ್ಲಿ ಭಾಗಿಯಾಗುತ್ತಿದ್ದೇನೆ. ಎಲ್ಲವೂ ಸರಿಯಾಗಿದ್ದರೆ ಕತ್ತಿಯವರು ಈ ಸದನದ ಮೊದಲನೇ ಸಾಲಿನಲ್ಲಿ ಇರಬೇಕಿತ್ತು. ಆದರೆ ವಿಧಿ ಸಂಕಲ್ಪ ಬೇರೆಯದೇ ಇತ್ತು” ಎಂದು ಬೇಸರ ವ್ಯಕ್ತಪಡಿಸಿದರು.
ಕತ್ತಿ ಅತ್ಯಂತ ಕ್ರಿಯಾಶೀಲ, ವರ್ಣರಂಜಿತ ರಾಜಕಾರಣಿ. 25 ನೇ ವರ್ಷಕ್ಕೆ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ನನ್ನ ಕಿಸೆಯಲ್ಲಿ ಎಲ್ಲಾ ಪಕ್ಷದ ಬಿ.ಫಾರ್ಮ್ ಇದೆ.ಯಾವುದೋ ಬೇಕೋ ಅದನ್ನು ನಾನು ಆರಿಸಿಕೊಳ್ಳುತ್ತೇನೆ ಎಂದು ಚಟಾಕಿ ಹಾರಿಸುತ್ತಿದ್ದರು. ಉತ್ತರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಅವರು ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಿದ್ದರು. ಆದರೆ ವಾಸ್ತವದಲ್ಲಿ ಅವರಿಗೆ ರಾಜ್ಯ ವಿಭಜನೆ ಬಗ್ಗೆ ಒಲವಿರಲಿಲ್ಲ ಎಂದರು.
ಎಂ.ರಘುಪತಿ, ಪ್ರಭಾಕರ್ ರಾಣೆ, ಸಿ.ಯಾದವ್, ಕೆಂಪೇಗೌಡ, ಜಿ.ವಿ.ಶ್ರೀರಾಮರೆಡ್ಡಿ, ಸಿ.ಎಂ.ದೇಸಾಯಿ, ಎ.ಜಿ.ಕೊಡ್ಗಿ,ಈಶಣ್ಣ ಗುಳಗಣ್ಣನವರ, ಶಿವಮೊಗ್ಗ ಸುಬ್ಬಣ್ಣ ಅವರಿಗೆ ಈ ಸಂದರ್ಭದಲ್ಲಿ ಸಂತಾಪ ಸೂಚಿಸಲಾಯಿತು.