ಕೆರೆಗಳ ಸಮಗ್ರ ಅಭಿವೃದ್ಧಿ: ನಿರ್ಮಲಾ ಸೀತಾರಾಮನ್
Team Udayavani, May 16, 2022, 1:49 AM IST
ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವಿವಾರ ಕಾಳೇನ ಅಗ್ರಹಾರ ಕೆರೆಗೆ ಭೇಟಿ ನೀಡಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಕುರಿತಂತೆ ಪರಿಶೀಲನೆ ನಡೆಸಿದರು. ಕೆರೆಯಂಗಳದಲ್ಲಿ ಸಸಿ ನೆಟ್ಟು ಕೆರೆ ಅಭಿವೃದ್ಧಿ ಕಾರ್ಯವನ್ನು ವೀಕ್ಷಿಸಿದರು.
ಸಂಸತ್ ಸದಸ್ಯರ ಹಾಗೂ ರಾಜ್ಯ ಸರಕಾರದ ಅನುದಾನದಲ್ಲಿ ಈ ಕೆರೆಯಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ. ಕೆರೆ ಹೂಳು ತೆಗಯುವುದು, ದಂಡೆ ನಿರ್ಮಾಣ, ಕೊಳಚೆ ನೀರು ತಿರುವುಗಾಲುವೆ ಸೇರಿದಂತೆ ಮತ್ತಿತರರ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಕುರಿತಂತೆ ಸ್ಥಳದಲ್ಲಿದ್ದ ಪಾಲಿಕೆಯ ಹಿರಿಯ ಅಧಿಕಾರಿಗಳಿಂದ ನಿರ್ಮಲಾ ಸೀತಾರಾಮನ್ ಅವರು ಮಾಹಿತಿ ಪಡೆದರು. ಕೆರೆಗಳ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಸಚಿವೆ ಹೇಳಿದರು.
ಪಾಲಿಕೆಯ ವಲಯ ಆಯುಕ್ತ ಡಾ| ಹರೀಶ್ ಕುಮಾರ್, ವಲಯ ಜಂಟಿ ಆಯುಕ್ತರಾದ ಕೃಷ್ಣಮೂರ್ತಿ ಅವರು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈಗಾಗಲೇ ಕೈಗೆತ್ತಿ ಕೊಳ್ಳಲಾಗಿರುವ ಕೆರೆಯ ಅಭಿವೃದ್ದಿ ಕಾಮಗಾರಿ ಮತ್ತು ಕೆರೆ ವಿಸ್ತೀರ್ಣ ಸೇರಿದಂತೆ ಮತ್ತಿತರ ಪೂರಕ ಮಾಹಿತಿ ನೀಡಿದರು.
3 ಕೋಟಿ ರೂ.ಅನುದಾನದಲ್ಲಿ ಕೆರೆ ಅಭಿವೃದ್ದಿ
ಕಾಳೇನ ಅಗ್ರಹಾರ ಕೆರೆಯನ್ನು ಸಂಸತ್ ಸದಸ್ಯರ ಯೋಜನೆಯಡಿ 75 ಲಕ್ಷ ರೂ. ರಾಜ್ಯ ಸರ್ಕಾರದ 2017-18ನೇ ಸಾಲಿನ ಅನುದಾನ 75 ಲಕ್ಷ ರೂ., ರಾಜ್ಯ ಸರ್ಕಾರದ 2018-19ನೇ ಸಾಲಿನ ಅನುದಾನ 1.5 ಕೋಟಿ ರೂ. ಸೇರಿ 3 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಬೇಗೂರು ವಾರ್ಡ್-192 ವ್ಯಾಪ್ತಿಯ ಸರ್ವೇ ಸಂಖ್ಯೆ 43ರಲ್ಲಿ 7 ಎಕರೆ 30 ಗುಂಟೆ ಪ್ರದೇಶದವನ್ನು ಕಾಳೇನ ಅಗ್ರಹಾರ ಕೆರೆೆ ವ್ಯಾಪಿಸಿಕೊಂಡಿದೆ. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಕೃಷ್ಣಪ್ಪ, ವಲಯ ಮುಖ್ಯ ಇಂಜಿನಿಯರ್ ಶಶಿಕುಮಾರ್, ವಿಜಯ್ ಕುಮಾರ್ ಹರಿದಾಸ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೆರೆಯ ಅಭಿವೃದ್ಧಿ ಕಾಮಗಾರಿಯ ವಿವರ
ಸಂಸದರ ಮತ್ತು ರಾಜ್ಯ ಸರಕಾರದ ಅನುದಾನದಲ್ಲಿ ಕಾಳೇನ ಅಗ್ರಹಾರ ಕೆರೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಕೆರೆ ಹೂಳು ತೆಗಯುವುದು, ದಂಡೆ ನಿರ್ಮಾಣ, ಕೊಳಚೆ ನೀರು ತಿರುವುಗಾಲುವೆ ನಿರ್ಮಾಣ ಕಾರ್ಯ ಕೂಡ ನಡೆದಿದೆ. ಜತೆಗೆ ಕೆರೆಯ ಸುತ್ತಲೂ ತಂತಿ ಬೇಲಿ ನಿರ್ಮಾಣ ಮಾಡಲಾಗಿದ್ದು ವಾಯು ವಿಹಾರಿಗಳಿಗಾಗಿಯೇ 15 ಆಸಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಶೌಚಾಲಯ ವ್ಯವಸ್ಥೆಯನ್ನು ಅಳವಡಿ ಮಾಡಲಾಗಿದೆ.