ಐದೂವರೆ ಗಂಟೆ ಕಡ್ಡಾಯವಾಗಿ ಶಾಲೆ ನಡೆಸಿ; ಶಿಕ್ಷಣ ಇಲಾಖೆ ಸೂಚನೆ
Team Udayavani, Sep 22, 2022, 6:40 AM IST
ಬೆಂಗಳೂರು: ರಾಜ್ಯದಲ್ಲಿರುವ ಎಲ್ಲ ಖಾಸಗಿ ಶಾಲೆಗಳು ಪ್ರತಿ ದಿನ ಐದೂವರೆ ಗಂಟೆ ಮತ್ತು ಶನಿವಾರ ಅರ್ಧ ದಿನ ಶಾಲೆ ನಡೆಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಕರ್ನಾಟಕ ಶಿಕ್ಷಣ ಕಾಯ್ದೆ ಹಾಗೂ ಅದರಡಿ ರಚಿತವಾದ ಕರ್ನಾಟಕ ಶಿಕ್ಷಣ ಸಂಸ್ಥೆಗಳ ವರ್ಗೀಕರಣ, ಪಠ್ಯಕ್ರಮ, ನಿಯಂತ್ರಣ ಮತ್ತು ಇತರೆ ಕಾಯ್ದೆ-1995ರಲ್ಲಿ ನಿಯಮಗಳನ್ನು ಜಾರಿಗೊಳಿಸಿದ್ದು, ಈ ನಿಯಮಗಳ ಪ್ರಕಾರ ಪ್ರತಿ ದಿನ ಐದೂವರೆ ಗಂಟೆ ಶಾಲೆಗಳನ್ನು ಕಡ್ಡಾಯವಾಗಿ ನಡೆಸಬೇಕಿದೆ.
ಆದರೆ, ರಾಜ್ಯದಲ್ಲಿರುವ ಕೆಲವು ಖಾಸಗಿ ಶಾಲೆಗಳು ನೋಂದಣಿ ಮತ್ತು ಮಾನ್ಯತೆಯನ್ನು ಸರ್ಕಾರದಿಂದ ಪಡೆದು ನಿಯಮಗಳನ್ನು ಉಲ್ಲಂಘಿಸಿ ತಮ್ಮ ಮನಬಂದಂತೆ ಶಾಲೆಗಳನ್ನು ಆರಂಭ ಮಾಡುತ್ತಿದ್ದಾರೆ. ಈ ಸಂಬಂಧ ಪೋಷಕರು, ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಅಂತಹ ದೂರುಗಳನ್ನು ಪರಿಶೀಲಿಸಲು ಇಲಾಖೆಯ ಬಿಇಒ, ಬಿಆರ್ಪಿ ಮತ್ತು ಸಿಆರ್ಪಿಗಳಿಗೆ ಸೂಚನೆ ನೀಡಲಾಗಿದೆ.
ಪ್ರಸ್ತುತ ಬೆಂಗಳೂರು ನಗರಕ್ಕೆ ಸೀಮಿತಗೊಳಿಸಿ ಬೆಳಗ್ಗೆ 8ರಿಂದ 8.30ರೊಳಗೆ ಶಾಲೆಯನ್ನು ಆರಂಭಿಸಬೇಕು. ಪ್ರಾರ್ಥನೆಗೆ 10 ನಿಮಿಷ ಹೊರತುಪಡಿಸಿ ಮತ್ತು ಮಧ್ಯಾಹ್ನದ ಉಪಹಾರಕ್ಕೆ 30ರಿಂದ 40 ನಿಮಿಷ ಹೊರತುಪಡಿಸಿ ಐದೂವರೆ ಗಂಟೆ ಕಾಲ ಶಾಲೆಯನ್ನು ನಡೆಸಬೇಕು ಎಂಬ ಆದೇಶವನ್ನು ರಾಜ್ಯಾದ್ಯಂತ ಅಳವಡಿಸಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿ ಸೂಚಿಸಿದ್ದಾರೆ.
ಬಿಆರ್ಪಿ/ಸಿಆರ್ಪಿಗಳಿಗೆ ಎಚ್ಚರಿಕೆ
ಬಿಇಒ, ಸಿಆರ್ಪಿ ಮತ್ತು ಬಿಆರ್ಪಿಗಳು ತಮ್ಮ ವ್ಯಾಪ್ತಿಯಲ್ಲಿರುವ ಶಾಲೆಗಳ ಮೇಲುಸ್ತುವಾರಿ ಪರಿಶೀಲಿಸುವ ಜವಾಬ್ದಾರಿ ನೀಡಲಾಗಿದ್ದರೂ ಸರಿಯಾಗಿ ಕರ್ತವ್ಯ ನಿರ್ವಹಿಸದಿರುವ ಬಗ್ಗೆಯೂ ದೂರುಗಳು ಬಂದಿವೆ. ನಿಯಮಾನುಸಾರ ಕಾರ್ಯ ನಿರ್ವಹಿಸದಿದ್ದರೆ ಇಲಾಖೆ ಪರಿಶೀಲಿಸಿ ತಮ್ಮ ಹುದ್ದೆಗಳನ್ನು ರದ್ದುಪಡಿಸಿದ್ದಲ್ಲಿ ಶಿಕ್ಷಕರಾಗಿ ಮುಂದುವರಿಯಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದೆ.
ಖಾಸಗಿ ಶಾಲೆಗಳು ಅನುಮತಿ ಪಡೆದಿರುವ ಮಾಧ್ಯಮ/ಪಠ್ಯಕ್ರಮದಲ್ಲಿ ಬೋಧನೆ ಮಾಡದೆ ನಿಯಮ ಉಲ್ಲಂ ಸುವ ಶಾಲೆಗಳ ವಿರುದ್ಧ ಕ್ರಮ ವಹಿಸದಿರುವುದು ಕೂಡ ಕೇಳಿ ಬಂದಿದೆ. ಇದು ಮುಖ್ಯಮಂತ್ರಿಗಳ ಗಮನಕ್ಕೂ ಬಂದಿದೆ. ಇಲಾಖೆ ತಲೆ ತಗ್ಗಿಸುವ ಕೆಲಸ ಮಾಡಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪ ನಿರ್ದೇಶಕರು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂಬುದನ್ನು ಸಹ ನಿರ್ದೇಶಕರು ಆಗಿಂದಾಗ್ಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿ ಮೇಲಧಿಕಾರಿಗಳಿಗೆ ವರದಿ ನೀಡಬೇಕು. ಯಾವ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವೋ ಅಂತಹವರ ವಿರುದ್ಧ ಇಲಾಖೆ ಕ್ರಮ ಜರುಗಿಸಲಿದೆ ಎಂದು ಸೂಚನೆ ನೀಡಿದ್ದಾರೆ.