ಸಿಎಎ ವಿರುದ್ಧ ನಿರ್ಣಯಕ್ಕೆ ಸಭಾಪತಿಗೆ ಕಾಂಗ್ರೆಸ್ ಪತ್ರ
Team Udayavani, Mar 4, 2020, 3:03 AM IST
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿಗೆ ರಾಜ್ಯದಲ್ಲಿ ಅವಕಾಶ ನೀಡಬಾರದು ಎಂದು ವಿಧಾನ ಪರಿಷತ್ನಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಸದಸ್ಯರು ಸಭಾಪತಿ ಅವರಿಗೆ ಪ್ರಸ್ತಾವನೆ ರೂಪದ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಪ್ರಸ್ತಾಪಕ್ಕೆ ಕಾಂಗ್ರೆಸ್ನ ಐವರು ಸದಸ್ಯರು ಸಹಿ ಮಾಡಿದ್ದು, ಬುಧವಾರ ಕಲಾಪದಲ್ಲಿ ಈ ವಿಚಾರ ಪ್ರಸ್ತಾಪವಾಗುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ಮಾಹಿತಿ ನೀಡಿದರು. ಸಿಎಎ ಕಾಯಿದೆ ಧರ್ಮದ ಆಧಾರದಲ್ಲಿ ಜಾರಿ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ದೇಶದ ಹಲವು ರಾಜ್ಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ಹೀಗಾಗಿ ಕರ್ನಾಟಕದಲ್ಲೂ ಅವಕಾಶ ನೀಡಬಾರದು ಎಂದು ಕೋರಿದ್ದೇವೆ. ಪ್ರತಿಪಕ್ಷದ ಎಲ್ಲಾ ಸದಸ್ಯರು ಇದಕ್ಕೆ ಬೆಂಬಲ ನೀಡುವ ವಿಶ್ವಾಸವಿದೆ. ವಿಧಾನಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯೂ ಇದೇ ವಿಚಾರವಾಗಿ ನಡೆಯುವ ಸಾಧ್ಯತೆ ಇರಬಹುದು. ಪರಿಷತ್ನಲ್ಲಿ ಈ ವಿಷಯ ಚರ್ಚೆಗೆ ಬಂದ ವೇಳೆ ಇದನ್ನು ಧರ್ಮದ ಆಧಾರದಲ್ಲಿ ಜಾರಿ ಮಾಡಲು ಕೇಂದ್ರ ಮುಂದಾಗಿದೆ. ಈ ಬೆಳವಣಿಗೆ ಸಂವಿಧಾನ ಬಾಹಿರ ಎಂಬುದನ್ನು ವಿವರಿಸಿ ಕಾಯ್ದೆ ಜಾರಿಗೆ ಅವಕಾಶ ನೀಡದಂತೆ ನಿರ್ಣಯ ಕೈಗೊಳ್ಳಲು ಆಗ್ರಹಿಸಲಿದ್ದೇವೆಂದರು.